ಸಾರಾಂಶ
ತಮ್ಮದೇ ಹಿಂದಿನ ದಾಖಲೆ ಮುರಿದ ಎವರೆಸ್ಟ್ ಮ್ಯಾನ್
ಕಾಠ್ಮಂಡು: ಎವರೆಸ್ಟ್ ಮ್ಯಾನ್ ಎಂದೇ ಹೆಸರಾಗಿರುವ ನೇಪಾಳದ ಶೆರ್ಪಾ (ಪರ್ವತಾರೋಹಣಕ್ಕೆ ಗೈಡ್) ಕಮಿ ರೀಟಾ 31ನೇ ಸಲ ವಿಶ್ವದ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ಏರುವ ಮೂಲಕ ತಮ್ಮದೇ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.55 ವರ್ಷದ ರೀಟಾ ಮಂಗಳವಾರ ಬೆಳಿಗ್ಗೆ 4 ಗಂಟೆ ಸುಮಾರಿಗೆ ಪರ್ವತದ ತುತ್ತತುದಿ 8,849 ಮೀ. ಎತ್ತರಕ್ಕೆ ತಲುಪಿದರು ಎಂದು ಪರ್ವತಾರೋಹಣ ಆಯೋಜಕ ಸಂಸ್ಥೆ ಸೆವೆನ್ ಸಮ್ಮಿಟ್ ಟ್ರೆಕ್ಸ್ನ ಅಧ್ಯಕ್ಷ ಮಿಂಗ್ಮಾ ತಿಳಿಸಿದ್ದಾರೆ.
‘ರೀಟಾ ಅವರು ಲೆಫ್ಟಿನೆಂಟ್ ಕರ್ನಲ್ ಮನೋಜ್ ಜೋಶಿ ನೇತೃತ್ವದ ಭಾರತೀಯ ಸೇನೆಯ ಸಾಹಸ ವಿಭಾಗದ ತಂಡಕ್ಕೆ ಮಾರ್ಗದರ್ಶನ ನೀಡುತ್ತಿದ್ದರು. ಅವರು ಸುರಕ್ಷಿತವಾಗಿದ್ದು, ಶಿಖರದಿಂದ ಇಳಿಯಲು ಪ್ರಾರಂಭಿಸಿದ್ದಾರೆ.ವಿಶ್ವದಲ್ಲೇ ಅತಿ ಹೆಚ್ಚು ಎತ್ತರದ ಪರ್ವತಾಹೋರಣ ಮಾಡಿದವರ ಸಾಲಿನಲ್ಲಿ ಭದ್ರ ಸ್ಥಾನ ಪಡೆದಿದ್ದಾರೆ’ ಎಂದರು.
ರೀಟಾ 1992ರಿಂದ ಎವರೆಸ್ಟ್ ಏರಲು ಪ್ರಾರಂಭಿಸಿದರು. ಒಟ್ಟು 31 ಬಾರಿ ಏರಿದ್ದಾರೆ.==
ಐಟಿಆರ್ ಸಲ್ಲಿಕೆ ಕಡೆಯ ದಿನಾಂಕ ಜು.31ರಿಂದ ಸೆ.15ರವರೆಗೆ ವಿಸ್ತರಣೆನವದೆಹಲಿ: 2025-26ನೇ ಮೌಲ್ಯಮಾಪನ ವರ್ಷದ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಪಾವತಿಸುವ ಅಂತಿಮ ದಿನಾಂಕವನ್ನು ಆದಾಯ ತೆರಿಗೆ ಇಲಾಖೆ ಜು.31ರಿಂದ ಸೆ.15ಕ್ಕೆ ವಿಸ್ತರಿಸಿದೆ. ತಮ್ಮ ಖಾತೆಗಳ ಲೆಕ್ಕಪರಿಶೋಧನೆ ಮಾಡಿಸಿಕೊಳ್ಳುವ ಅಗತ್ಯವಿಲ್ಲದ ವ್ಯಕ್ತಿಗಳು, ಹಿಂದೂ ಅವಿಭಜಿತ ಕುಟುಂಬಗಳು ಮತ್ತು ಸಂಸ್ಥೆಗಳಿಗೆ ಇದು ಅನ್ವಯವಾಗುತ್ತದೆ. ಅವರು ಈಗ 2024-25ನೇ ಆರ್ಥಿಕ ವರ್ಷದಲ್ಲಿ ಗಳಿಸಿದ ಆದಾಯಕ್ಕಾಗಿ ಸೆ.15ರೊಳಗೆ ತಮ್ಮ ತೆರಿಗೆ ರಿಟರ್ನ್ ಅನ್ನು ಸಲ್ಲಿಸಬಹುದು.