ಸಾರಾಂಶ
ನವದೆಹಲಿ : ಕೋವಿಶೀಲ್ಡ್ ಲಸಿಕೆಯಿಂದ ಯಾವುದೇ ಸಂಭವನೀಯ ಅಡ್ಡಪರಿಣಾಮಗಳು ಮತ್ತು ಅಪಾಯಕಾರಿ ಅಂಶಗಳನ್ನು ಪರೀಕ್ಷಿಸಲು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ವೈದ್ಯಕೀಯ ತಜ್ಞರ ಸಮಿತಿಯನ್ನು ರಚಿಸಬೇಕು ಎಂದು ಸುಪ್ರೀಂ ಕೋರ್ಟ್ನಲ್ಲಿ ಬುಧವಾರ ಅರ್ಜಿ ಸಲ್ಲಿಸಲಾಗಿದೆ.
ಬ್ರಿಟನ್ನಲ್ಲಿ ಪ್ರಧಾನ ಕಛೇರಿಯ ಹೊಂದಿರುವ ಔಷಧೀಯ ಕಂಪನಿ ಅಸ್ಟ್ರಾಜೆನಿಕಾ ಇತ್ತೀಚೆಗೆ, ತಾನು ತಯಾರಿಸಿದ ಆಸ್ಟ್ರಾಜೆನಿಕಾ ಲಸಿಕೆ (ಭಾರತದಲ್ಲಿ ಅದಕ್ಕೆ ಕೋವಿಶೀಲ್ಡ್ ಎಂದು ಹೆಸರು) ಪಡೆದುಕೊಂಡವರಿಗೆ ಕಡಿಮೆ ಪ್ಲೇಟ್ಲೆಟ್ ಎಣಿಕೆ ಸಮಸ್ಯೆ ಕಾಣಬಹುದು ಮತ್ತು ‘ಅತ್ಯಂತ ಅಪರೂಪದ’ ಪ್ರಕರಣಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗಬಹುದು ಎಂದು ಹೇಳಿದೆ. ಹೀಗಾಗಿ ಭಾರತದಲ್ಲೂ ಇದರ ಅಧ್ಯಯನ ಅಗತ್ಯವಿದೆ ಎಂದು ವಕೀಲ ವಿಶಾಲ್ ತಿವಾರಿ ಅರ್ಜಿ ಸಲ್ಲಿಸಿದ್ದಾರೆ.
ಇದೇ ವೇಳೆ ಕೋವಿಶೀಲ್ಡ್ ಲಸಿಕೆಯ ಯಾವುದೇ ಅಡ್ಡಪರಿಣಾಮಗಳಿಂದಾಗಿ ತೀವ್ರವಾಗಿ ಅಂಗವಿಕಲರಾದ ಅಥವಾ ಸಾವನ್ನಪ್ಪಿದವರಿಗೆ ಪರಿಹಾರ ನೀಡಲು ಕೇಂದ್ರಕ್ಕೆ ಸೂಚಿಸಬೇಕು ಎಂದೂ ತಿವಾರಿ ಕೋರಿದ್ದಾರೆ.
‘ಕೋವಿಡ್ ನಂತರ, ಹೃದಯಾಘಾತ ಮತ್ತು ವ್ಯಕ್ತಿಗಳ ಹಠಾತ್ ಕುಸಿತದಿಂದ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಯುವಕರಲ್ಲಿಯೂ ಸಹ ಹಲವಾರು ಹೃದಯಾಘಾತ ಪ್ರಕರಣಗಳು ಕಂಡುಬಂದಿವೆ. ಈಗ ಕೋವಿಶೀಲ್ಡ್ನ ಬ್ರಿಟನ್ ಉತ್ಪಾದಕರು ಅದರ ಅಡ್ಡಪರಿಣಾಮದ ಬಗ್ಗೆ ಹೇಳಿದ್ದಾರೆ. ಹೀಗಾಗಿ ಭಾರತದಲ್ಲಿ ಭಾರಿ ಸಂಖ್ಯೆಯಲ್ಲಿ ಕೋವಿಶೀಲ್ಡ್ ಪಡೆದವರ ಮೇಲಾಗಿರುವ ಪರಿಣಾಮಗಳ ಅಧ್ಯಯನ ಅಗತ್ಯವಿದೆ’ ಎಂದು ತಿವಾರಿ ಕೋರಿದ್ದಾರೆ.
ಆಸ್ಟ್ರಾಜೆನಿಕಾ ಲಸಿಕೆ ಸೂತ್ರದ ಅಡಿ ಪುಣೆ ಮೂಲದ ಲಸಿಕೆ ತಯಾರಕ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕೋವಿಶೀಲ್ಡ್ ತಯಾರಿಸಿದ್ದು, ದೇಶದಲ್ಲಿ 175 ಕೋಟಿ ಡೋಸ್ ಕೋವಿಶೀಲ್ಡ್ ನೀಡಲಾಗಿದೆ ಎಂದು ಅರ್ಜಿ ವಿವರಿಸಿದೆ.