6 ಬಂಡಾಯ ಸಂಸದರ ಅನರ್ಹತೆ ಕೋರಿ ಉದ್ಧವ್‌ ಬಣದ (ಶಿವಸೇನಾ ಯುಬಿಟಿ) ಸಂಸದರು ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಬುಧವಾರ ಮನವಿ ಸಲ್ಲಿಸಿದ್ದಾರೆ.ಯುಬಿಟಿಯು ಕಳೆದ ಗುರುವಾರ ತನ್ನ 9 ಸಂಸದರ ಸಂಸದೀಯ ಪಕ್ಷದ ಸಭೆ ಕರೆದಿತ್ತು

ನವದೆಹಲಿ: 6 ಬಂಡಾಯ ಸಂಸದರ ಅನರ್ಹತೆ ಕೋರಿ ಉದ್ಧವ್‌ ಬಣದ (ಶಿವಸೇನಾ ಯುಬಿಟಿ) ಸಂಸದರು ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಬುಧವಾರ ಮನವಿ ಸಲ್ಲಿಸಿದ್ದಾರೆ.

9 ಸಂಸದರ ಸಂಸದೀಯ ಪಕ್ಷದ ಸಭೆ ಕರೆದಿತ್ತು

ಯುಬಿಟಿಯು ಕಳೆದ ಗುರುವಾರ ತನ್ನ 9 ಸಂಸದರ ಸಂಸದೀಯ ಪಕ್ಷದ ಸಭೆ ಕರೆದಿತ್ತು. ಆದರೆ ಅದರಲ್ಲಿ 6 ಮಂದಿ ಗೈರಾಗಿದ್ದರು. 3 ದಿನ ಹಿಂದೆ ಆ 6 ಸಂಸದರೂ ಬಂಡಾಯವೆದ್ದು ಡಿಸಿಎಂ ಏಕನಾಥ್‌ ಶಿಂಧೆ ಬಣಕ್ಕೆ ಸೇರಿದ್ದರು.

ಸ್ಪೀಕರ್‌ ಓಂ ಬಿರ್ಲಾ ಭೇಟಿ ಮಾಡಿ ಮನವಿ

ಈ ಬಗ್ಗೆ ಸ್ಪೀಕರ್‌ ಓಂ ಬಿರ್ಲಾ ಭೇಟಿ ಮಾಡಿ ಮನವಿ ಸಲ್ಲಿಸಿರುವ ಉದ್ಧವ್‌ ಬಣದ ಸಂಸದರಾದ ಅರವಿಂದ್‌ ಸಾವಂತ್‌ ಮತ್ತು ಅನಿಲ್‌ ದೇಸಾಯಿ, ‘ಅನರ್ಹತೆಯಿಂದ ಪಾರಾಗಲು 3ನೇ 2ರಷ್ಟು ಬಹುಮತ ಬಂಡಾಯ ಬಣಕ್ಕಿದ್ದರೂ, ಒಂದು ಸಂಸದೀಯ ಪಕ್ಷವು ಇನ್ನೊಂದು ಪಕ್ಷದಲ್ಲಿ ವಿಲೀನ ಆಗಲು ಅವಕಾಶವಿಲ್ಲ. ಅಲ್ಲದೆ, ವಿಪ್‌ ಉಲ್ಲಂಘಿಸಿ ಇವರು ಸಂಸದೀಯ ಪಕ್ಷದ ಸಭೆಗೆ ಹಾಜರಾಗಿಲ್ಲ. ಹೀಗಾಗಿ ನಿಮಗೆ (ಸ್ಪೀಕರ್‌ಗೆ) ನೀಡಿದ್ದ ಮನವಿ ಹಾಗೂ ದಾಖಲೆಗಳ ಪ್ರತಿಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ’ ಎಂದು ಕೋರಿದ್ದಾರೆ.