‘ಐಟಿಆರ್ ಫಾರ್ಮ್ಗಳಲ್ಲಿ ಪರಿಚಯಿಸಲಾದ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು, ಆದಾಯ ತೆರಿಗೆ ವ್ಯವಸ್ಥೆಯ ಸಿದ್ಧತೆಗೆ ಬೇಕಾದ ಸಮಯವನ್ನು ಪರಿಗಣಿಸಿ ಅಂತಿಮ ದಿನಾಂಕವನ್ನು ವಿಸ್ತರಿಸಲಾಗಿದೆ. ತೆರಿಗೆದಾರರಿಗೆ ಸುಗಮ ಮತ್ತು ಅನುಕೂಲಕರ ಫೈಲಿಂಗ್ ವ್ಯವಸ್ಥೆ ಮಾಡಿಕೊಡಲು ಜು.31ರಂದು ನಿಗದಿಯಾಗಿದ್ದ ದಿನಾಂಕವನ್ನು ಸೆ.15ರವರೆಗೆ ವಿಸ್ತರಿಸಿದ್ದೇವೆ’ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ತಿಳಿಸಿದೆ.==
ಜೂನ್ನಲ್ಲಿ ಸಾಮಾನ್ಯಕ್ಕಿಂತ ಅಧಿಕ ಮಳೆ: ಐಎಂಡಿದಕ್ಷಿಣ, ವಾಯುವ್ಯ, ಈಶಾನ್ಯ ಭಾಗದಲ್ಲಿ ಸಾಮಾನ್ಯಕ್ಕಿಂತ ಕಡಿಮೆ
ನವದೆಹಲಿ: ಭಾರತಕ್ಕೆ ಅವಧಿಪೂರ್ವ ಮುಂಗಾರು ಪ್ರವೇಶವಾಗಿರುವ ಬೆನ್ನಲ್ಲೇ, ಜೂನ್ ತಿಂಗಳಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಅಧಿಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಭೂವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ. ರವಿಚಂದ್ರನ್, ‘ದೇಶದ ಹಲವು ಭಾಗಗಳಲ್ಲಿ ಜೂನ್ ತಿಂಗಳಲ್ಲಿ ದೀರ್ಘಾಕಾಲೀನ ಸರಾಸರಿಯಾದ 166.9 ಮಿ.ಮೀ.ಗಿಂತ ಶೇ.108ಕ್ಕಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಆದರೆ ದಕ್ಷಿಣ, ವಾಯುವ್ಯ ಮತ್ತು ಈಶಾನ್ಯ ಭಾರತದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ವರ್ಷಧಾರೆಯಾಗಲಿದೆ’ ಎಂದರು.‘ಅಧಿಕ ಮಳೆಯಿಂದಾಗಿ, ಈಶಾನ್ಯ ಮತ್ತು ವಾಯುವ್ಯ ಭಾರತವನ್ನು ಹೊರತುಪಡಿಸಿ ಕೆಲ ಕಡೆಗಳಲ್ಲಿ ಗರಿಷ್ಠ ತಾಪಮಾನ ಸಾಮಾನ್ಯ ಅಥವಾ ಅದಕ್ಕಿಂತ ಕಡಿಮೆಯಿರಲಿದೆ. ಆದರೆ ದೇಶದ ಮಧ್ಯ ಭಾಗ ಸೇರಿದಂತೆ ಬಹುತೇಕ ಕಡೆಗಳಲ್ಲಿ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಿರಲಿದೆ’ ಎಂದು ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ್ ಮೋಹಪಾತ್ರ ಹೇಳಿದ್ದಾರೆ.ಈ ಬಾರಿಯ ಮುಂಗಾರು ಮೇ 24ರಂದು ಕೇರಳ ಮೂಲಕ ಪ್ರವೇಶಿಸಿತ್ತು. 16 ವರ್ಷದ ಬಳಿಕ, ವಾಡಿಕೆಗಿಂತ 8 ದಿನಗಳ ಮೊದಲೇ ಮಾನ್ಸೂನ್ ಆರಂಭವಾಗಿತ್ತು.
