ಮೋದಿ ಸಮತೋಲಿತ ಆಡಳಿತ ನಡೆಸಲಿ: ನಾಯ್ಡು

| Published : Jun 08 2024, 12:36 AM IST / Updated: Jun 08 2024, 07:39 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಪ್ರಾದೇಶಿಕ ಆಕಾಂಕ್ಷೆಗಳು ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ಗಮನದಲ್ಲಿ ಇರಿಸಿಕೊಂಡು ಸಮತೋಲಿತ ಆಡಳಿತ ನಡೆಸಬೇಕು ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಪ್ರಾದೇಶಿಕ ಆಕಾಂಕ್ಷೆಗಳು ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ಗಮನದಲ್ಲಿ ಇರಿಸಿಕೊಂಡು ಸಮತೋಲಿತ ಆಡಳಿತ ನಡೆಸಬೇಕು ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಈ ಮೂಲಕ ರಾಜ್ಯಗಳನ್ನು ಕಡೆಗಣಿಸಿ ಏಕಪಕ್ಷೀಯ ನಿರ್ಧಾರ ಕೈಗೊಳ್ಳುವ ಪರಿಪಾಠ ಕೈಬಿಡಬೇಕು ಎಂದು ಪರೋಕ್ಷವಾಗಿ ನುಡಿದಿದ್ದಾರೆ.

ಪ್ರಧಾನಿ ಸ್ಥಾನಕ್ಕೆ ಮೋದಿ ಅವರ ಹೆಸರನ್ನು ಎನ್‌ಡಿಎ ಸಭೆಯಲ್ಲಿ ಸೂಚಿಸಿ ಮಾತನಾಡಿದ ನಾಯ್ಡು, ‘ಪ್ರಾದೇಶಿಕ ಆಕಾಂಕ್ಷೆಗಳು ಹಾಗೂ ರಾಷ್ಟ್ರೀಯ ಹಿತಾಸಕ್ತಿಗಳು- ಈ ಎರಡನ್ನೂ ಮೋದಿ ಸಮಾನವಾಗಿ ತಮ್ಮ ಗಮನದಲ್ಲಿ ಇರಿಸಿಕೊಳ್ಳಬೇಕು ಹಾಗೂ ಸಮತೋಲಿತ ಆಡಳಿತ ನಡೆಸಬೇಕು ಮತ್ತು ಸಮಾಜದ ಎಲ್ಲಾ ಸ್ತರಗಳಿಗೆ ಸಮಗ್ರ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಬೇಕು’ ಎಂದರು.

ಭಾರತಕ್ಕೆ ಸರಿಯಾದ ನಾಯಕ:  ಇದೇ ವೇಳೆ, ಇಂದು ಭಾರತಕ್ಕೆ ಸರಿಯಾದ ಸಮಯದಲ್ಲಿ ಸರಿಯಾದ ನಾಯಕ ಸಿಕ್ಕಿದ್ದಾರೆ. ಆ ನಾಯಕನೆಂದರೆ ನರೇಂದ್ರ ಮೋದಿ. ಇದು ಭಾರತಕ್ಕೆ ಉತ್ತಮ ಅವಕಾಶವಾಗಿದೆ, ನಾವು ಈಗ ಅದನ್ನು ಕಳೆದುಕೊಂಡರೆ, ನಾವು ಅದನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತೇವೆ’ ಎಂದೂ ಚಂದ್ರಬಾಬು ನಾಯ್ಡು ಹೇಳಿದರು.

‘ನಾವು ರಾಷ್ಟ್ರದ ಇತಿಹಾಸದಲ್ಲಿ ನಿರ್ಣಾಯಕ ಘಟ್ಟದಲ್ಲಿ ನಿಂತಿದ್ದೇವೆ. ಮೋದಿಜಿ ಕಳೆದ 10 ವರ್ಷಗಳಲ್ಲಿ ಮಹತ್ವದ ಸ್ಥಾನವನ್ನು ಪಡೆದಿದ್ದಾರೆ. ಮೋದಿ ಜಿ ಅವರ ಸಮರ್ಪಿತ ವಿಧಾನವು ರಾಷ್ಟ್ರವನ್ನು ಜಾಗತಿಕ ಶಕ್ತಿ ಕೇಂದ್ರವಾಗಿ ಪರಿವರ್ತಿಸಿದೆ. ಇದರ ಶ್ರೇಯ ಸಂಪೂರ್ಣ ಮೋದಿ ಅವರಿಗೆ ಸಲ್ಲಬೇಕು’ ಎಂದರು.

ಮೋದಿಯವರ ನಾಯಕತ್ವದಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ವಿಶ್ವಾಸವಿದೆ ಎಂದ ನಾಯ್ಡು ಅವರು ‘ಹೆಮ್ಮೆಯಿಂದ ಭಾರತದ ಮುಂದಿನ ಪ್ರಧಾನಿಯಾಗಿ ನರೇಂದ್ರ ಮೋದಿಯವರ ಹೆಸರನ್ನು ಪ್ರಸ್ತಾಪಿಸುತ್ತೇನೆ’ ಎಂದು ಹೇಳಿದರು.

‘ನಾನು ವಿವಿಧ ಸರ್ಕಾರಗಳನ್ನು ನೋಡಿದ್ದೇನೆ. ಆದರೆ ಮೋದಿ ಅವರ ವೈಖರಿಯೇ ಬೇರೆ.ಮೋದಿ ಅವರಿಗೆ ದೂರದೃಷ್ಟಿ ಮತ್ತು ಉತ್ಸಾಹವಿದೆ. ಆ ದೂರದೃಷ್ಟಿಯನ್ನು ಕಾರ್ಯಗತಗೊಳಿಸುವ ಅರ ಶೈಲಿ ಅತ್ಯಂತ ಪರಿಪೂರ್ಣವಾಗಿದೆ (ಪರ್ಫೆಕ್ಟ್‌). ಅವರು ತಮ್ಮ ಎಲ್ಲ ನೀತಿಗಳನ್ನು ನಿಜವಾದ ಮನಸ್ಸಿನೊಂದ ಕಾರ್ಯಗತಗೊಳಿಸುತ್ತಾರೆ’ ಎಂದರು.