ಸಾರಾಂಶ
ಮೇರಠ್ /ರಾಯ್ಪುರ್: ‘ರಾಮಾಯಣ’ ಧಾರಾವಾಹಿಯ ರಾಮನ ಪಾತ್ರಧಾರಿ ಅರುಣ್ ಗೋವಿಲ್ ಉತ್ತರಪ್ರದೇಶ ಮೇರಠ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಂಗಳವಾರ ನಾಮಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಲವು ಹಿರಿಯ ಬಿಜೆಪಿ ನಾಯಕರು ಉಪಸ್ಥಿತರಿದ್ದರು. ಮತ್ತೊಂದೆಡೆ ಛತ್ತೀಸ್ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ರಾಜನಂದಗಾಂವ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಂಗಳವಾರ ನಾಮಪತ್ರ ಸಲ್ಲಿಸಿದರು.
ಅರುಣ್ ಗೋವಿಲ್: ಅರುಣ್ ಗೋವಿಲ್ ತಮ್ಮ ಬಳಿ ಮರ್ಸಿಡಿಸ್ ಕಾರು ಇದೆ. ಆದರೆ ಯಾವುದೇ ಶಸ್ತ್ರಾಸ್ತ್ರಗಳು ಇಲ್ಲ ಎಂದು ಮಾಹಿತಿ ನೀಡಿದ್ದಾರೆ. ಉಳಿದಂತೆ 2.76 ಕೋಟಿ ರು. ಮೌಲ್ಯದ ಚರಾಸ್ಥಿ ಮತ್ತು 5.67 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. ಇದರಲ್ಲಿ 10.92 ಲಕ್ಷ ಮೌಲ್ಯದ 220 ಗ್ರಾಂ ಚಿನ್ನಾಭರಣ, ಕೈಯಲ್ಲಿ 3.75 ಲಕ್ಷ ನಗದು, ಬ್ಯಾಂಕ್ ಖಾತೆಯಲ್ಲಿ 1,34,09,071 ಠೇವಣಿ ಇದೆ ಎಂದು ಸಲ್ಲಿಸಿದ್ದಾರೆ. ತಮ್ಮ ಪತ್ನಿ ಲೇಖಾ ಬಳಿ 2.76 ಕೋಟಿ ಮೌಲ್ಯದ ಆಸ್ತಿ, 32.89 ಲಕ್ಷ ಮೌಲ್ಯದ 600 ಗ್ರಾಂ ಚಿನ್ನಾಭರಣ, 4 ಲಕ್ಷ ನಗದು, ಬ್ಯಾಂಕಿನಲ್ಲಿ 80,43,149 ಠೇವಣಿ ಇದೆ. ಇಬ್ಬರ ಬಳಿಯೂ ಯಾವುದೇ ಕೃಷಿ/ಕೃಷಿಯೇತರ ಭೂಮಿ, ಪಿತ್ರಾರ್ಜಿತ ಆಸ್ತಿಯಿಲ್ಲ ಎಂದು ಆಯೋಗಕ್ಕೆ ಮಾಹಿತಿ ಸಲ್ಲಿಸಿದ್ದಾರೆ.