ಸಾರಾಂಶ
‘ಪ್ರಧಾನಿ ನರೇಂದ್ರ ಮೋದಿ ಹಿಂದುಳಿದ ವರ್ಗದಲ್ಲಿ ಜನಿಸಿಲ್ಲ. ಬದಲಿಗೆ ಕಾನೂನಾತ್ಮಕವಾಗಿ ಮತಾಂತರಗೊಂಡ ಹಿಂದುಳಿದ ವರ್ಗಕ್ಕೆ ಸೇರಿದ್ದಾರೆ’ ಎಂದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಆರೋಪಿಸಿದ್ದಾರೆ.
ಹೈದರಾಬಾದ್: ‘ಪ್ರಧಾನಿ ನರೇಂದ್ರ ಮೋದಿ ಹಿಂದುಳಿದ ವರ್ಗದಲ್ಲಿ ಜನಿಸಿಲ್ಲ. ಬದಲಿಗೆ ಕಾನೂನಾತ್ಮಕವಾಗಿ ಮತಾಂತರಗೊಂಡ ಹಿಂದುಳಿದ ವರ್ಗಕ್ಕೆ ಸೇರಿದ್ದಾರೆ’ ಎಂದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಆರೋಪಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರೆಡ್ಡಿ, ‘ಮೋದಿ ತಮ್ಮನ್ನು ತಾವು ಹಿಂದುಳಿದ ವರ್ಗಕ್ಕೆ ಸೇರಿದವರೆಂದು ಕರೆದುಕೊಳ್ಳುತ್ತಾರೆ. ಆದರೆ ನಿಜವಾಗಿ, 2001ರಲ್ಲಿ ಗುಜರಾತ್ನ ಮುಖ್ಯಮಂತ್ರಿಯಾದ ಬಳಿಕ ಶಾಸನದ ಮೂಲಕ ತಮ್ಮ ಜಾತಿಯನ್ನು ಹಿಂದುಳಿದ ವರ್ಗವನ್ನಾಗಿ ಮಾಡಿಕೊಂಡರು. ಮೋದಿಯವರ ಬಳಿ ಹಿಂದುಳಿದ ವರ್ಗದ ಪ್ರಮಾಣಪತ್ರ ಇರಬಹುದು. ಆದರೆ ಅವರು ಹಿಂದುಳಿದವರ ವಿರುದ್ಧದ ಮನಸ್ಥಿತಿ ಹೊಂದಿದ್ದಾರೆ’ ಎಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ, ‘ರೆಡ್ಡಿ ಇಂತಹ ಹೇಳಿಕೆಗಳ ಮೂಲಕ ಸುದ್ದಿಯಲ್ಲಿರಲು ಬಯಸುತ್ತಾರೆ. ಅವರು ಮಾಜಿ ಸಿಎಂ ಚಂದ್ರಶೇಖರ್ ರಾವ್ ಅವರನ್ನು ಬಿಹಾರಿ ವಂಶವಾಹಿ ಉಳ್ಳವರು ಎಂದಿದ್ದರು’ ಎಂದಿದೆ.