ಪಹಲ್ಗಾಂ ಭಯೋತ್ಪಾದಕ ದಾಳಿ ಬೆನ್ನಲ್ಲೇ, ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಅವರು ಶುಕ್ರವಾರ ಕಾಶ್ಮೀರಕ್ಕೆ ಭೇಟಿ ಭದ್ರತೆ ಪರಿಶೀಲನಾ ಸಭೆ ನಡೆಸಿದ್ದಾರೆ.

ಶ್ರೀನಗರ: ಪಹಲ್ಗಾಂ ಭಯೋತ್ಪಾದಕ ದಾಳಿ ಬೆನ್ನಲ್ಲೇ, ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಅವರು ಶುಕ್ರವಾರ ಕಾಶ್ಮೀರಕ್ಕೆ ಭೇಟಿ ಭದ್ರತೆ ಪರಿಶೀಲನಾ ಸಭೆ ನಡೆಸಿದ್ದಾರೆ.

ಈ ವೇಳೆ ಮಾತನಾಡಿದ ಜಮ್ಮು ಕಾಶ್ಮೀರ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ, ‘ಪಹಲ್ಗಾಂ ದಾಳಿ ಹಿಂದಿರುವ ಪ್ರತಿಯೊಬ್ಬ ಉಗ್ರನನ್ನು ಬೇಟೆಯಾಡಿ, ಆ ಹೇಯ ಕೃತ್ಯಕ್ಕೆ ಭಾರೀ ಬೆಲೆ ತೆರುವಂತೆ ಮಾಡಬೇಕು. ಅಂತೆಯೇ, ಉಗ್ರರು ನಿರ್ಮಿಸಿಕೊಂಡಿರುವ ಮೂಲಸೌಕರ್ಯಗಳನ್ನು ಹೊಸಕಿಹಾಕಬೇಕು’ ಎಂದು ಅಬ್ಬರಿಸಿದ್ದಾರೆ.

‘ಭಾರತೀಯ ಸೇನೆ, ಪೊಲೀಸರು ಮತ್ತು ಸಿಎಪಿಎಫ್‌(ಕೇಂದ್ರ ಸಶಸ್ತ್ರ ಪೊಲೀಸ್ ಪಡೆ) ಸಿಬ್ಬಂದಿಯ ಧೈರ್ಯದ ಮೇಲೆ ಜನರಿಗೆ ಪೂರ್ಣ ವಿಶ್ವಾಸವಿದೆ. ಎಲ್ಲಾ ಪಡೆಗಳು ಒಟ್ಟಾಗಿ ದಾಳಿಕೊರರು ಮತ್ತು ಸಂಚುಕೋರರನ್ನು ಗುರುತಿಸಿ ಹೊಡೆದುಹಾಕಬೇಕು’ ಎಂದು ಸೇನೆಯ ಉನ್ನತ ಅಧಿಕಾರಿಗಳಿಗೆ ಸೂಚಿಸಿದ್ದಾರೆ.