ನೇತಾಜಿ ಸುಭಾಷ್ ಚಂದ್ರ ಬೋಸ್ ದೇಹದ ಅವಶೇಷ ತರಿಸಿ: ಮೋದಿಗೆ ಮೊಮ್ಮಗ ಚಂದ್ರ ಕುಮಾರ್ ಆಗ್ರಹ

| Published : Jul 29 2024, 12:51 AM IST / Updated: Jul 29 2024, 04:37 AM IST

subash chandrabose

ಸಾರಾಂಶ

ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರ ದೇಹದ ಅವಶೇಷಗಳನ್ನು ಜಪಾನಿನ ರೆಂಕೋಜಿಯಿಂದ ಆ.18ರ ಒಳಗೆ ಭಾರತಕ್ಕೆ ತರುವಂತೆ ಅವರ ಮೊಮ್ಮಗ ಚಂದ್ರ ಕುಮಾರ್ ಬೋಸ್ ಪ್ರಧಾನಿ ನರೇಂದ್ರ‘ ಮೋದಿ ಅವರಿಗೆ ಪತ್ರದ ಮುಖಾಂತರ ಆಗ್ರಹ ಮಾಡಿದ್ದಾರೆ.

ಕೋಲ್ಕತಾ: ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರ ದೇಹದ ಅವಶೇಷಗಳನ್ನು ಜಪಾನಿನ ರೆಂಕೋಜಿಯಿಂದ ಆ.18ರ ಒಳಗೆ ಭಾರತಕ್ಕೆ ತರುವಂತೆ ಅವರ ಮೊಮ್ಮಗ ಚಂದ್ರ ಕುಮಾರ್ ಬೋಸ್ ಪ್ರಧಾನಿ ನರೇಂದ್ರ‘ ಮೋದಿ ಅವರಿಗೆ ಪತ್ರದ ಮುಖಾಂತರ ಆಗ್ರಹ ಮಾಡಿದ್ದಾರೆ.

ಭಾನುವಾರ ಪಿಟಿಐ ವಿಡಿಯೋಸ್ ಜತೆ ಮಾತನಾಡಿದ ಅವರು, ನೇತಾಜಿ ಅವರ ಸಾವಿನ ಬಗ್ಗೆ ಇರುವ ಊಹಾಪೋಹಗಳಿಗೆ ತೆರೆ ಎಳೆಯಲು ಅವರಿಗೆ ಸಂಬಂಧಪಟ್ಟ ಕಡತಗಳನ್ನು ವರ್ಗೀಕರಿಸಲು ಮುಂದಾದ ಎನ್‌ಡಿಎ ಸರ್ಕಾರವೇ ಅಂತಿಮ ಹೇಳಿಕೆ ನೀಡಬೇಕು ಎಂದು ಹೇಳಿದರು.

ಪಶ್ಚಿಮ ಬಂಗಾಳ ಬಿಜೆಪಿಯ ಉಪಾಧ್ಯಕ್ಷರಾಗಿದ್ದ ಚಂದ್ರ, ‘ವರ್ಗೀಕರಿಸಲ್ಪಟ್ಟ ಕಡತಗಳು ರಹಸ್ಯ ಮಾಹಿತಿ ಮತ್ತು ದಾಖಲೆಗಳು ಬಹಿರಂಗವಾಗಿದ್ದು, ನೇತಾಜಿಯವರ ಸಾವು 1945ರ ಆ.18ರಂದು ತೈವಾನ್‌ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಸಂಭವಿಸಿತು ಎಂಬುದನ್ನು ತೋರಿಸುತ್ತದೆ. ಸ್ವಾತಂತ್ರ್ಯಾನಂತರ ಅವರು ಭಾರತಕ್ಕೆ ಮರಳಲು ಬಯಸಿದ್ದರು. ಅವರ ಅವಶೇಷಗಳನ್ನು ರೆಂಕೋಜಿ ಮಂದಿರದಲ್ಲಿ ಇಟ್ಟಿರುವುದು ಅವಮಾನಕರ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಭಾರತದ ಸ್ವಾತಂತ್ರ್ಯಕ್ಕೆ ಶ್ರಮಿಸಿದ ಅವರ ಅವಶೇಷಗಳು ಇಲ್ಲಿನ ಮಣ್ಣನನ್ನು ಮುಟ್ಟಬೇಕು. ಈ ಬಗ್ಗೆ ಕಳೆದ ಮೂರುವರೆ ವರ್ಷಗಳಿಂದ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆಯಲಾಗುತ್ತಿದೆ. ನೆತಾಜಿಯವರ ಪುತ್ರಿ ಅನಿತಾ ಬೋಸ್ ಹಿಂದೂ ಸಂಪ್ರದಾಯದ ಪ್ರಕಾರ ಅವರ ಅಂತಿಮ ವಿಧಿವಿಧಾನಗಳನ್ನು ಪೂರೈಸಬಯಸಿದ್ದಾರೆ’ ಎಂದ ಚಂದ್ರ, ‘ರೆಂಕೋಜಿಯಲ್ಲಿರುವ ಅವಶೇಷಗಳು ನೆತಾಜಿಯವರದ್ದಲ್ಲ ಎಂದು ಭಾರತ ಸರ್ಕಾರಕ್ಕೆ ಅನ್ನಿಸುತ್ತಿದ್ದರೆ ಅವುಗಳ ನಿರ್ವಹಣೆಯ ಖರ್ಚನ್ನು ಕೊಡಬಾರದು’ ಎಂದು ಆಗ್ರಹಿಸಿದರು.