ಸಾರಾಂಶ
ತುರ್ತುಸ್ಥಿತಿಯಲ್ಲಿ ಸನ್ಯಾಸಿ ವೇಷ ಧರಿಸಿ ಮೋದಿ ಓಡಾಟ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದ್ದು ಸರ್ದಾರ್ಜಿ, ಸ್ವಾಮೀಜಿ.. ಹೀಗೆ ನಾನಾ ಹೆಸರು, ವೇಷ ಧರಿಸಿ ಓಡಾಡುತ್ತಿದ್ದರು. ಒಮ್ಮೆಯೂ ಪೊಲೀಸರಿಗೆ ಸಿಕ್ಕಿಕೊಳ್ಳದೆ ವೇಷ ಬದಲಿಸುತ್ತಿದ್ದ ಮೋದಿ ರಹಸ್ಯವಾಗಿ ಸಂಘಟನೆಯಲ್ಲಿ ತೊಡಗಿದ್ದರು.
ನವದೆಹಲಿ: 1975ರಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿಯ ವೇಳೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಹುತೇಕ ನಾಯಕರನ್ನು ಸರ್ಕಾರ ಬಂಧಿಸಿದರೂ ಅಂದು ಸಂಘದ ಕಾರ್ಯಕರ್ತರಾಗಿದ್ದ ಈಗಿನ ಪ್ರಧಾನಿ ಮೋದಿಯನ್ನು ಮಾತ್ರ ಬಂಧಿಸಲು ಸಾಧ್ಯವಾಗಲಿಲ್ಲ. ಏಕೆಂದರೆ ಅವರು ಆ 21 ತಿಂಗಳು ನಾನಾ ವೇಷ ಧರಿಸಿ ಪೊಲೀಸರ ಕಣ್ಣುತಪ್ಪಿಸಿ ಸಂಘಟನೆ ಮಾಡುತ್ತಿದ್ದರು.
ಬತುಕ್ ಭಾಯ್, ಸರ್ದಾರ್ಜಿ, ಸ್ವಾಮೀಜಿ ಮುಂತಾದ ಹೆಸರುಗಳನ್ನು ಇಟ್ಟುಕೊಂಡು ಹಾಗೂ ಆಯಾ ವೇಷಭೂಷಣ ಧರಿಸಿಕೊಂಡು ಅವರು ಗುಜರಾತ್ ರಾಜ್ಯದ ನಾನಾ ನಗರಗಳನ್ನು ಸುತ್ತಿ ಜನರಿಗೆ ತುರ್ತು ಪರಿಸ್ಥಿತಿಯ ನೈಜ ಅಂಶಗಳ ಕುರಿತು ಜನತೆಗೆ ಮನವರಿಕೆ ಮಾಡಿಕೊಡುತ್ತಿದ್ದರು. ಜೊತೆಗೆ ಭಾವನಗರದ ಜೈಲಿನಲ್ಲಿದ್ದ ಆರ್ಎಸ್ಎಸ್ ಸಹಚರರನ್ನು ಭೇಟಿ ಮಾಡಲು ಸ್ವಾಮೀಜಿಯ ವೇಷ ಧರಿಸಿ ಸುಲಭವಾಗಿ ಪ್ರವೇಶ ಗಿಟ್ಟಿಸಿದ್ದರು ಹಾಗೂ ಸತ್ಸಂಗದ ಹೆಸರಿನಲ್ಲಿ ರಹಸ್ಯ ಕಾರ್ಯಚಟುವಟಿಕೆ ನಡೆಸಿದ್ದ ಮಾಹಿತಿಗಳು ಹೊರಬಂದಿವೆ.