ಸಾರಾಂಶ
ನವದೆಹಲಿ : ಗ್ರಾಮೀಣ ಭಾಗದ ಜನರ ಆಸ್ತಿಗೆ ಕಾನೂನು ಬದ್ಧ ಹಕ್ಕು ಕಲ್ಪಿಸುವ ದಾಖಲೆ ಪತ್ರವಾದ ಸ್ವಾಮಿತ್ವ ಸ್ವತ್ತಿನ ಕಾರ್ಡ್ಗಳ ಬೃಹತ್ ವಿತರಣಾ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ನೆರೆವೇರಿಸಿದರು. ಈ ಕಾರ್ಯಕ್ರಮದಲ್ಲಿ 10 ರಾಜ್ಯಗಳ ಒಟ್ಟು 65 ಲಕ್ಷ ಕುಟುಂಬಗಳಿಗೆ ಈ ಕಾರ್ಡ್ ವಿತರಿಸಲಾಯಿತು.
ಕಾರ್ಡ್ ವಿತರಣೆ ಬಳಿಕ ಕೆಲವು ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ, ‘ಈ ಯೋಜನೆಯಿಂದ ಸಾಲ ಮತ್ತು ಇತರ ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಜನರಿಗೆ ಅನುಕೂಲವಾಗಲಿದೆ. ಇಂದು 65 ಲಕ್ಷ ಕಾರ್ಡ್ ವಿತರಣೆಯೊಂದಿಗೆ ಇದುವರೆಗೆ ದೇಶವ್ಯಾಪಿ ಗ್ರಾಮಗಳಲ್ಲಿನ 2.24 ಕೋಟಿ ಫಲಾನುಭವಿಗಳು ಈ ಸ್ವಾಮಿತ್ವ ಸ್ವತ್ತನ್ನು ಹೊಂದಿದಂತಾಗಿದೆ ಎಂದು ತಿಳಿಸಿದರು.
‘ಗ್ರಾಮಗಳಲ್ಲಿನ ಆಸ್ತಿಯು ಉತ್ಪಾದಕತೆ ಇಲ್ಲದ ಬಂಡವಾಳವಿದ್ದಂತೆ. ಜನರಿಗೆ ಇದು ಆದಾಯ ಹೆಚ್ಚಳಕ್ಕೆ ಸಹಾಯ ಮಾಡುವುದಿಲ್ಲ ಎಂದು ಆರ್ಥಿಕ ತಜ್ಞರೊಬ್ಬರು ಅಭಿಪ್ರಾಯಪಡುತ್ತಾರೆ. ಆದ್ದರಿಂದ ಈ ಕಾರ್ಡ್ನಿಂದ ದೊರೆಯುವ ಆಸ್ತಿ ಹಕ್ಕಿನಿಂದ ಜನರು ಸ್ವಂತ ಉದ್ಯಮ ಪ್ರಾರಂಭಿಸಬಹುದು. ರೈತರಿಗೆ ಇದು ಆರ್ಥಿಕ ಭದ್ರತೆ ಒದಗಿಸುತ್ತದೆ’ ಎಂದು ಹೇಳಿದರು.
ಸ್ವಾಮಿತ್ವ ಯೋಜನೆಯ ಸ್ವತ್ತಿನ ಕಾರ್ಡ್ಗಳು ಛತ್ತೀಸ್ಗಢ, ಗುಜರಾತ್, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಿಜೋರಾಂ, ಒಡಿಶಾ, ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶ, ಎರಡು ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ನ 50 ಸಾವಿರ ಗ್ರಾಮಗಳ ಫಲಾನುಭವಿಗಳಿಗೆ ಹಂಚಿಕೆಯಾಗಿದೆ.