ಕೋವಿಶೀಲ್ಡ್‌ ಪಡೆದ 10 ಲಕ್ಷ ಜನರಲ್ಲಿ 8 ಮಂದಿಗೆ ಮಾತ್ರ ಅಡ್ಡಪರಿಣಾಮ ಸಂಭವ: ತಜ್ಞ

| Published : May 02 2024, 12:19 AM IST / Updated: May 02 2024, 05:33 AM IST

Covid vaccines can cause terrible side effects If you know you will be shocked
ಕೋವಿಶೀಲ್ಡ್‌ ಪಡೆದ 10 ಲಕ್ಷ ಜನರಲ್ಲಿ 8 ಮಂದಿಗೆ ಮಾತ್ರ ಅಡ್ಡಪರಿಣಾಮ ಸಂಭವ: ತಜ್ಞ
Share this Article
  • FB
  • TW
  • Linkdin
  • Email

ಸಾರಾಂಶ

ಕೋವಿಶೀಲ್ಡ್‌ ಕೋವಿಡ್‌ ಲಸಿಕೆಯು ಅಲ್ಪಪ್ರಮಾಣದಲ್ಲಿ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು ಎಂದು ಆಸ್ಟ್ರಾಜೆನಿಕಾ ಕಂಪನಿಯ ತಪ್ಪೊಪ್ಪಿಗೆ ಬೆನ್ನಲ್ಲೇ, ಇಂಥ ಅಡ್ಡಪರಿಣಾಮಗಳು ಪ್ರತಿ 10 ಲಕ್ಷ ಜನರಲ್ಲಿ 7-8 ಜನರಲ್ಲಿ ಮಾತ್ರವೇ ಕಾಣಿಸಿಕೊಳ್ಳಬಹುದು ಎಂದು ಹಿರಿಯ ತಜ್ಞ ವೈದ್ಯರು ಹೇಳಿದ್ದಾರೆ.

ನವದೆಹಲಿ: ಕೋವಿಶೀಲ್ಡ್‌ ಕೋವಿಡ್‌ ಲಸಿಕೆಯು ಅಲ್ಪಪ್ರಮಾಣದಲ್ಲಿ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು ಎಂದು ಆಸ್ಟ್ರಾಜೆನಿಕಾ ಕಂಪನಿಯ ತಪ್ಪೊಪ್ಪಿಗೆ ಬೆನ್ನಲ್ಲೇ, ಇಂಥ ಅಡ್ಡಪರಿಣಾಮಗಳು ಪ್ರತಿ 10 ಲಕ್ಷ ಜನರಲ್ಲಿ 7-8 ಜನರಲ್ಲಿ ಮಾತ್ರವೇ ಕಾಣಿಸಿಕೊಳ್ಳಬಹುದು ಎಂದು ಹಿರಿಯ ತಜ್ಞ ವೈದ್ಯರು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಾಂಕ್ರಾಮಿಕ ರೋಗಶಾಸ್ತ್ರಜ್ಞ, ಐಸಿಎಂಆರ್‌ನ ಮಾಜಿ ವಿಜ್ಞಾನಿ ಡಾ. ರಮಣ್‌ ಗಂಗಾಖೇಡ್ಲರ್‌ ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಅವರು, ‘ಕೋವಿಶೀಲ್ಡ್‌ ಮೊದಲ ಲಸಿಕೆ ಪಡೆದಿರುವವರಲ್ಲಿ ಅಡ್ಡಪರಿಣಾಮ ಉಂಟಾಗುವ ಸಂಭವ ಹೆಚ್ಚಿರುತ್ತದೆ. ಆದರೆ ಎರಡನೇ ಮತ್ತು ಮೂರನೇ ಲಸಿಕೆ ಪಡೆದಂತೆಲ್ಲಾ ಅಡ್ಡಪರಿಣಾಮದ ಸಂಭವನೀಯತೆ ಕಡಿಮೆಯಾಗುತ್ತಾ ಸಾಗುತ್ತದೆ. ಆದರೆ ಅಡ್ಡಪರಿಣಾಮ ಕಾಣಿಸಿಕೊಂಡರೆ ಲಸಿಕೆ ಪಡೆದು ಗರಿಷ್ಠ ಮೂರು ತಿಂಗಳೊಳಗೆ ತ್ರೊಂಬೋಸಿಸ್‌ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಬಳಿಕ ಯಾವುದೇ ಅಪಾಯ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಕೋವಿಶೀಲ್ಡ್‌ ಲಸಿಕೆ ಪಡೆದ ಭಾರತೀಯರಿಗೆ ಯಾವುದೇ ಅಡ್ಡಪರಿಣಾಮ ಉಂಟಾಗುವುದಿಲ್ಲ’ ಎಂದು ತಿಳಿಸಿದ್ದಾರೆ.

