ಸಾರಾಂಶ
ದಿಲ್ಲಿ ಜಲಮಂಡಳಿ ಶುದ್ಧೀಕರಣ ಘಟಕದಲ್ಲಿ ವ್ಯಕ್ತಿಯೋರ್ವ ಕಳ್ಳತನ ಮಾಡಿ ಪರಾರಿಯಾಗುವಾಗ ಕೊಳವೆಬಾವಿಗೆ ಬಿದ್ದು ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
ನವದೆಹಲಿ: ದೆಹಲಿ ಜಲಮಂಡಳಿಯ ನೀರು ಶುದ್ಧೀಕರಣ ಘಟಕದಲ್ಲಿ ವ್ಯಕ್ತಿಯೊಬ್ಬ 40 ಅಡಿ ಆಳದ ಬೋರ್ವೆಲ್ಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಈತ ಕಳ್ಳತನ ಮಾಡಿ ಪರಾರಿ ಆಗುವಾಗ ಬೋರ್ವೆಲ್ಗೆ ಬಿದ್ದ ಎಂದು ಗೊತ್ತಾಗಿದೆ. ಆತನ ಗುರುತು ಪತ್ತೆ ಆಗಿಲ್ಲ.
ಈ ಅಪರಿಚಿತ ವ್ಯಕ್ತಿ ಕಳ್ಳತನ ಮಾಡಿ ಓಡುವಾಗ ಆಕಸ್ಮಿಕವಾಗಿ ಬೋರ್ವೆಲ್ ಒಳಗೆ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಮೂಲಗಳು ತಿಳಿಸಿದ್ದು, ವ್ಯಕ್ತಿಯ ಶವವನ್ನು ಹೊರತೆಗೆಯುವಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳು ಯಶಸ್ವಿಯಾಗಿವೆ.ಈ ಕುರಿತು ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದೆಹಲಿ ಜಲ ಸಚಿವೆ ಅತಿಶಿ, ‘ಬೋರ್ವೆಲ್ನಲ್ಲಿ 30 ವರ್ಷದ ಅನಾಮಿಕ ವ್ಯಕ್ತಿ ಬಿದ್ದು ಸತ್ತಿರುವುದು ಖಚಿತಗೊಂಡಿದೆ. ಆತ ಹೇಗೆ ಬೋರ್ವೆಲ್ ಕೋಣೆಯನ್ನು ಪ್ರವೇಶಿಸಿದ ಮತ್ತು ಹೇಗೆ ಬೋರ್ವೆಲ್ ಒಳಗೆ ಧುಮುಕಿದ ಎಂಬುದರ ಕುರಿತು ತನಿಖೆ ನಡೆಸಲಾಗುವುದು’ ಎಂದು ತಿಳಿಸಿದ್ದಾರೆ.