ಸಾರಾಂಶ
ಮಹದಾಯಿ ನದಿ ತಿರುವು ಯೋಜನೆಯಿಂದ ಗೋವಾದ ಮೇಲೆ ಯಾವುದೇ ಹೆಚ್ಚಿನ ಪರಿಣಾಮ ಆಗದು. ಆಗುವ ಸಣ್ಣಪುಟ್ಟ ಪರಿಣಾಮಗಳನ್ನು ಇತರೆ ಉಪಕ್ರಮಗಳ ಮೂಲಕ ಬಗೆಹರಿಸಿಕೊಳ್ಳಬಹುದು
ಪಣಜಿ: ಮಹದಾಯಿ ನದಿ ತಿರುವು ಯೋಜನೆಯಿಂದ ಗೋವಾದ ಮೇಲೆ ಯಾವುದೇ ಹೆಚ್ಚಿನ ಪರಿಣಾಮ ಆಗದು. ಆಗುವ ಸಣ್ಣಪುಟ್ಟ ಪರಿಣಾಮಗಳನ್ನು ಇತರೆ ಉಪಕ್ರಮಗಳ ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರದ ಅಧೀನದ ಸಿಎಸ್ಐಆರ್ (ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ) ಹಾಗೂ ಎನ್ಐಒ (ರಾಷ್ಟ್ರೀಯ ಸಮುದ್ರಶಾಸ್ತ್ರ ಸಂಸ್ಥೆ) ಮಹತ್ವದ ವರದಿಯೊಂದನ್ನು ಬಿಡುಗಡೆ ಮಾಡಿವೆ.
ಈ ವರದಿ ಮಹದಾಯಿ ಯೋಜನೆಯಿಂದ ತನಗೆ ಭಾರೀ ಅನ್ಯಾಯವಾಗಲಿದೆ ಎಂದು ಆರೋಪಿಸಿ ಯೋಜನೆಗೆ ಅಡ್ಡಿಪಡಿಸುತ್ತಿದ್ದ ಗೋವಾಕ್ಕೆ ಭಾರೀ ಮುಖಭಂಗ ಉಂಟುಮಾಡಿದೆ. ಈ ಹಿನ್ನೆಲೆಯಲ್ಲಿ ವರದಿ ವಿರೋಧಿಸಿ ಮಹದಾಯಿ ಆಂದೋಲನದ ಸದಸ್ಯರು ಡೋನಾ ಪೌಲ್ನಲ್ಲಿರುವ ಎನ್ಐಒ ಸಂಸ್ಥೆಯ ಕಟ್ಟಡದ ಎದುರು ಗುರುವಾರ ಪ್ರತಿಭಟನೆ ನಡೆಸಿ, ಸಂಸ್ಥೆಯ ಮೂವರು ಜಲಶಾಸ್ತ್ರಜ್ಞರು ನಡೆಸಿದ ಅಧ್ಯಯನಕ್ಕೆ ಸಂಬಂಧಿಸಿ ವಿವರಣೆ ನೀಡುವಂತೆ ಆಗ್ರಹಿಸಿದ್ದಾರೆ.
ವರದಿಯಲ್ಲಿ ಏನಿದೆ?:
‘ಅರ್ಥ್ ಸಿಸ್ಟಮ್ಸ್ ಸೈನ್ಸಸ್’ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯಲ್ಲಿ, ‘ಕರ್ನಾಟಕವು ಮಹದಾಯಿ ನದಿ ನೀರು ತಿರುವು ಯೋಜನೆ ಕೈಗೆತ್ತಿಕೊಂಡರೆ ಗೋವಾ ಮೇಲೆ ಹೆಚ್ಚಿನ ಪರಿಣಾಮವೇನೂ ಬೀರುವುದಿಲ್ಲ. ಈ ಯೋಜನೆ ಜಾರಿಯಿಂದ ಆಗುವ ಸಣ್ಣ ಪರಿಣಾಮವನ್ನು ಬದಲಿ ಉಪಕ್ರಮಗಳ ಮೂಲಕ ನಿಭಾಯಿಸಬಹುದಾಗಿದೆ’ ಎಂದು ಹೇಳಲಾಗಿದೆ.
ಮಹದಾಯಿ ಯೋಜನೆಗೆ ಅನುಮತಿ ನೀಡುವ ವಿಚಾರ ಅಂತಿಮ ಹಂತದ ಚರ್ಚೆಯಲ್ಲಿರುವಾಗ ಈ ವರದಿ ಪ್ರಕಟವಾಗಿರುವುದಕ್ಕೆ ರೆವಲ್ಯೂಷನರಿ ಗೋವನ್ಸ್ ಪಾರ್ಟಿ ಅಧ್ಯಕ್ಷ ಮನೋಜ್ ಪರಾಬ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರಿಸರವಾದಿ ರಾಜೇಂದ್ರ ಕೇರ್ಕರ್ ಅವರು, ಎನ್ಐಒ ವಿಜ್ಞಾನಿಗಳು ಕಚೇರಿಯಲ್ಲೇ ಕೂತು ವರದಿಯನ್ನು ಸಿದ್ಧಪಡಿಸಿದ್ದಾರೆ ಎಂದು ದೂರಿದ್ದಾರೆ. ವಿಜ್ಞಾನಿಗಳ ವರದಿ ಪ್ರಶ್ನಾರ್ಹವಾಗಿದೆ. ಕರ್ನಾಟಕದ ಜತೆಗೆ ಸೇರಿಕೊಂಡು ಈ ವರದಿ ಸಿದ್ಧಪಡಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಜತೆಗೆ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹಾಗೂ ಗೋವಾದ ಕಾಂಗ್ರೆಸ್ ನಾಯಕರು ಈ ವಿಚಾರದಲ್ಲಿ ತಮ್ಮ ನಿಲುವು ಸ್ಪಷ್ಟಪಡಿಸುವಂತೆಯೂ ಆಗ್ರಹಿಸಿದ್ದಾರೆ.
ಕರ್ನಾಟಕದಲ್ಲೂ ಕಾಂಗ್ರೆಸ್ ಸರ್ಕಾರವೇ ಇದ್ದು, ಮಹದಾಯಿ ಯೋಜನೆ ಕೈಬಿಡುವಂತೆ ಸಿದ್ದರಾಮಯ್ಯ ಸರ್ಕಾರಕ್ಕೆ ಒತ್ತಾಯಿಸಬೇಕು ಎಂದು ಆಗ್ರಹಿಸಿದ್ದಾರೆ.