ತಿರುವನಂತಪುರಂ : 2022ರಲ್ಲಿ ಪ್ರಿಯಕರನ ಕೊಂದ ಕೇರಳದ ಯುವತಿಗೆ ನ್ಯಾಯಾಲಯ ಗಲ್ಲು ಶಿಕ್ಷೆ!

| Published : Jan 21 2025, 12:32 AM IST / Updated: Jan 21 2025, 04:53 AM IST

ಸಾರಾಂಶ

ತಿರುವನಂತಪುರಂ: 2022ರಲ್ಲಿ ದೇಶವನ್ನೇ ಬೆಚ್ಚಿಬೀಳಿಸಿದ್ದ ಕೇರಳದ ಯುವಕ ಶರೋನ್ ಹತ್ಯೆ ಪ್ರಕರಣದ ಆರೋಪಿ ಹಾಗೂ ಆತನ ಪ್ರಿಯತಮೆ ಗ್ರೀಷ್ಮಾಗೆ ಕೇರಳದ ನ್ಯಾಯಾಲಯ ಗಲ್ಲು ಶಿಕ್ಷೆಯನ್ನು ವಿಧಿಸಿದೆ.

ತಿರುವನಂತಪುರಂ: 2022ರಲ್ಲಿ ದೇಶವನ್ನೇ ಬೆಚ್ಚಿಬೀಳಿಸಿದ್ದ ಕೇರಳದ ಯುವಕ ಶರೋನ್ ಹತ್ಯೆ ಪ್ರಕರಣದ ಆರೋಪಿ ಹಾಗೂ ಆತನ ಪ್ರಿಯತಮೆ ಗ್ರೀಷ್ಮಾಗೆ ಕೇರಳದ ನ್ಯಾಯಾಲಯ ಗಲ್ಲು ಶಿಕ್ಷೆಯನ್ನು ವಿಧಿಸಿದೆ. 

ಗ್ರೀಷ್ಮಾ ಶರೋನ್‌ಗೆ ವಿಷ ಬೆರೆಸಿ ಸಂಚು ಅಲ್ಲದೇ ಗ್ರೀಷ್ಮಾ ಕೂಡ ತಪ್ಪೊಪ್ಪಿಕೊಂಡಿದ್ದಳು. ಇದನ್ನು ಪರಿಶೀಲಿಸಿದ ಕೇರಳದ ನೆಯ್ಯಟ್ಟಿಂಕರ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್‌ ನ್ಯಾಯಾಲಯ ಗ್ರೀಷ್ಮಾಗೆ ಮರಣದಂಡನೆ ವಿಧಿಸಿದೆ. ಅಲ್ಲದೇ ಪ್ರಕರಣದಲ್ಲಿ ಯುವತಿ ಜೊತೆ ಕೈ ಜೋಡಿಸಿದ್ದ ಆಕೆಯ ಚಿಕ್ಕಪ್ಪ ನಿರ್ಮಲ ಕುಮಾರನ್ ನಾಯರ್‌ಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಆದರೆ, ಎರಡನೇ ಆರೋಪಿಯಾಗಿದ್ದ ಆಕೆಯ ತಾಯಿಯನ್ನು ಸಾಕ್ಷ್ಯಾಧಾರ ಕೊರತೆ ಹಿನ್ನಲೆಯಲ್ಲಿ ಖುಲಾಸೆಗೊಳಿಸಿದೆ.

ನ್ಯಾಯಾಲಯದ ತೀರ್ಪಿಗೆ ಶರೋನ್ ತಾಯಿ ಸಂತಸ ವ್ಯಕ್ತಪಡಿಸಿದ್ದು ನನ್ನ ಮಗನಿಗೆ ಸಿಗಬೇಕಾದ ನ್ಯಾಯ ಸಿಕ್ಕಿದೆ ಎಂದಿದ್ದಾರೆ.

