ಸಾರಾಂಶ
ಜೂ.6ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ, ಜಮ್ಮುವಿನ ಕಟ್ರಾ ಮತ್ತು ಶ್ರೀನಗರದ ನಡುವಿನ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ.
ಕಾಶ್ಮೀರ ಕಣಿವೆಗೆ ಇತರೆ ಭಾಗಗಳ ಜೊತೆ ಮೊದಲ ಸಲ ರೈಲು ಸಂಪರ್ಕ
ಜೂ.6ರಂದು ಕಟ್ರಾ-ಶ್ರೀನಗರ ರೈಲು ಸಂಚಾರಕ್ಕೆ ಪ್ರಧಾನಿ ಹಸಿರು ನಿಶಾನೆವಿಶ್ವದ ಅತಿ ಎತ್ತರದ ರೈಲ್ವೆ ಕಮಾನು ಸೇತುವೆಯೂ ಮೋದಿಯಿಂದ ಉದ್ಘಾಟನೆ==
ಜಮ್ಮು: ಜೂ.6ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ, ಜಮ್ಮುವಿನ ಕಟ್ರಾ ಮತ್ತು ಶ್ರೀನಗರದ ನಡುವಿನ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ.ಕಟ್ರಾ ಮತ್ತು ಶ್ರೀನಗರದ ನಡುವೆ ವಂದೇ ಭಾರತ್ ರೈಲು ಸಂಚರಿಸಲಿದೆ. ಈ ಮಾರ್ಗವು 272 ಕಿ.ಮೀ. ಉದ್ದದ ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಸಂಪರ್ಕ (ಯುಎಸ್ಬಿಆರ್ಎಲ್) ಯೋಜನೆಯ ಬಹುಮುಖ್ಯ ಭಾಗವಾಗಿದ್ದು, ದೇಶದ ರೈಲ್ವೆ ಜಾಲಕ್ಕೆ ಕಾಶ್ಮೀರ ಕಣಿವೆಯನ್ನು ನೇರವಾಗಿ ಸಂಪರ್ಕಿಸಲಿದೆ.
ಈ ಮೊದಲು ಯುಎಸ್ಬಿಆರ್ಎಲ್ ಯೋಜನೆಯಡಿ 2009ರಲ್ಲಿ ಖಾಜಿಗುಂದ್-ಬಾರಾಮುಲ್ಲಾ ಮಾರ್ಗ, 2014ರಲ್ಲಿ ಉಧಂಪುರ-ಕಟ್ರಾ ಮಾರ್ಗ ಹಾಗೂ 2024ರ ಫೆಬ್ರವರಿಯಲ್ಲಿ ಬನಿಹಾಲ್-ಸಂಗಲ್ದನ್ ಮಾರ್ಗ ನಿರ್ಮಾಣವಾಗಿತ್ತು. ಆದರೆ ಈ ಯಾವುದೇ ಮಾರ್ಗಗಳು ಕಾಶ್ಮೀರವನ್ನು ದೇಶದ ಇತರ ಭಾಗಗಳಿಗೆ ಸಂಪರ್ಕಿಸುತ್ತಿರಲಿಲ್ಲ. ಜೂ.6ರಂದು ಉದ್ಘಾಟನೆಯಾಗಲಿರುವ ಕಟ್ರಾ-ಶ್ರೀನಗರ ಮಾರ್ಗವು ಮೊದಲ ಬಾರಿ ಕಾಶ್ಮೀರ ಕಣಿವೆಯನ್ನು ದೇಶದ ಇತರ ರೈಲ್ವೆ ಜಾಲಕ್ಕೆ ಜೋಡಿಸಲಿದೆ.ಇದೇ ದಿನ, ಚಿನಾಬ್ ನದಿಗೆ ನಿರ್ಮಿಸಲಾಗಿರುವ ವಿಶ್ವದ ಅತಿ ಎತ್ತರದ ಕಮಾನು ಸೇತುವೆಯನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಆ ಬಳಿಕ ರೈಲ್ವೆ ಅಧಿಕಾರಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.