ಸಾರಾಂಶ
ದಕ್ಷಿಣ ಭಾರತ ರಾಜ್ಯಗಳ ಜನಸಂಖ್ಯೆ ಇಳಿಕೆ ಬಗ್ಗೆ ಹಿಂದೊಮ್ಮೆ ಕಳವಳ ವ್ಯಕ್ತಪಡಿಸಿದ್ದ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಸರ್ಕಾರ ಇದೀಗ ಹೆಚ್ಚು ಮಕ್ಕಳನ್ನು ಹೊಂದುವಂತೆ ಪರಿವಾರಗಳನ್ನು ಪ್ರೋತ್ಸಾಹಿಸಲು ಆರ್ಥಿಕ ಬೆಂಬಲ ನಿಡಲಾಗುವುದು ಎಂದು ಪ್ರಕಟಿಸಿದ್ದಾರೆ.
ವಿಜಯವಾಡ: ದಕ್ಷಿಣ ಭಾರತ ರಾಜ್ಯಗಳ ಜನಸಂಖ್ಯೆ ಇಳಿಕೆ ಬಗ್ಗೆ ಹಿಂದೊಮ್ಮೆ ಕಳವಳ ವ್ಯಕ್ತಪಡಿಸಿದ್ದ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಸರ್ಕಾರ ಇದೀಗ ಹೆಚ್ಚು ಮಕ್ಕಳನ್ನು ಹೊಂದುವಂತೆ ಪರಿವಾರಗಳನ್ನು ಪ್ರೋತ್ಸಾಹಿಸಲು ಆರ್ಥಿಕ ಬೆಂಬಲ ನಿಡಲಾಗುವುದು ಎಂದು ಪ್ರಕಟಿಸಿದ್ದಾರೆ.
ಭಾನುವಾರ ಮಾತನಾಡಿದ ಅವರು, ‘ಪ್ರಸ್ತುತವಿರುವ ರಾಜ್ಯದ ಫಲವತ್ತತೆ ಹೆಚ್ಚಬೇಕು. ಆದ್ದರಿಂದ ಇನ್ನು ಪ್ರತಿ ಪರಿವಾರವನ್ನು ಒಂದು ಘಟಕವೆಂದು ಪರಿಗಣಿಸಿ, ಅದಕ್ಕೆ ಆರ್ಥಿಕ ಪ್ರೋತ್ಸಾಹ ನೀಡಲಾಗುವುದು. ಇದೊಂದು ಹೂಡಿಕೆಯಾಗಿದೆ. ಕುಟುಂಬ ದೊಡ್ಡದಾದಂತೆ ಪ್ರೋತ್ಸಾಹ ಧನವೂ ಹೆಚ್ಚುವುದು’ ಎನ್ನುವ ಮೂಲಕ ಪರಿವಾರ ವಿಸ್ತರಣೆಗೆ ಪರೋಕ್ಷವಾಗಿ ಕರೆ ನೀಡಿದರು.
‘ಶಾಲೆಗೆ ಹೋಗುವ ಎಲ್ಲಾ ಮಕ್ಕಳಿಗೆ 15,000 ರು. ಆರ್ಥಿಕ ನೆರವು ನೀಡಲಾಗುವುದು. ಅದು ನೇರವಾಗಿ ಮಕ್ಕಳ ತಾಯಂದಿರಿಗೆ ಸೇರಲಿದೆ. ಇದನ್ನು ಹೊರತುಪಡಿಸಿ, ಅಧಿಕ ಮಕ್ಕಳನ್ನು ಹೊಂದುವ ದಂಪತಿಗಳಿಗೆ ಆರ್ಥಿಕ ನೆರವು ನೀಡಲು ಚಿಂತನೆ ನಡೆಸುತ್ತಿದ್ದೇವೆ’ ಎಂದು ನಾಯ್ಡು ಘೋಷಿಸಿದರು.
ಜತೆಗೆ, ಎಲ್ಲಾ ಸಂಸ್ಥೆಗಳಲ್ಲಿ ಶಿಶುಪಾಲನಾ ಕೇಂದ್ರಗಳಿರುವುದನ್ನು ಕಡ್ಡಾಯಗೊಳಿಸಲಾಗುವುದು.
ಇತ್ತೀಚೆಗಷ್ಟೇ, ಮಹಿಳೆಯರ ಮಾತೃತ್ವದ ರಜೆ ಮೇಲಿನ 2 ಬಾರಿಯ ಮಿತಿಯನ್ನು ತೆಗೆದುಹಾಕಲಾಗಿತ್ತು. ಅದಕ್ಕೂ ಮೊದಲು, 2ಕ್ಕಿಂತ ಹೆಚ್ಚು ಮಕ್ಕಳಿರುವವರು ಸ್ಥಳೀಯ ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ನಿರ್ಬಂಧ ಹೇರಲಾಗಿತ್ತು.
ಕುಸಿತ ತಡೆಯಲು ಕ್ರಮ
ದಕ್ಷಿಣದ ರಾಜ್ಯಗಳಲ್ಲಿ ಜನಸಂಖ್ಯೆ ಕೊರತೆ ಮುಂದಿನ ದಿನಗಳಲ್ಲಿ ಭಾರೀ ಅಪಾಯ ತರಲಿದೆ ಎಂದು ಎಚ್ಚರಿಸಿದ್ದ ಸಿಎಂ ನಾಯ್ಡು
ಈ ಕಾರಣಕ್ಕಾಗಿ 2ಕ್ಕಿಂತ ಹೆಚ್ಚು ಮಕ್ಕಳ ಹೊಂದಿದ್ದವರು ಸ್ಥಳೀಯ ಸಂಸ್ಥೆ ಚುನಾವಣೆ ಸ್ಪರ್ಧೆಗೆ ಅನರ್ಹ ಎಂಬ ನಿಯಮ ರದ್ದು
ಇದೀಗ ಹೆಚ್ಚು ಹೆಚ್ಚು ಮಕ್ಕಳನ್ನು ಹೊಂದಿದ ಕುಟುಂಬಗಳಿಗೆ ಆರ್ಥಿಕ ನೆರವು ಘೋಷಣೆ ಮೂಲಕ ಜನಸಂಖ್ಯೆ ಹೆಚ್ಚಳಕ್ಕೆ ಕ್ರಮ
ಇದರ ಜೊತೆಗೆ ಶಾಲೆಗೆ ಹೋಗುವ ಪ್ರತಿ ವಿದ್ಯಾರ್ಥಿಗೆ ತಲಾ 15000 ರು. ನೆರವು ನೀಡುವ ಬಗ್ಗೆ ಘೋಷಣೆ