ಬ್ಲಡ್‌ ಮನಿ ಒಂದೇ ನಿಮಿಷಾ ಉಳಿಸಬಲ್ಲದು : ಕೇಂದ್ರ

| N/A | Published : Jul 15 2025, 01:01 AM IST / Updated: Jul 15 2025, 04:46 AM IST

Nimisha Priya Supreme Court

ಸಾರಾಂಶ

‘ಯೆಮೆನ್‌ನಲ್ಲಿ ಜು.16ರಂದು ಗಲ್ಲುಶಿಕ್ಷೆಗೆ ಗುರಿಯಾಗಲಿರುವ  ನಿಮಿಷ ಪ್ರಿಯಾ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಹೆಚ್ಚಿನ ಅಧಿಕಾರ ಇಲ್ಲ.  ಪ್ರಕರಣದ ಸಂತ್ರಸ್ತ ಕುಟುಂಬಕ್ಕೆ ಬ್ಲಡ್‌ ಮನಿ ನೀಡುವುದೊಂದೇ ಸದ್ಯಕ್ಕೆ ಆಕೆಯನ್ನು ಉಳಿಸಬಲ್ಲ ದಾರಿ ’ ಎಂದು ಕೇಂದ್ರ ಸರ್ಕಾರ  ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

  ನವದೆಹಲಿ :  ‘ಯೆಮೆನ್‌ನಲ್ಲಿ ಜು.16ರಂದು ಗಲ್ಲುಶಿಕ್ಷೆಗೆ ಗುರಿಯಾಗಲಿರುವ ಕೇರಳ ಮೂಲದ ನರ್ಸ್‌ ನಿಮಿಷ ಪ್ರಿಯಾ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಹೆಚ್ಚಿನ ಅಧಿಕಾರ ಇಲ್ಲ. ಆದರೂ ಆಕೆಯ ಉಳಿವಿಗೆ ಸಾಧ್ಯವಾದ ಎಲ್ಲ ಗರಿಷ್ಠ ಪ್ರಯತ್ನ ಮಾಡಲಾಗುತ್ತಿದೆ. ಪ್ರಕರಣದ ಸಂತ್ರಸ್ತ ಕುಟುಂಬಕ್ಕೆ ಬ್ಲಡ್‌ ಮನಿ ನೀಡುವುದೊಂದೇ ಸದ್ಯಕ್ಕೆ ಆಕೆಯನ್ನು ಉಳಿಸಬಲ್ಲ ದಾರಿ ’ ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಅಲ್ಲದೆ, ಇದೊಂದು ತೀರಾ ಸೂಕ್ಷ್ಮ ವಿಚಾರವಾಗಿದ್ದು, ಸರ್ಕಾರದ ಮುಂದಿರುವ ರಾಜತಾಂತ್ರಿಕ ಆಯ್ಕೆಗಳೂ ತೀರಾ ಕಡಿಮೆ ಎಂದು ತಿಳಿಸಿದೆ. ಇದನ್ನು ಪರಿಗಣಿಸಿದ ಕೋರ್ಟ್‌, ಕೈಗೊಮಡ ಕ್ರಮಗಳ ಬಗ್ಗೆ ಜು.18ಕ್ಕೆ ಮಾಹಿತಿ ನೀಡಲು ಸೂಚಿಸಿ ವಿಚಾರಣೆ ಮುಂದೂಡಿದೆ.

ಯೆಮೆನ್‌ ಪ್ರಜೆ ಹತ್ಯೆ ಪ್ರಕರಣದಲ್ಲಿ ಕೇರಳ ಮೂಲದ ನರ್ಸ್‌ ನಿಮಿಷ ಪ್ರಿಯಾರನ್ನು ಜು.16ರಂದು ಗಲ್ಲಿಗೇರಿಸಲು ಅಲ್ಲಿ ನಿರ್ಧರಿಸಲಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುವಂತೆ ಆಗ್ರಹಿಸಿ ಹಿರಿಯ ವಕೀಲ ರಜೆಂತ್‌ ಬಸಂತ್‌ ಅವರು ಸೇವ್‌ ನಿಮಿಷ ಪ್ರಿಯಾ ಆ್ಯಕ್ಷನ್‌ ಕೌನ್ಸಿಲ್‌ ಪರವಾಗಿ ಅರ್ಜಿ ಸಲ್ಲಿಸಿದ್ದರು.

ಸೋಮವಾರ ಇದರ ವಿಚಾರಣೆ ವೇಳೆ ವಾದ ಮಂಡಿಸಿದ ಕೇಂದ್ರ ಸರ್ಕಾರದ ವಕೀಲರು, ‘ಯೆಮೆನ್‌ನಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳಲು ಅವಕಾಶ ಇಲ್ಲ. ಸರ್ಕಾರವು ಯೆಮೆನ್‌ನ ಅಧಿಕಾರಿಗಳ ಜತೆಗೆ ನಾವು ಸಂಪರ್ಕದಲ್ಲಿದ್ದೇವೆ. ಪಬ್ಲಿಕ್‌ ಪ್ರಾಸಿಕ್ಯೂಟರ್‌ ಕೂಡ ಸಂಪರ್ಕದಲ್ಲಿದ್ದಾರೆ. ಮಾತುಕತೆ ನಡೆಯುತ್ತಿರುವ ಈ ಹಂತದಲ್ಲಿ ನಿಮಿಷಾ ಪ್ರಿಯಾ ಅವರಿಗೆ ನೀಡಲಾಗಿರುವ ಗಲ್ಲು ಶಿಕ್ಷೆಯ ಜಾರಿ ಮುಂದೂಡಲು ಯತ್ನಿಸಲಾಗುತ್ತಿದೆ’ ಎಂದರು.

‘ನಿಮಿಷ ಪ್ರಿಯಾರನ್ನು ಉಳಿಸುವ ಏಕೈಕ ಮಾರ್ಗವೆಂದರೆ ಬ್ಲಡ್‌ ಮನಿ ಅಂದರೆ ಹಣ ನೀಡಿ ಪ್ರಕರಣ ಇತ್ಯರ್ಥ ಮಾಡಿಕೊಳ್ಳುವುದಷ್ಟೇ ಆಗಿದೆ. ಪ್ರಕರಣದಲ್ಲಿ ಮೃತ ಯೆಮೆನ್ ಪ್ರಜೆಯ ಕುಟುಂಬ ಹಣ ಪಡೆಯಲು ಸಿದ್ಧವಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ವಸ್ತುಸ್ಥಿತಿ ಕಾಯ್ದುಕೊಳ್ಳುವಂತೆ ಅಲ್ಲಿನ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ’ ಎಂದು ಪೀಠಕ್ಕೆ ತಿಳಿಸಲಾಯಿತು. ಆ ಬಳಿಕ ಪೀಠವು ಮುಂದಿನ ವಿಚಾರಣೆಯನ್ನು ಜು.18ಕ್ಕೆ ನಿಗದಿ ಮಾಡಿತು.

Read more Articles on