ಕರ್ನಾಟಕ ಹಾಗೂ ಕೇರಳದ ಸಿಂಡಿಕೇಟ್‌ ಮೂಲಕ ಹಣ ಸಂಗ್ರಹಿಸುತ್ತಿದ್ದ ಪಿಎಫ್‌ಐ ಉಗ್ರ ಸೆರೆ

| Published : Jan 06 2025, 01:01 AM IST / Updated: Jan 06 2025, 04:22 AM IST

ಸಾರಾಂಶ

ಕರ್ನಾಟಕ ಹಾಗೂ ಕೇರಳದಲ್ಲಿರುವ ಸಿಂಡಿಕೇಟ್‌ಗಳ ಮೂಲಕ ದುಬೈನಿಂದ ಬರುತ್ತಿದ್ದ ಅಕ್ರಮ ಹಣವನ್ನು ಭಾರತದ ಪಿಎಫ್‌ಐ ಕೇಡರ್‌ಗಳಿಗೆ ಉಗ್ರ ಚಟುವಟಿಕೆಗಾಗಿ ವಿತರಿಸುತ್ತಿದ್ದ ಮೊಹಮ್ಮದ್‌ ಸಜ್ಜಾದ್‌ ಆಲಂ ಎಂಬಾತನನ್ನು ಎನ್‌ಐಎ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.

 ನವದೆಹಲಿ : ಕರ್ನಾಟಕ ಹಾಗೂ ಕೇರಳದಲ್ಲಿರುವ ಸಿಂಡಿಕೇಟ್‌ಗಳ ಮೂಲಕ ದುಬೈನಿಂದ ಬರುತ್ತಿದ್ದ ಅಕ್ರಮ ಹಣವನ್ನು ಭಾರತದ ಪಿಎಫ್‌ಐ ಕೇಡರ್‌ಗಳಿಗೆ ಉಗ್ರ ಚಟುವಟಿಕೆಗಾಗಿ ವಿತರಿಸುತ್ತಿದ್ದ ಮೊಹಮ್ಮದ್‌ ಸಜ್ಜಾದ್‌ ಆಲಂ ಎಂಬಾತನನ್ನು ಎನ್‌ಐಎ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.

ಬಿಹಾರದ ಚಂಪಾರಣ್‌ ಮೂಲದವನಾದ ಆಲಂ, ದುಬೈನಿಂದ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆಯೇ ರಾಷ್ಟ್ರೀಯ ತನಿಖಾಧಿಕಾರಿಗಳ ತಂಡ ಬಂಧಿಸಿದೆ.

ನಿಷೇಧಿತ ಪಿಎಫ್‌ಐ ಸಂಘಟನೆಗೆ ದುಬೈನಿಂದ ಹಣ ಸರಬರಾಜು ಮಾಡುತ್ತಿದ್ದ ಆಲಂ ಮೇಲೆ ಈ ಮೊದಲೇ ಅರೆಸ್ಟ್‌ ವಾರಂಟ್‌ ಹಾಗೂ ಲುಕ್‌ ಔಟ್‌ ನೋಟಿಸ್‌ ಜಾರಿ ಮಾಡಲಾಗಿತ್ತು.

ಪಿಎಫ್‌ಐನ ಈ ಕೇಡರ್‌ ಸಮಾಜದ ವಿವಿಧ ಧರ್ಮ ಹಾಗೂ ಗುಂಪುಗಳ ನಡುವೆ ದ್ವೇಷ ಹಾಗೂ ಭಯದ ವಾತಾವರಣ ಸೃಷ್ಟಿಸಿ ಶಾಂತಿ, ಸಾಮರಸ್ಯ ಕದಡುತ್ತಿತ್ತು. ಜತೆಗೆ, 2047ರ ಹೊತ್ತಿಗೆ ಭಾರತವನ್ನು ಇಸ್ಲಾಂ ದೇಶವನ್ನಾಗಿಸಲು ಕ್ರಿಮಿನಲ್‌ ಶಕ್ತಿಗಳನ್ನು ಬಳಸಿ ತನ್ನ ಸಿದ್ಧಾಂತಗಳನ್ನು ಹರಡುತ್ತಿತ್ತು. ಇದರ ಮೇಲೆ 2022ರ ಜುಲೈನಲ್ಲೇ ಬಿಹಾರದ ಫೂಲ್ವಾರಿ ಶರೀಫ್‌ ಪೊಲೀಸರು ಪ್ರಕರಣ ದಾಖಲಿಸಿದ್ದರು. ಪ್ರಕರಣವನ್ನು ತನ್ನ ಕೈಗೆತ್ತಿಕೊಂಡ ಎನ್‌ಐಎ 17 ಜನರ ವಿರುದ್ಧ ಚಾರ್ಜ್‌ಶೀಟ್‌ ಸಿದ್ಧಪಡಿಸಿದ್ದು, ಬಂಧಿತ ಆಲಂ 18ನೆಯವನು.