==ಕ್ಲಾಸಿಗೆ ಚಕ್ಕರ್ ಹೊಡೆದರೆ ವೀಸಾ ರದ್ದು: ಭಾರತೀಯ ವಿದ್ಯಾರ್ಥಿಗಳಿಗೆ ಅಮೆರಿಕ
ನಿಯಮಿತವಾಗಿ ತರಗತಿಗಳಿಗೆ ಹಾಜರಾಗದಿದ್ದರೆ ವೀಸಾ ರದ್ದು
ನವದೆಹಲಿ: ‘ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳು ಶಾಲೆಗೆ ತಿಳಿಸದೆ ತರಗತಿಗೆ ಚಕ್ಕರ್ ಹೊಡೆದರೆ, ಶಾಲೆಯನ್ನು ಬಿಟ್ಟು ಬಿಟ್ಟರೆ ಅಥವಾ ತೆಗೆದುಕೊಂಡ ಕೋರ್ಸ್ ಅನ್ನು ತ್ಯಜಿಸಿದರೆ ಅವರ ವಿದ್ಯಾರ್ಥಿ ವೀಸಾ ರದ್ದುಗೊಳಿಸಬೇಕಾಗುತ್ತದೆ’ ಎಂದು ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿ ಮಂಗಳವಾರ ಎಚ್ಚರಿಕೆ ನೀಡಿದೆ. ಟ್ರಂಪ್ ಆಡಳಿತ ವಲಸೆ ನೀತಿ ಕುರಿತು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಫೋಸ್ಟ್ ಮಾಡಿರುವ ರಾಯಭಾರ ಕಚೇರಿ, ವೀಸಾ ನಿಯಮಗಳಿಗೆ ಬದ್ಧವಾಗಿರುವಂತೆ ಮತ್ತು ಯಾವುದೇ ಸಮಸ್ಯೆಗೆ ಆಸ್ಪದ ಕೊಡದೆ ವಿದ್ಯಾರ್ಥಿ ಸ್ಥಾನಮಾನವನ್ನು ಕಾಪಾಡಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದೆ.‘ಶಾಲೆಗೆ ತಿಳಿಸದೆಯೇ ತರಗತಿಗೆ ಚಕ್ಕರ್ ಹೊಡೆದರೆ, ಶಾಲೆಯನ್ನು ಬಿಟ್ಟರೆ ಅಥವಾ ವ್ಯಾಸಂಗ ಮಾಡುತ್ತಿರುವ ಕೋರ್ಸ್ ಅನ್ನು ತ್ಯಜಿಸಿದರೆ ಅಂತಹ ವಿದ್ಯಾರ್ಥಿಗಳ ವೀಸಾವನ್ನು ಹಿಂಪಡೆಯಬಹುದು. ಅಲ್ಲದೇ ಭವಿಷ್ಯದ ಅಮೆರಿಕ ವೀಸಾಗಳಿಗೆ ಅರ್ಹತೆಯನ್ನು ಕಳೆದುಕೊಳ್ಳಬಹುದು. ಯಾವಾಗಲೂ ವೀಸಾದ ನಿಯಮಗಳಿಗೆ ಬದ್ಧರಾಗಿರಿ’ ಎಂದು ಹೇಳಿದೆ.