ಸಾರಾಂಶ
ವಾರಾಣಸಿ : ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ 9.26 ಕೋಟಿಗೂ ಹೆಚ್ಚು ರೈತರಿಗೆ ಕಿಸಾನ್ ಸಮ್ಮಾನ್ ನಿಧಿಯ 17ನೇ ಕಂತಿನ 20,000 ಕೋಟಿ ರು. ಬಿಡುಗಡೆ ಮಾಡಿದರು.
ವಾರಣಾಸಿಯಲ್ಲಿ ನಡೆದ ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನದಲ್ಲಿ ಈ ಮೊತ್ತವನ್ನು ಬಿಡುಗಡೆ ಮಾಡಿ ಸಾಂಕೇತಿಕವಾಗಿ ಕೆಲವು ರೈತರಿಗೆ ಹಣದ ಚೆಕ್ ನೀಡಿದರು.
ಈ ಯೋಜನೆಯ ಮೂಲಕ ರೈತರಿಗೆ ವಾರ್ಷಿಕ 6 ಸಾವಿರ ರು.ಗಳನ್ನು ನೀಡಲಾಗುತ್ತದೆ. ಪ್ರತಿ 4 ತಿಂಗಳಿಗೆ ಒಮ್ಮೆ ತಲಾ 2 ಸಾವಿರ ರು.ಗಳನ್ನು ರೈತರ ಖಾತೆಗೆ ಜಮೆ ಮಾಡಲಾಗುತ್ತದೆ. ವರ್ಷಕ್ಕೆ ರೈತರಿಗೆ 6 ಸಾವಿರ ರು. ನೆರವು ಸಿಗುತ್ತದೆ.
ಹಣ ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ಕಿಸಾನ್ ಸಮ್ಮಾನ್ ನಿಧಿಯು ವಿಶ್ವದ ಅತಿ ದೊಡ್ಡ ನೇರ ನಗದು ವರ್ಗಾವಣೆ ಯೋಜನೆಯಾಗಿದೆ. 2019ರಲ್ಲಿ ಯೋಜನೆ ಜಾರಿ ಆದ ನಂತರ ಈವರೆಗೆ ರೈತರ ಖಾತೆಗೆ 3.25 ಲಕ್ಷ ಕೋಟಿ ರು.ಗಳನ್ನು ಜಮೆ ಮಾಡಲಾಗಿದೆ. ಈ ಹಣದ ಮೂಲಕ ರೈತರಿಗೆ ಆಸರೆ ಆಗುವ ಆಸೆ ನಮ್ಮ ಸರ್ಕಾರದ್ದಾಗಿದೆ’ ಎಂದರು.
ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ತಮ್ಮ ಮೊದಲ ಕ್ರಮವಾಗಿ, ಕಿಸಾನ್ ಸಮ್ಮಾನ್ ನಿಧಿಯ 17ನೇ ಕಂತಿನ ಬಿಡುಗಡೆಗೆ ಮೋದಿ ಅವರು ಇತ್ತೀಚೆಗೆ ಸಹಿ ಹಾಕಿದ್ದರು.