ಪ್ರಧಾನಿ ನರೇಂದ್ರ ಮೋದಿಯವರು ಅಜ್ಮೇರ್ ದರ್ಗಾದಲ್ಲಿ ಚಾದರ ಅರ್ಪಿಸಿದರು. ಪ್ರಧಾನಿ ಪರವಾಗಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹಸ್ತಾಂತರಿಸಿದರು. ಮತ್ತೊಂದೆಡೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಪರವಾಗಿ ಚಾದರ ಅರ್ಪಿಸಿದ್ದಾರೆ.

ಜೈಪುರ: ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅವರ ‘ಉರುಸ್‌’ ಸಂದರ್ಭದಲ್ಲಿ ವಾಡಿಕೆಯಂತೆ ಪ್ರಧಾನಿ ನರೇಂದ್ರ ಮೋದಿಯವರು ಅಜ್ಮೇರ್ ದರ್ಗಾದಲ್ಲಿ ಚಾದರ ಅರ್ಪಿಸಿದರು. ಪ್ರಧಾನಿ ಪರವಾಗಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹಸ್ತಾಂತರಿಸಿದರು. ಮತ್ತೊಂದೆಡೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಪರವಾಗಿ ಚಾದರ ಅರ್ಪಿಸಿದ್ದಾರೆ.

ಚಾದರ ಅರ್ಪಿಸಿದ ಸಂದರ್ಭದಲ್ಲಿ ಸಚಿವ ಕಿರಣ್ ರಿಜಿಜು ದರ್ಗಾದ ‘ಗರೀಬ್ ನವಾಜ್’ ಹೆಸರಿನ ವೆಬ್‌ಸೈಟ್‌ ಮತ್ತು ಉರುಸ್‌ ಕೈಪಿಡಿ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, ‘ಮೋದಿಯ ಚಾದರದೊಂದಿಗೆ ದರ್ಗಾಗೆ ಬಂದಿದ್ದೇನೆ. ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾಗೆ ಬರುವ ಸೌಭಾಗ್ಯ ನನಗೆ ಸಿಕ್ಕಿದೆ. ನಾನು ಶಾಂತಿಗಾಗಿ ಪ್ರಾರ್ಥಿಸುತ್ತೇನೆ. ಅಜ್ಮೇರ್ ದರ್ಗಾದ ಸಂದೇಶವು ಇಡೀ ಜಗತ್ತಿಗೆ ಹೋಗುತ್ತದೆ. ಚಾದರ ಪ್ರಸ್ತುತ ಅರ್ಪಿಸುವುದರ ಜೊತೆಗೆ ಮೋದಿ ಸಮಾಜ ಮತ್ತು ವಿಶ್ವಶಾಂತಿಗಾಗಿ ಒಗ್ಗೂಡಬೇಕು’ ಎಂದು ಹೇಳಿದ್ದಾರೆ ಎಂದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಪಕ್ಷದ ಪರವಾಗಿ ಅಜ್ಮೇರ್‌ ದರ್ಗಾಗೆ ಚಾದರ ಕಳುಹಿಸಿದ್ದಾರೆ. ಈ ಬಗ್ಗೆ ‘ಎಕ್ಸ್‌’ ಖಾತೆಯಲ್ಲಿ ಬರೆದುಕೊಂಡಿರುವ ಅವರು, ‘ಕಾಂಗ್ರೆಸ್‌ ಅಧ್ಯಕ್ಷನಾಗಿ, ನಮ್ಮ ಪಕ್ಷ ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವನ್ನು ಮುಂದುವರಿಸುವ ಅವಕಾಶವನ್ನು ಪಡೆದುಕೊಂಡಿದ್ದೇನೆ. ದೇಶದ ಪ್ರತಿಯೊಬ್ಬ ಪ್ರಜೆಯ ಶ್ರೇಯೋಭಿವೃದ್ಧಿಗಾಗಿ ಮತ್ತು ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸುತ್ತಿದ್ದೇನೆ’ ಎಂದರು. .