ಮಧ್ಯಪ್ರದೇಶದ ರತ್ಲಾಂನಲ್ಲಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿಗೆ ಬೆಂಕಿ ತಗುಲಿದ ಮರುದಿನವೇ, ಬಿಹಾರದ ಸಾಸಾರಾಂನಿಂದ ಪಟನಾಕ್ಕೆ ತೆರಳುತ್ತಿದ್ದ ಪ್ಯಾಸೆಂಜರ್‌ ರೈಲಿಗೆ ಬೆಂಕಿ ಹೊತ್ತಿಕೊಂಡ ಘಟನೆ ಸೋಮವಾರ ನಡೆದಿದೆ.

ಮ.ಪ್ರ. ರೈಲಿಗೆ ಬೆಂಕಿ ಬಿದ್ದ ಮರುದಿನವೇ ಘಟನೆ

ನವದೆಹಲಿ: ಮಧ್ಯಪ್ರದೇಶದ ರತ್ಲಾಂನಲ್ಲಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿಗೆ ಬೆಂಕಿ ತಗುಲಿದ ಮರುದಿನವೇ, ಬಿಹಾರದ ಸಾಸಾರಾಂನಿಂದ ಪಟನಾಕ್ಕೆ ತೆರಳುತ್ತಿದ್ದ ಪ್ಯಾಸೆಂಜರ್‌ ರೈಲಿಗೆ ಬೆಂಕಿ ಹೊತ್ತಿಕೊಂಡ ಘಟನೆ ಸೋಮವಾರ ನಡೆದಿದೆ. ಅದೃಷ್ಟವಶಾತ್‌ ಯಾವುದೇ ಸಾವು ಸಂಭವಿಸಿಲ್ಲ. ರೈಲು ಮುಂಜಾನೆ 6ಕ್ಕೆ ಸಾಸಾರಾಂನಿಂದ ಪಟನಾಕ್ಕೆ ತೆರಳಲಿತ್ತು. ಅದಕ್ಕೂ ಮುನ್ನವೇ ಸಾಸಾರಾಂ ನಿಲ್ದಾಣದಲ್ಲಿದ್ದಾಗಲೇ ಬೆಂಕಿ ಹೊತ್ತಿಕೊಂಡಿದೆ. ಶಾರ್ಟ್‌ ಸರ್ಕೀಟ್‌ನಿಂದ ಅವಘಡ ಸಂಭವಿಸಿರುವ ಶಂಕೆಯಿದೆ. ಬೆಂಕಿ ತಗುಲಿದ ಕೆಲವೇ ಕ್ಷಣಗಳಲ್ಲಿ ದಟ್ಟವಾದ ಹೊಗೆ ವ್ಯಾಪಿಸಿದೆ. ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟು ಬೆಂಕಿ ನಂದಿಸಿದ್ದಾರೆ. ಆದರೆ ರೈಲಿನ ಒಂದು ಬೋಗಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಪ್ರಯಾಣಿಕರೆಲ್ಲ ಸುರಕ್ಷಿತವಾಗಿದ್ದಾರೆ.