ಭಾರತದಲ್ಲಿ 170 ಕೋಟಿ ಡೋಸ್‌ಗೂ ಹೆಚ್ಚಿನ ಪ್ರಮಾಣದ ಕೋವಿಶೀಲ್ಡ್‌ ನೀಡಲಾಗಿದೆ. ಅಂದರೆ ಅಂದಾಜು 80 ಕೋಟಿ ಜನರಿಗೆ ಕೋವಿಶೀಲ್ಡ್‌ ಲಸಿಕೆ ನೀಡಲಾಗಿದೆ. ಈ ಲೆಕ್ಕಾಚಾರದಲ್ಲಿ ಭಾರತದಲ್ಲಿ ಗರಿಷ್ಠ 65000 ಜನರಲ್ಲಿ ಅಡ್ಡಪರಿಣಾಮಳು ಕಾಣಿಸಿಕೊಂಡಿರುವ ಸಾಧ್ಯತೆ ಇದೆ.

ಕೋವಿಶೀಲ್ಡ್‌ ಅಡ್ಡ ಪರಿಣಾಮ: ಕ್ರಮಕ್ಕೆ ವಿಪಕ್ಷಗಳ ಆಗ್ರಹ

ನವದೆಹಲಿ/ಲಖನೌ: ಕೋವಿಶೀಲ್ಡ್‌ ಲಸಿಕೆಯನ್ನು ಯೂರೋಪ್‌ನ ಹಲವು ದೇಶಗಳಲ್ಲಿ 2021ರಲ್ಲೇ ನಿಷೇಧಿಸಿದ್ದರೂ ಭಾರತದಲ್ಲಿ ಬಿಜೆಪಿ ಸರ್ಕಾರ ಲಸಿಕೆ ತಯಾರಕರಿಂದ ರಾಜಕೀಯ ದೇಣಿಗೆಯನ್ನು ಸುಲಿಗೆ ಮಾಡಿ ಜನರ ಜೀವ ಪಣಕ್ಕಿಟ್ಟಿತ್ತು ಎಂಬುದಾಗಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಆರೋಪಿಸಿದ್ದಾರೆ. 

ಕೋವಿಶೀಲ್ಡ್‌ ಮೂಲ ತಯಾರಕ ಕಂಪನಿ ಅಸ್ಟ್ರಾಜೆನಿಕಾ ಲಸಿಕೆಯಿಂದ ಉಂಟಾಗಬಹುದಾದ ಅಡ್ಡಪರಿಣಾಮಗಳ ಕುರಿತು ಒಪ್ಪಿಕೊಂಡ ಬೆನ್ನಲ್ಲೇ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿವೆ.ಈ ಕುರಿತು ಪ್ರತಿಕ್ರಿಯಿಸಿರುವ ಅಖಿಲೇಶ್‌ ಯಾದವ್‌ರ ಪತ್ನಿ ಡಿಂಪಲ್‌, ‘ಭಾರತದಲ್ಲಿ ಕೋವಿಡ್‌ ಲಸಿಕೆಯನ್ನು ಬಲವಂತವಾಗಿ ಹೇರಲಾಗಿತ್ತು. ಈಗ ಇದರ ಕಾರಣ ಬಹಿರಂಗವಾಗುತ್ತಿದೆ’ ಎಂದು ಹರಿಹಾಯ್ದಿದ್ದರೆ, ಎಸ್ಪಿ ಕಾರ್ಯದರ್ಶಿ ಶಿವಪಾಲ್‌ ಯಾದವ್‌ ಕಡಿಮೆ ಗುಣಮಟ್ಟದ ಲಸಿಕೆ ನೀಡಿ ಕಮಿಷನ್‌ ಪಡೆದಿರುವ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ. 

ತ್ವರಿತ ಹೃದಯಾಘಾತಕ್ಕೆ ಕಾರಣ: ಇದೇ ವೇಳೆ ದೆಹಲಿಯ ಆರೋಗ್ಯ ಸಚಿವ ಸೌರಭ್‌ ಭಾರದ್ವಾಜ್‌ ಮಾತನಾಡಿ, ‘ಕೋವಿಡ್‌ ಲಸಿಕೆ ಪಡೆದ ಬಳಿಕ ಭಾರತದಲ್ಲಿ ತ್ವರಿತ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕೆ ಮೂಲ ಕಾರಣ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಅಡ್ಡಪರಿಣಾಮಗಳನ್ನು ತಡೆಯಲು ಕೇಂದ್ರ ಸರ್ಕಾರ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.