ಸ್ನೇಹಿತರ ಬಗ್ಗೆಯೇ ಮೋದಿ ಟೀಕೆ ಏಕೆ?: ಖರ್ಗೆ ವ್ಯಂಗ್ಯ

| Published : May 09 2024, 01:02 AM IST / Updated: May 09 2024, 05:08 AM IST

Mallikarjun kharge

ಸಾರಾಂಶ

ಲೋಕಸಭೆಗೆ ಮೂರು ಹಂತದ ಚುನಾವಣೆ ಮುಗಿಯುತ್ತಲೇ ಪ್ರಧಾನಿ ನರೇಂದ್ರ ಮೋದಿ ಅವರ ಕುರ್ಚಿ ಅಲುಗಾಡತೊಡಗಿದೆ.

ನವದೆಹಲಿ: ಲೋಕಸಭೆಗೆ ಮೂರು ಹಂತದ ಚುನಾವಣೆ ಮುಗಿಯುತ್ತಲೇ ಪ್ರಧಾನಿ ನರೇಂದ್ರ ಮೋದಿ ಅವರ ಕುರ್ಚಿ ಅಲುಗಾಡತೊಡಗಿದೆ. ಹೀಗಾಗಿ ಅವರೀಗ ತಮ್ಮ ಸ್ನೇಹಿತರ (ಅಂಬಾನಿ-ಅದಾನಿ) ವಿರುದ್ಧ ದಾಳಿ ಆರಂಭಿಸಿದ್ದಾರೆ. ಇದು ಲೋಕಸಭಾ ಚುನಾವಣೆಯ ಫಲಿತಾಂಶದ ನಿಜವಾದ ಟ್ರೆಂಡ್‌ ತೋರಿಸುತ್ತಿದೆ ಎಂದು ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದಾರೆ.

‘ಚುನಾವಣೆ ಆರಂಭವಾದ ಬಳಿಕ ಶೆಹಜಾದಾ, ಅಂಬಾನಿ-ಅದಾನಿ ನಿಂದನೆ ನಿಲ್ಲಿಸಿದ್ದಾರೆ’ ಎಂಬ ಪ್ರಧಾನಿ ಮೋದಿ ಆರೋಪಕ್ಕೆ ಎಕ್ಸ್‌’ನಲ್ಲಿ ಪ್ರತಿಕ್ರಿಯೆ ನೀಡಿರುವ ಖರ್ಗೆ, ‘ಕಾಲ ಬದಲಾಗುತ್ತಿದೆ. ಸ್ನೇಹಿತರು ಇದೀಗ ಸ್ನೇಹಿತರಾಗಿ ಉಳಿದಿಲ್ಲ. ಮೂರು ಹಂತದ ಚುನಾವಣೆ ಮುಗಿಯುತ್ತಲೇ ಪ್ರಧಾನಿ ಮೋದಿ ತಮ್ಮ ಸ್ನೇಹಿತರ ವಿರುದ್ಧವೇ ವಾಗ್ದಾಳಿ ಆರಂಭಿಸಿದ್ದಾರೆ. 

ಇದು ಮೋದಿ ಕುರ್ಚಿ ಅಲುಗಾಡುತ್ತಿದೆ ಎಂಬುದನ್ನು ಖಚಿತಪಡಿಸಿದೆ’ ಎಂದಿದ್ದಾರೆ.ಇನ್ನೊಂದೆಡೆ ರಾಯ್‌ಬರೇಲಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಪ್ರಿಯಾಂಕಾ ವಾದ್ರಾ, ‘ಅಂಬಾನಿ- ಅದಾನಿ ಬ್ಗೆ ರಾಹುಲ್‌ ಏಕೆ ಮಾತನಾಡುತ್ತಿಲ್ಲ ಎಂದು ಅವರು (ಮೋದಿ) ಪ್ರಶ್ನಿಸುತ್ತಿದ್ದಾರೆ. 

ಆದರೆ ರಾಹುಲ್‌ ಪ್ರತಿದಿನವೂ ಸತ್ಯವನ್ನು ನಿಮ್ಮ ಮುಂದೆ ಇಡುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಬಿಜೆಪಿಗೆ ಉದ್ಯಮಿಗಳ ಜೊತೆ ನಂಟಿದೆ ಎಂದು ನಾವು ಪ್ರತಿ ದಿನವೂ ಹೇಳುತ್ತಿದ್ದೇವೆ. ಪ್ರಧಾನಿ ಮೋದಿ ದೊಡ್ಡ ಉದ್ಯಮಿಗಳ 16 ಲಕ್ಷ ಕೋಟಿ ರು. ಸಾಲ ಮನ್ನಾ ಮಾಡಿದ್ದಾರೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಅದೆಲ್ಲಾ ಯಾರ ದುಡ್ಡು? ಅದು ಮೋದಿಯ ದುಡ್ಡಲ್ಲ, ಅದು ದೇಶದ ಹಣ’ ಎಂದರು.