ಅಯೋಧ್ಯೆ ರಾಮಮಂದಿರದ ದೇಣಿಗೆಯಲ್ಲಿ 7 ಕೋಟಿ ರು. ಅಕ್ರಮ ನಡೆದಿದೆ ಎಂಬ ಪ್ರತಿಪಕ್ಷಗಳ ಆರೋಪದ ತನಿಖೆಗೆ ಎಸ್ಐಟಿ ರಚನೆಯಾದ ಬೆನ್ನಲ್ಲೇ ಮಂದಿರದಲ್ಲಿ ಕೆಲಸ ಮಾಡುತ್ತಿದ್ದ 3 ಸಿಬ್ಬಂದಿಗಳನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.
ಲಖನೌ: ಅಯೋಧ್ಯೆ ರಾಮಮಂದಿರದ ದೇಣಿಗೆಯಲ್ಲಿ 7 ಕೋಟಿ ರು. ಅಕ್ರಮ ನಡೆದಿದೆ ಎಂಬ ಪ್ರತಿಪಕ್ಷಗಳ ಆರೋಪದ ತನಿಖೆಗೆ ಎಸ್ಐಟಿ ರಚನೆಯಾದ ಬೆನ್ನಲ್ಲೇ ಮಂದಿರದಲ್ಲಿ ಕೆಲಸ ಮಾಡುತ್ತಿದ್ದ 3 ಸಿಬ್ಬಂದಿಗಳನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಪೈಕಿ ಓರ್ವನ ಮನೆಯಿಂದ 10-12 ಲಕ್ಷ ರು. ಜಪ್ತಿ ಮಾಡಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಸಿಬ್ಬಂದಿ ಲವಕುಶ್ ಮಿಶ್ರಾ ಎಂಬಾತ ಸೇರಿ ಮೂವರು ಸಿಬ್ಬಂದಿ ಪೊಲೀಸರ ವಶದಲ್ಲಿದ್ದಾರೆ. ಲವಕುಶ್ ಮನೆಯಲ್ಲಿ ನಗದು ಪತ್ತೆ ಮಾಡಿದ್ದಲ್ಲದೆ ಆತನಿಗಿರುವ ಸಂಪರ್ಕಗಳ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗಿದೆ. ದೇವಾಲಯದಲ್ಲಿ ಕೆಲಸ ಪಡೆಯುವ ಮೊದಲು ಮಿಶ್ರಾ ಕಾರ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ, ನಂತರ ಆತನ ಆರ್ಥಿಕ ಸ್ಥಿತಿ ಅಲ್ಪಾವಧಿಯಲ್ಲಿಯೇ ತೀವ್ರವಾಗಿ ಸುಧಾರಿಸಿತ್ತು ಎಂದು ಮೂಲಗಳು ಹೇಳಿವೆ.
ಈ ನಡುವೆ, ವಶದಲ್ಲಿರುವ ಇನ್ನಿಬ್ಬರು ಟ್ರಸ್ಟ್ ಸಿಬ್ಬಂದಿಯ ವಿಚಾರಣೆ ಕೂಡ ನಡೆದಿದೆ. ದೇವಾಲಯದಲ್ಲಿ ಸ್ವೀಕರಿಸಿದ ಕಾಣಿಕೆ ಎಣಿಸುವ ಜವಾಬ್ದಾರಿಯನ್ನು ಇಬ್ಬರೂ ನೌಕರರಿಗೆ ವಹಿಸಲಾಗಿತ್ತು ಮತ್ತು ಅವರು ಮಾಸಿಕ 18,000 ರಿಂದ 20,000 ರು.ಗಳ ವೇತನ ಗಳಿಸುತ್ತಿದ್ದರು. ಇಬ್ಬರಲ್ಲಿ ಒಬ್ಬರು ಇತ್ತೀಚೆಗೆ 1.5 ಕೋಟಿ ರು. ಮೌಲ್ಯದ ಜಮೀನು ಖರೀದಿಸಿದ್ದರೆ, ಇನ್ನೊಬ್ಬರು 40 ಲಕ್ಷ ರು. ಮೌಲ್ಯದ ಪ್ಲಾಟ್ (ಸೈಟ್) ಖರೀದಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಪೊಲೀಸರು ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಇನ್ನು ರಾಮ ಮಂದಿರದಲ್ಲಿ ದೇಣಿಗೆ ಎಣಿಕೆ ಕಾರ್ಯ ನಿರ್ವಹಿಸುತ್ತಿದ್ದ ಹಲವು ಅಧಿಕಾರಿಗಳ ಮೇಲೆ ತನಿಖಾ ತಂಡ ನಿಗಾ ವಹಿಸಿದೆ ಎಂದು ತಿಳಿದು ಬಂದಿದೆ.
ಏತನ್ಮಧ್ಯೆ ತನಿಖಾ ತಂಡ ರಚನೆಯನ್ನು ರಾಮಜನ್ಮಭೂಮಿ ಟ್ರಸ್ಟ್ ಸ್ವಾಗತಿಸಿದ್ದು, ಸತ್ಯ ಬಯಲಾಗಲಿದೆ ಎಂದಿದೆ.
ಭಾರೀ ಆಕ್ರಮದ ಆರೋಪ
ರಾಮಮಂದಿರಕ್ಕೆ ನೀಡಿದ ದೇಣಿಗೆಯಲ್ಲಿ ಭಾರೀ ಅಕ್ರಮ ಎಂದು ಎಸ್ಪಿ ನಾಯಕ ಅಖಿಲೇಶ್ ಆರೋಪ
ಈ ಬೆನ್ನಲ್ಲೇ ತನಿಖೆಗೆ ದೇಗುಲ ಮಂಡಳಿ ಕೋರಿಕೆ. ಸ್ಪಂದಿಸಿದ ಸರ್ಕಾರದಿಂದ ತನಿಖೆಗೆ ಎಸ್ಐಟಿ ರಚನೆ
ದೇಗುಲದಲ್ಲಿ ಕೆಲಸ ಮಾಡುತ್ತಿದ್ದ ಮೂವರು ಎಸ್ಐಟಿ ವಶಕ್ಕೆ. ತನಿಖೆ ವೇಳೆ ಇವರ ಬಳಿ ಭಾರೀ ಆಸ್ತಿ ಪತ್ತೆ
ಮಾಸಿಕ 20000 ವೇತನ ಇದ್ದ ಓರ್ವ ಸಿಬ್ಬಂದಿ ಇತ್ತೀಚೆಗೆ 1.5 ಕೋಟಿ ಮೌಲ್ಯದ ಭೂಮಿ ಖರೀದಿಸಿದ್ದು ಪತ್ತೆ
