ಕಂಗನಾ, ‘ಶ್ರೀರಾಮ’ ಗೋವಿಲ್‌, ನ್ಯಾ। ಅಭಿಜೀತ್‌ಗೆ ಬಿಜೆಪಿ ಟಿಕೆಟ್‌

| Published : Mar 25 2024, 12:46 AM IST / Updated: Mar 25 2024, 12:45 PM IST

ಕಂಗನಾ, ‘ಶ್ರೀರಾಮ’ ಗೋವಿಲ್‌, ನ್ಯಾ। ಅಭಿಜೀತ್‌ಗೆ ಬಿಜೆಪಿ ಟಿಕೆಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಮುಂಬರುವ ಲೋಕಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ ಕರ್ನಾಟಕ ಸೇರಿದಂತೆ 17 ರಾಜ್ಯಗಳ 111 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಪ್ರಕಟಿಸಿದೆ.

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ ಕರ್ನಾಟಕ ಸೇರಿದಂತೆ 17 ರಾಜ್ಯಗಳ 111 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಪ್ರಕಟಿಸಿದೆ. 

ಇದರೊಂದಿಗೆ ಈವರೆಗೆ ಬಿಜೆಪಿ 412 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಹೆಸರು ಪ್ರಕಟಿಸಿದಂತೆ ಆಗಿದೆ.ಭಾನುವಾರ ಪ್ರಕಟಿಸಲಾದ ಪಟ್ಟಿಯಲ್ಲಿ ಹಲವು ಕೇಂದ್ರ ಸಚಿವರು, ಪಕ್ಷದ ಹಿರಿಯ ನಾಯಕರು, ಹಾಲಿ ಸಂಸದರು, ಟೀವಿ ನಟರು, ಭಾನುವಾರವಷ್ಟೇ ಬಿಜೆಪಿ ಸೇರಿದವರು ಕೂಡಾ ಸೇರಿದ್ದಾರೆ ಎಂಬುದು ಗಮನಾರ್ಹ. 

ಜೊತೆಗೆ ಕೇಂದ್ರ ಸಚಿವ ಅಶ್ವಿನಿ ಕುಮಾರ್‌ ಚೌಬೆ, ಜ। ವಿ.ಕೆ.ಸಿಂಗ್, ಹಾಲಿ ಸಂಸದರಾದ ಕರ್ನಾಟಕದ ಅನಂತಕುಮಾರ ಹೆಗಡೆ, ವರುಣ್‌ ಗಾಂಧಿ ಅವರಿಗೆ ಕೊಕ್‌ ನೀಡಿದೆ.

ಟೀವಿ ರಾಮಾಯಣದ ರಾಮಗೆ ಟಿಕೆಟ್‌: ದಶಕಗಳ ಹಿಂದೆ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ರಾಮಾಯಣದ ರಾಮನ ಪಾತ್ರದಾರಿ ಅರುಣ್‌ ಗೋವಿಲ್‌ಗೆ ಉತ್ತರಪ್ರದೇಶದ ಮೇರಠ್‌ನಿಂದ ಟಿಕೆಟ್‌ ನೀಡಲಾಗಿದೆ.

ನಟಿ ಕಂಗನಾಗೆ ಮಂಡಿ ಭಾಗ್ಯ: ಖ್ಯಾತ ನಟಿ ಮತ್ತು ಬಿಜೆಪಿ ಸರ್ಕಾರದ ಪರ ಸದಾ ಬೆಂಬಲವಾಗಿ ನಿಲ್ಲುವ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟಿ ಕಂಗನಾ ರಾಣಾವತ್‌ ಅವರಿಗೆ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಲ್ಲಿ ಟಿಕೆಟ್‌ ನೀಡಲಾಗಿದೆ.

