ಭಾರತವು ಪಾಕ್‌ನ 8 ಉಗ್ರಶಿಬಿರಗಳ ಮೇಲೆ ದಾಳಿ ನಡೆಸಿದ ನಂತರ, ಪಂಜಾಬ್‌ನ ಅಮೃತಸರದಲ್ಲಿರುವ ಸ್ವರ್ಣ ಮಂದಿರವನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನವು ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಮೂಲಕ ದಾಳಿ ಮಾಡಲು ಯತ್ನಿಸಿತ್ತು.

ಅಮೃತಸರ : ಭಾರತವು ಪಾಕ್‌ನ 8 ಉಗ್ರಶಿಬಿರಗಳ ಮೇಲೆ ದಾಳಿ ನಡೆಸಿದ ನಂತರ, ಪಂಜಾಬ್‌ನ ಅಮೃತಸರದಲ್ಲಿರುವ ಸ್ವರ್ಣ ಮಂದಿರವನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನವು ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಮೂಲಕ ದಾಳಿ ಮಾಡಲು ಯತ್ನಿಸಿತ್ತು. ಆದರೆ ಸೇನಾ ವಾಯು ರಕ್ಷಣಾ ವ್ಯವಸ್ಥೆಗಳು ಸ್ವರ್ಣಮಂದಿರದತ್ತ ಬಂದ ಎಲ್ಲಾ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಹೊಡೆದುರುಳಿಸಿದವು ಎಂದು ಸೇನೆ ಹೇಳಿದೆ.

15 ನೇ ಪದಾತಿ ದಳದ ಜನರಲ್ ಆಫೀಸರ್ ಕಮಾಂಡಿಂಗ್ (ಜಿಒಸಿ) ಮೇಜರ್ ಜನರಲ್ ಕಾರ್ತಿಕ್ ಸಿ ಶೇಷಾದ್ರಿ ಸೋಮವಾರ ಮಾತನಾಡಿ, ‘ಪಾಕ್‌ ಪ್ರತಿದಾಳಿ ನಿರೀಕ್ಷಿಸಿದ್ದೆವು. ಪಾಕ್‌ ಗುರಿಗಳಲ್ಲಿ ಗೋಲ್ಡನ್ ಟೆಂಪಲ್ ಅತ್ಯಂತ ಪ್ರಮುಖವಾದದ್ದು. ಹೀಗಾಗಿ ನಾವು ಆಕಾಶ್ ಕ್ಷಿಪಣಿ ವ್ಯವಸ್ಥೆ, ಎಲ್ -70 ಏರ್ ಡಿಫೆನ್ಸ್ ಗನ್ಸ್ ವಾಯುರಕ್ಷಣಾ ವ್ಯವಸ್ಥೆ ಸಜ್ಜು ಮಾಡಿದ್ದೆವು’ ಎಂದರು.

‘ನಮ್ಮ ನಿರೀಕ್ಷೆಯಂತೆ ಮೇ 8 ರಂದು ಪಾಕಿಸ್ತಾನವು ಮಾನವರಹಿತ ವೈಮಾನಿಕ ಶಸ್ತ್ರಾಸ್ತ್ರಗಳು, ಮುಖ್ಯವಾಗಿ ಡ್ರೋನ್‌ಗಳು ಮತ್ತು ದೀರ್ಘ-ಶ್ರೇಣಿಯ ಕ್ಷಿಪಣಿ ಬಳಸಿ ಬೃಹತ್ ವಾಯುದಾಳಿ ನಡೆಸಿತು. ಆದರೆ ನಮ್ಮ ಧೈರ್ಯಶಾಲಿ ಮತ್ತು ಜಾಗರೂಕ ಸೇನಾ ವಾಯು ರಕ್ಷಣಾ ಗನ್ನರ್‌ಗಳು ಎಲ್ಲಾ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಹೊಡೆದುರುಳಿಸಿದವು. ಹೀಗಾಗಿ ನಮ್ಮ ಪವಿತ್ರ ಸುವರ್ಣ ದೇವಾಲಯದ ಮೇಲೆ ಒಂದು ಗೀರು ಕೂಡ ಬೀಳಲು ಅವಕಾಶ ನೀಡಲಿಲ್ಲ’ ಎಂದರು.