==

ಸೋಶಿಯಲ್‌ ಮೀಡಿಯಾ ಪ್ರಭಾವ ಬಳಸಿ ಟಿವಿಕೆ ಪಕ್ಷ ಗೆಲುವು: ಸ್ಟಾಲಿನ್‌ ಆರೋಪತಂಜಾವೂರು: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ ಪಕ್ಷವು ಕ್ಷೇತ್ರ ಕಾರ್ಯ ಮಾಡದೆ, ಸಾಮಾಜಿಕ ಮಾಧ್ಯಮದ ಮೂಲಕ ಜನರನ್ನು ಪ್ರಭಾವಿಸಿ ಗೆದ್ದಿದೆ ಎಂದು ಡಿಎಂಕೆ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸೋಮವಾರ ಆರೋಪಿಸಿದ್ದಾರೆ. ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಟಿವಿಕೆ ಕ್ಷೇತ್ರದಲ್ಲಿ ಯಾವುದೇ ಕೆಲಸ ಮಾಡಲಿಲ್ಲ. ಬೂತ್ ಏಜೆಂಟ್‌ಗಳನ್ನು ಕೂಡ ಹಲವು ಕಡೆ ನೇಮಕ ಮಾಡಲಿಲ್ಲ. ಆದರೆ ಮಕ್ಕಳ ಮೂಲಕ ಕುಟುಂಬಗಳನ್ನು ಸಾಮಾಜಿಕ ಮಾಧ್ಯಮದಿಂದ ಪ್ರಭಾವಿಸಿ ಗೆದ್ದರು. ಇದು ನಮ್ಮ ಗಮನಕ್ಕೆ ಬರಲಿಲ್ಲ’ ಎಂದರು. ‘ಡಿಎಂಕೆ ಚುನಾವಣಾ ರಣತಂತ್ರದಲ್ಲಿ ಬೂತ್ ಕಮಿಟಿಗಳ ರಚನೆ, ಪಕ್ಷ ಸದಸ್ಯತ್ವ ಅಭಿಯಾನ, ಯುವ ಮತ್ತು ಮಹಿಳಾ ಸಮ್ಮೇಳನಗಳು, ವಿಶೇಷ ಚುನಾವಣಾ ಪಟ್ಟಿ ನವೀಕರಣ ಕೆಲಸ ಸೇರಿದಂತೆ ಬಹಳ ದೊಡ್ಡ ಮಟ್ಟದಲ್ಲಿ ಕ್ಷೇತ್ರ ಕೆಲಸ ಮಾಡಿತ್ತು. ಆದರೂ ಸ್ಥಳೀಯವಾಗಿ ಏನೂ ಕೆಲಸ ಮಾಡದ ಟಿವಿಕೆ ಹೇಗೆ ಗೆದ್ದಿತು?’ ಎಂದು ಪ್ರಶ್ನಿಸಿದರು.

==

ಬಂಗಾಳದಲ್ಲಿ ಅಧಿಕಾರಕ್ಕೆ ಬಂದ ಬೆನ್ನಲ್ಲೇ ರಸ್ತೆಗಳ ಬಣ್ಣ ಬದಲಿಸಿದ ಬಿಜೆಪಿ

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಸರ್ಕಾರ ಪತನಗೊಂಡು ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ರಸ್ತೆ ವಿಭಜಕಗಳಿಗೆ ಹಾಕಲಾಗಿದ್ದ ಡಿವೈಡರ್ ಬಣ್ಣವನ್ನು ಬದಲಿಸಲಾಗಿದೆ. ಈ ಹಿಂದೆ ಟಿಎಂಸಿ ಸರ್ಕಾರವಿದ್ದಾಗ ಬಿಳಿ ಮತ್ತು ನೀಲಿ ಬಣ್ಣವಿತ್ತು. ಆದರೆ ಈಗ ಅದನ್ನು ಬದಲಿಸಿ ಹಳದಿ ಮತ್ತು ಬಿಳಿ ಬಣ್ಣ ಬಳಿಯಲಾಗಿದೆ.

==

ಹೋರ್ಮುಜ್‌ ನಿರ್ವಹಣೆಗೆ ಸಮಿತಿ ರಚಿಸಿದ ಇರಾನ್‌

ಟೆಹ್ರಾನ್‌: ಹೋರ್ಮುಜ್‌ ಅನ್ನು ಇರಾನ್‌ನಿಂದ ವಶಪಡಿಸಿಕೊಳ್ಳುವ ಅಮೆರಿಕದ ಆಸೆಗೆ ಇರಾನ್‌ ಮತ್ತೆ ಶಾಕ್‌ ನೀಡಿದೆ. ಹೋರ್ಮುಜ್‌ ಜಲಸಂಧಿ ನಿರ್ವಹಣೆಗೆ ಸಮಿತಿ ರಚಿಸಿದ್ದು, ಈ ಮೂಲಕ ತನ್ನ ನಿಯಂತ್ರಣವನ್ನು ಮತ್ತಷ್ಟು ಬಿಗಿಗೊಳಿಸಿದೆ.

