ಸಾರಾಂಶ
ಹೈದರಾಬಾದ್: ಚುನಾವಣೆ ಘೋಷಣೆಯಾದ ಬಳಿಕ ಶೆಹಜಾದಾ (ರಾಹುಲ್) ಅಂಬಾನಿ- ಅದಾನಿ ನಿಂದನೆ ನಿಲ್ಲಿಸಿದ್ದಾರೆ. ಅವರಿಗೆ ಟೆಂಪೋ ತುಂಬಾ ಮಾಲ್ ಬಂದಿರಬೇಕು ಎಂದು ಪ್ರಧಾನಿ ಮೋದಿ ಟಾಂಗ್ ನೀಡಿದ ಬೆನ್ನಲ್ಲೇ, ಅದಾನಿ- ಮೋದಿ ವಿರುದ್ಧ ರಾಹುಲ್ ಮತ್ತೆ ಟೀಕಾ ಪ್ರಹಾರ ನಡೆಸಿದ್ದಾರೆ.
ಗುರುವಾರ ಇಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ರಾಹುಲ್ ‘ಪ್ರಧಾನಿ ಮೋದಿ 10 ವರ್ಷದಲ್ಲಿ ಹಲವು ಯೋಜನೆಗಳನ್ನು ಅದಾನಿ ಕೈಗೊಪ್ಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ತಮ್ಮ 10 ವರ್ಷದ ಅವಧಿಯಲ್ಲಿ ದೇಶದ ಕೇವಲ 20-22 ಜನರಿಗೆ ಕೆಲಸ ಮಾಡಿದ್ದಾರೆ. ಅವರೆಲ್ಲರೂ ಕೋಟ್ಯಧಿಪತಿಗಳಾಗಿದ್ದಾರೆ. ಬಿಜೆಪಿಯ ಕೆಲ ನಾಯಕರು ಭಾರತದ ಸಂವಿಧಾನವನ್ನೇ ಬದಲಿಸಲು ಇಚ್ಛಿಸಿದ್ದಾರೆ ಎಂದು ಆರೋಪಿಸಿದರು.
ಜೊತೆಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೀಸಲು ರದ್ದುಗೊಳಿಸಲೆಂದೇ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣ ಮಾಡಿದೆ. ಬಿಜೆಪಿ ಮೀಸಲಾತಿಯನ್ನು ಸಂಪೂರ್ಣ ರದ್ದುಗೊಳಿಸಲಿದೆ ಎಂದು ಆರೋಪಿಸಿದರು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲು ಪ್ರಮಾಣವನ್ನು ಶೇ.50ಕ್ಕಿಂತ ಹೆಚ್ಚು ವಿಸ್ತರಿಸಲಿದೆ. ದೇಶದಲ್ಲಿ ಜಾತಿ ಗಣತಿಯನ್ನು ಮಾಡಿ ಶೋಷಿತರಿಗೆ ನ್ಯಾಯ ಒದಗಿದಲಿದೆ ಎಂದು ಭರವಸೆ ನೀಡಿದರು.