ಸಾರಾಂಶ
ಸಮೋಸಾ ತರಿಸುವಷ್ಟೂ ಕಾಂಗ್ರೆಸ್ ಬಳಿ ಹಣವಿಲ್ಲ. ಇತ್ತೀಚೆಗೆ ನಡೆದ ಕೂಟದ ಸಭೆಯಲ್ಲಿ ಕೇವಲ ಟೀ ಮತ್ತು ಬಿಸ್ಕತ್ತುಗಳನ್ನಷ್ಟೇ ಕೊಟ್ಟರು’ ಎಂದು ಜೆಡಿಯು ಸಂಸದ ಸುನೀಲ್ ಕುಮಾರ್ ಪಿಂಟು ಟೀಕಿಸಿದ್ದಾರೆ.
ನವದೆಹಲಿ: ‘ಇಂಡಿಯಾ’ ಕೂಟದ ಸಭೆಗಳು ಕೇವಲ ಟೀ ಮತ್ತು ಸಮೋಸಾಗಳಿಗಷ್ಟೇ ಸೀಮಿತವಾಗಿದೆ ಎಂದು ಇತ್ತೀಚೆಗೆ ವ್ಯಂಗ್ಯವಾಡಿದ್ದ ಜೆಡಿಯು ಸಂಸದ ಸುನೀಲ್ ಕುಮಾರ್ ಪಿಂಟು, ಇದೀಗ ‘ಸಮೋಸಾ ತರಿಸುವಷ್ಟೂ ಕಾಂಗ್ರೆಸ್ ಬಳಿ ಹಣವಿಲ್ಲ. ಇತ್ತೀಚೆಗೆ ನಡೆದ ಕೂಟದ ಸಭೆಯಲ್ಲಿ ಕೇವಲ ಟೀ ಮತ್ತು ಬಿಸ್ಕತ್ತುಗಳನ್ನಷ್ಟೇ ಕೊಟ್ಟರು’ ಎಂದು ಟೀಕಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ‘ಮಂಗಳವಾರ ನಡೆದ ಸಭೆಯಲ್ಲಿ ಹಲವು ಪಕ್ಷಗಳ ದೊಡ್ಡ ನಾಯಕರು ಭಾಗಿಯಾಗಿದ್ದರು. ಆದರೆ ಯಾವುದೇ ಚರ್ಚೆ ನಡೆದಿಲ್ಲ. ನಿನ್ನೆಯ ಸಭೆ ಟೀ ಬಿಸ್ಕತ್ತುಗಳಿಗೆ ಸೀಮಿತವಾಗಿತ್ತು. ಏಕೆಂದರೆ ಕಾಂಗ್ರೆಸ್ ಇತ್ತೀಚೆಗೆ ಹಣದ ಕೊರತೆಯಿದೆ ಎಂದು ಹೇಳಿತ್ತು ಮತ್ತು ಅದು ಕೇಳಿದ 138, 1380 ಅಥವಾ 13,800 ರು. ದೇಣಿಗೆ ಇನ್ನೂ ಬಂದಿಲ್ಲ. ಹಾಗಾಗಿ, ನಿನ್ನೆಯ ಸಭೆಯು ಸಮೋಸಾ ಇಲ್ಲದೆ ಮತ್ತು ಯಾವುದೇ ಗಂಭೀರ ವಿಷಯದ ಬಗ್ಗೆ ಯಾವುದೇ ಚರ್ಚೆಯಿಲ್ಲದೆ ಕೇವಲ ಚಹಾ ಮತ್ತು ಬಿಸ್ಕತ್ನಲ್ಲಿ ಮುಗಿದಿದೆ’ ಎಂದಿದ್ದಾರೆ.