ಹೋರ್ಮುಜ್ ಅನ್ನು ಇರಾನ್‌ನಿಂದ ಮುಕ್ತಗೊಳಿಸಬೇಕು ಎನ್ನುವುದು ಅಮೆರಿಕದ ಪಟ್ಟು. ಸಂಧಾನ ಮಾತುಕತೆ ಸಂದರ್ಭದಲ್ಲಿಯೂ ಅದನ್ನು ಪ್ರಸ್ತಾಪಿಸಿತ್ತು. ಆದರೆ ಇದಕ್ಕೆ ಇರಾನ್‌ ಒಪ್ಪಿರಲಿಲ್ಲ. ಈ ನಡುವೆ ಇರಾನ್‌ ಸಮಿತಿ ರಚಿಸಿ ಶುಲ್ಕ ಸೇರಿ ನಾನಾ ಚಟುವಟಿಕೆಗಳ ನಿಯಂತ್ರಣಕ್ಕೆ ಮುಂದಾಗಿದೆ ಎನ್ನಲಾಗಿದೆ.

ಈ ಬಗ್ಗೆ ಇರಾನ್‌ನ ಸರ್ವೋಚ್ಛ ರಾಷ್ಟ್ರೀಯ ಭದ್ರತಾ ಮಂಡಳಿ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.‘ ಪರ್ಷಿಯನ್‌ ಜಲಸಂಧಿ ಪ್ರಾಧಿಕಾರ( ಪಿಜಿಎಸ್‌ಎ)ವನ್ನು ಸ್ಥಾಪಿಸಲಾಗಿದೆ. ಇದು ಹೋರ್ಮುಜ್‌ ಕಾರ್ಯಾಚರಣೆಗಳು ಮತ್ತು ಇತ್ತೀಚಿನ ಬೆಳವಣಿಗೆಗಳ ಕುರಿತು ಮಾಹಿತಿ ನೀಡಲಿದೆ’ ಎಂದಿದೆ. ಈ ಸಮಿತಿ ಯಾವ ಕಾರ್ಯಗಳನ್ನು ಮಾಡುತ್ತದೆ ಎನ್ನುವುದು ಸ್ಪಷ್ಟವಾಗಿಲ್ಲ.

==

ಬಂಗಾಳ: ಧರ್ಮಾಧಾರಿತ ಗೌರವಧನ ರದ್ದು

ಕೋಲ್ಕತಾ: ಪಶ್ಚಿಮ ಬಂಗಾಳದ ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರವು ಧರ್ಮದ ಆಧಾರದ ಮೇಲೆ ಇಮಾಮ್‌ಗಳು, ಮುಲ್ಲಾಗಳು ಮತ್ತು ದೇಗುಲಗಳ ಅರ್ಚಕರಿಗೆ ನೀಡಲಾಗುತ್ತಿದ್ದ ಮಾಸಿಕ ಗೌರವಧನ ಮತ್ತು ಕಲ್ಯಾಣ ಯೋಜನೆಗಳನ್ನು ಜೂನ್‌ನಿಂದ ನಿಲ್ಲಿಸಲು ನಿರ್ಧರಿಸಿದೆ. ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಈ ಹಿಂದೆ ಟಿಎಂಸಿ ಸರ್ಕಾರವು ಇಮಾಮ್‌ ಮತ್ತು ಮುಲ್ಲಾಗಳಿಗೆ ಮಾಸಿಕ 2,500 ರು, ಅರ್ಚಕರಿಗೆ 2,000 ರು. ಗೌರವಧನ ನೀಡುತ್ತಿತ್ತು.