ಸಾರಾಂಶ
ಭೋಪಾಲ್: ಭಾರತೀಯ ಕಾಲಮಾನದಂತೆ ಸಮಯವನ್ನು ಸೂಚಿಸುವ ಉಜ್ಜಯಿನಿಯ ವಿಕ್ರಮಾದಿತ್ರ ವೈದಿಕ ಗಡಿಯಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಚಾಲನೆ ನೀಡಿದರು. ಪ್ರಸ್ತುತ ಗ್ರೀನ್ವಿಚ್ ಮೂಲಕ ನಿರ್ಧರಿಸಲಾಗುತ್ತಿರುವ ಜಾಗತಿಕ ಸಮಯಕ್ಕೆ ಪರ್ಯಾಯವಾಗಿ ಭಾರತೀಯ ಸಂಪ್ರದಾಯದ ಮತ್ತೊಂದು ಕಾಲಮಾನವನ್ನು ಜಗತ್ತಿಗೆ ಪರಿಚಯಿಸುವ ಉದ್ದೇಶದೊಂದಿಗೆ ಈ ಗಡಿಯಾರದ ಯಂತ್ರವನ್ನು ಪುನರಾಭಿವೃದ್ದಿ ಮಾಡಿ ಉದ್ಘಾಟಿಸಲಾಗಿದೆ. ಭಾರತೀಯ ಕಾಲಮಾನ ಪದ್ಧತಿ ಅತ್ಯಂತ ಪುರಾತನ, ಸೂಕ್ಷ್ಮ, ದೋಷರಹಿತ, ಕರಾರುವಕ್ಕಾದ ಮತ್ತು ನಂಬಿಕೆಗೆ ಅರ್ಹವಾದ ಸಮಯ ನಿರ್ಧಾರಕವಾಗಿದೆ. ವಿಶೇಷತೆಯೇನು?:300 ವರ್ಷಗಳ ಹಿಂದೆ ಭಾರತದ ಮಧ್ಯಭಾಗದಲ್ಲಿರುವ ಉಜ್ಜಯಿನಿಯಲ್ಲಿರುವ ‘ಸಮಯ ನಿರ್ಧಾರಕ ಯಂತ್ರ’ದ ಮೂಲಕ ನಿರ್ಧರಿಸಲಾಗುತ್ತಿತ್ತು. ಬಳಿಕ ಅದನ್ನು ಉತ್ತರ ಧ್ರುವಕ್ಕೆ ಸಮೀಪವಿರುವ ಗ್ರೀನ್ವಿಚ್ಗೆ ಸ್ಥಳಾಂತರ ಮಾಡಿದ್ದರಿಂದ ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಮಧ್ಯರಾತ್ರಿಯಿಂದ ದಿನವನ್ನು ಆರಂಭ ಮಾಡಲಾಗುತ್ತಿತ್ತು. ಆದರೆ ಇದರ ಬದಲು ಸೂರ್ಯೋದಯ ವೇಳೆ ದಿನದ ಆರಂಭವಾಗಿ ಅದೇ ವೇಳೆ ದಿನಾಂಕ ಬದಲಿಸಬೇಕು ಎಂಬ ಉದ್ದೇಶದಿಂದ ವಿಕ್ರಮಾದಿತ್ಯ ವೈದಿಕ ಗಡಿಯಾರಕ್ಕೆ ಚಾಲನೆ ನೀಡಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದು ‘ಕಾಲಮಾನ ನಿರ್ಧಾರಕ’ ಆಗಬೇಕು ಎಂಬುದನ್ನು ಪ್ರತಿಪಾದಿಸಲು ಭಾರತಕ್ಕೆ ಅನುಕೂಲ ಮಾಡಿಕೊಡಲಿದೆ.ಏನೇನಿದೆ?:ವಿಕ್ರಮಾದಿತ್ಯ ವೈದಿಕ ಗಡಿಯಾರದಲ್ಲಿ ಭಾರತೀಯ ಪಂಚಾಂಗ ಪದ್ಧತಿಯ ಎಲ್ಲ ಅಂಶಗಳೂ ಅಡಕವಾಗಿವೆ. ಪ್ರಮುಖವಾಗಿ ಸಂವತ್ಸರ, ಮಾಸ, ಗ್ರಹಗಳ ಸ್ಥಿತಿ, ಚಂದ್ರನ ಸ್ಥಿತಿ, ಪರ್ವಗಳು, ಶುಭಾಶುಭ ಮುಹೂರ್ತಗಳು, ಗತಿ, ನಕ್ಷತ್ರ, ಸೂರ್ಯ ಮತ್ತು ಚಂದ್ರ ಗ್ರಹಣಗಳನ್ನು ಕರಾರುವಕ್ಕಾಗಿ ಈ ಗಡಿಯಾರದ ಮೂಲಕ ತಿಳಿಯಬಹುದಾಗಿದೆ. ಅಲ್ಲದೆ ಆಕಾಶಕಾಯಗಳ ಚಲನೆಯ ಆಧಾರದ ಮೇಲೆ ಕರಾರುವಕ್ಕಾಗಿ ಸಮಯವನ್ನು ಲೆಕ್ಕ ಮಾಡಲಾಗುತ್ತದೆ.