ಮನೇಕಾಗೆ ಟಿಕೆಟ್‌, ವರುಣ್‌ಗೆ ಕೊಕ್‌: ಕೇಂದ್ರ ಸಚಿವೆ ಮನೇಕಾ ಗಾಂಧಿ ಅವರಿಗೆ ನಿರೀಕ್ಷೆಯಂತೆ ಉತ್ತರಪ್ರದೇಶದ ಸುಲ್ತಾನ್‌ಪುರದಿಂದ ಟಿಕೆಟ್‌ ನೀಡಲಾಗಿದೆ. ಅದರೆ ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರದ ನೀತಿಗಳನ್ನು ಟೀಕಿಸುತ್ತಿದ್ದ ಮನೇಕಾರ ಪುತ್ರ ವರುಣ್‌ಗೆ ಪೀಲಿಭೀತ್‌ನಿಂದ ಟಿಕೆಟ್‌ ನಿರಾಕರಿಸಲಾಗಿದೆ. ಅಲ್ಲಿ ಯುಪಿ ಸಚಿವ ಜಿತಿನ್‌ ಪ್ರಸಾದ್‌ಗೆ ಟಿಕೆಟ್‌ ನೀಡಲಾಗಿದೆ.

ಮಮತಾ ಸವಾಲು ಸ್ವೀಕರಿಸಿದ್ದ ಹೈಕೋರ್ಟ್‌ ಜಡ್ಜ್‌ಗೆ ಟಿಕೆಟ್‌: ಇತ್ತೀಚೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸವಾಲು ಸ್ವೀಕರಿಸಿ ಕಲ್ಕತಾ ಹೈಕೋರ್ಟ್‌ ಜಡ್ಜ್‌ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದ ನ್ಯಾ. ಅಭಿಜಿತ್‌ ಗಂಗೋಪಾಧ್ಯಾಯ ಅವರಿಗೆ ತಮ್ಲುಕ್‌ ಕ್ಷೇತ್ರದಲ್ಲಿ ಟಿಕೆಟ್‌ ನೀಡಲಾಗಿದೆ.

ನಿನ್ನೆ ಪಕ್ಷ ಸೇರಿದ ಜಿಂದಾಲ್‌, ರಾವ್‌ಗೂ ಟಿಕೆಟ್‌ ಭಾಗ್ಯ!
ಭಾನುವಾರವಷ್ಠೇ ವೈಎಸ್‌ಆರ್‌ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ವರಪ್ರಸಾದ್‌ ರಾವ್‌ ಅವರಿಗೆ ಆಂಧ್ರದ ತಿರುಪತಿ (ಎಸ್‌ಸಿ) ಮತ್ತು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಉದ್ಯಮಿ ನವೀನ್‌ ಜಿಂದಾಲ್‌ಗೆ ಹರ್ಯಾಣದ ಕುರುಕ್ಷೇತ್ರ ಟಿಕೆಟ್‌ ಸಿಕ್ಕಿದೆ.

ಹಲವು ಹಾಲಿ, ಮಾಜಿ ಸಚಿವರು ಸಂಸದರಿಗೂ ಮತ್ತೆ ಅವಕಾಶ: ಕೇಂದ್ರ ಸಚಿವ ನಿತ್ಯಾನಂದ್‌ ರಾಯ್‌, ಆರ್‌.ಕೆ. ಸಿಂಗ್‌, ಗಿರಿರಾಜ್‌ ಸಿಂಗ್‌, ರವಿಶಂಕರ್‌ ಪ್ರಸಾದ್‌, ರಾಜೀವ್‌ ಪ್ರತಾಪ್‌ ರೂಡಿ, ಪುರಂದರೇಶ್ವರಿ, ಜುಆಲ್‌ ಓರಂ, ಧಮೇಂದ್ರ ಪ್ರಧಾನ್‌, ಪ್ರತಾಪ್‌ ಚಂದ್ರ ಸಾರಂಗಿಗೆ ಟಿಕೆಟ್‌ ಸಿಕ್ಕಿದೆ.

ರಾಹುಲ್‌ ಗಾಂಧಿ ವಿರುದ್ಧ ಸುರೇಂದ್ರನ್‌ ಕಣಕ್ಕೆ: ಕೇರಳದ ವಯನಾಡು ಕ್ಷೇತ್ರದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ಕೆ. ಸುರೇಂದ್ರನ್‌ ಅವರಿಗೆ ಟಿಕೆಟ್‌ ನಿಡಿದೆ.