ಏನಿದು ಪ್ರಕರಣ?:

ಕೇರಳದ ತಿರುವನಂತಪುರದಲ್ಲಿ 2022ರ ಅ.14 ರಂದು ರೇಡಿಯೋಲಜಿ ವಿದ್ಯಾರ್ಥಿ ಶರೋನ್‌ ರಾಜ್ ವಿಷಪ್ರಾಶನದಿಂದ ಮೃತಪಟ್ಟಿದ್ದ. ಈ ವೇಳೆ ಪೊಲೀಸರು ಅನುಮಾನದ ಮೇರೆಗೆ ಪ್ರಿಯತಮೆ ಗ್ರೀಷ್ಮಾಳನ್ನು ವಶಕ್ಕೆ ಪಡೆದುಕೊಂಡಿದ್ದರು. ಪೊಲೀಸ್ ವಿಚಾರಣೆಯಲ್ಲಿ ಆಕೆ ತಪ್ಪೊಪ್ಪಿಕೊಂಡಿದ್ದಳು.

 ಶರೋನ್ ಮತ್ತು ಗ್ರೀಷ್ಮಾ ಪರಸ್ಪರ ಪ್ರೀತಿಸುತ್ತಿದ್ದರು. ಈ ನಡುವೆ ಯುವತಿ ಶರೋನ್‌ನಿಂದ ದೂರವಾಗಿ ಯೋಧರೊಬ್ಬರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಳು. ಆದರೆ ಇದನ್ನು ಶರೋನ್‌ ಸಹಿಸಿರಲಿಲ್ಲ. ಹೀಗಾಗಿ ಆತನನ್ನು ಕೊಲೆ ಮಾಡಿದರೆ ತನ್ನ ಮಾರ್ಗ ಕ್ಲಿಯರ್‌ ಆಗುತ್ತದೆ ಎಂದು ಭಾವಿಸಿದ ಗ್ರೀಷ್ಮಾ, ಶರೋನ್‌ನನ್ನು ಮನೆಗೆ ಕರೆಸಿಕೊಂಡು  ಔಷಧದಲ್ಲಿ ಪ್ಯಾರಾಕ್ವಾಟ್‌ ಎಂಬ ಕಳೆನಾಶಕ ವಿಷ ಬೆರೆಸಿ ಕುಡಿಸಿದ್ದಳು. ಬಳಿಕ ಆತ ಆಸ್ಪತ್ರೆಗೆ ದಾಖಲಾಗಿದ್ದಾಗ ಆಕೆಯ ಕೃತ್ಯದ ಬಗ್ಗೆ ಹೇಳಿದ್ದ. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದ.

ಗ್ರೀಷ್ಮಾ ಕೇರಳದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದ ಅತಿ ಕಿರಿಯ ಮಹಿಳೆ. ತನ್ನ ಶೈಕ್ಷಣಿಕ ಸಾಧನೆಗಳು ಮತ್ತು ತನಗೆ ಈ ಹಿಂದೆ ಯಾವುದೇ ಅಪರಾಧದ ಇತಿಹಾಸ ಇಲ್ಲ, ಹೆತ್ತವರಿಗೆ ಏಕೈಕ ಪುತ್ರಿ ಎಂಬ ಕಾರಣವನ್ನು ಉಲ್ಲೇಖಿಸಿ ಶಿಕ್ಷೆ ಕಡಿತಕ್ಕೆ ಕೋರಿದ್ದಳು. ಆದರೆ ನ್ಯಾಯಾಲಯ ಅನುಮತಿಯನ್ನು ನೀಡದೇ ಅಪರಾಧಿಯ ವಯಸ್ಸು, ಇತರ ಸಂದರ್ಭಗಳನ್ನ ಪರಿಗಣಿಸುವ ಅಗತ್ಯವಿಲ್ಲ ಎಂದಿದು ಹೇಳಿ ಗಲ್ಲು ಶಿಕ್ಷೆ ವಿಧಿಸಿದೆ.