ಸಾರಾಂಶ
ಪಿಟಿಐ ನವದೆಹಲಿ
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಶತಾಯಗತಾಯ ಬಿಜೆಪಿಯ ಗೆಲುವನ್ನು ಐತಿಹಾಸಿಕ ಎತ್ತರಕ್ಕೆ ಕೊಂಡೊಯ್ಯಬೇಕು ಎಂಬ ಉತ್ಸಾಹದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಚುನಾವಣೆ ಘೋಷಣೆಯ ಮುನ್ನಾದಿನದಿಂದ ಸತತ ಐದು ದಿನಗಳ ಕಾಲ ದಕ್ಷಿಣ ಭಾರತದಲ್ಲಿ ಪ್ರಚಾರ ನಡೆಸುತ್ತಿದ್ದಾರೆ.
130 ಲೋಕಸಭೆ ಸ್ಥಾನಗಳಿರುವ ದಕ್ಷಿಣದ ಐದು ರಾಜ್ಯಗಳಲ್ಲಿ ಮೋದಿ ಪ್ರಚಾರ ಶುಕ್ರವಾರವೇ ಆರಂಭವಾಗಿದೆ. ಇದು ಮಾ.19ರವರೆಗೂ ನಿರಂತರವಾಗಿ ನಡೆಯಲಿದೆ.
ಶುಕ್ರವಾರ ಪ್ರಧಾನಿ ಮೋದಿ ತಮಿಳುನಾಡು ಹಾಗೂ ಕೇರಳದಲ್ಲಿ ಚುನಾವಣಾ ಸಮಾವೇಶ ಹಾಗೂ ತೆಲಂಗಾಣದಲ್ಲಿ ರೋಡ್ಶೋ ನಡೆಸಿದರು.
ಶನಿವಾರ ತೆಲಂಗಾಣದ ನಗರಕರ್ನೂಲ್ ಹಾಗೂ ಕರ್ನಾಟಕದ ಕಲಬುರಗಿಯಲ್ಲಿ ಸಮಾವೇಶ ನಡೆಸಲಿದ್ದಾರೆ. ಮಾ.17ರ ಭಾನುವಾರ ಆಂಧ್ರಪ್ರದೇಶದಲ್ಲಿ ಟಿಡಿಬಿ-ಬಿಜೆಪಿ-ಜನಸೇನಾ ಮೈತ್ರಿಕೂಟದ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಾ.18ರ ಸೋಮವಾರ ತೆಲಂಗಾಣದ ಜಗತಿಯಾಲ್ ಹಾಗೂ ಕರ್ನಾಟಕದ ಶಿವಮೊಗ್ಗದಲ್ಲಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು, ನಂತರ ತಮಿಳುನಾಡಿನ ಕೊಯಮತ್ತೂರ್ನಲ್ಲಿ ರೋಡ್ಶೋ ನಡೆಸಲಿದ್ದಾರೆ.
ಮಾ.19ರ ಮಂಗಳವಾರ ಕೇರಳದ ಪಾಲಕ್ಕಾಡ್ನಲ್ಲಿ ಅವರ ರೋಡ್ಶೋ ಹಾಗೂ ತಮಿಳುನಾಡಿನ ಸೇಲಂನಲ್ಲಿ ಸಮಾವೇಶ ನಿಗದಿಯಾಗಿದೆ.
ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಅಷ್ಟೇನೂ ಜನಪ್ರಿಯತೆಯಿಲ್ಲ. ಕರ್ನಾಟಕವನ್ನು ಹೊರತುಪಡಿಸಿ ಇನ್ನುಳಿದ ನಾಲ್ಕು ರಾಜ್ಯಗಳಲ್ಲಿ ಬಿಜೆಪಿಯ ಸೀಟು ಗಳಿಕೆ ಒಂದಂಕಿ ದಾಟಿಲ್ಲ.
ಈ ಬಾರಿ ತೆಲಂಗಾಣ ಮತ್ತು ಕರ್ನಾಟಕದಲ್ಲಿ ಮಾಡಿಕೊಂಡ ಹೊಸ ಮೈತ್ರಿಯ ಮೂಲಕ ಹೆಚ್ಚು ಸ್ಥಾನ ಗಳಿಸುವ ಗುರಿಯನ್ನು ಪಕ್ಷ ಹೊಂದಿದೆ. ಹೀಗಾಗಿ ಮೋದಿ ದಕ್ಷಿಣದ ರಾಜ್ಯಗಳ ಮೇಲೆ ಹೆಚ್ಚು ಗಮನ ಹರಿಸಿದ್ದಾರೆ ಎನ್ನಲಾಗಿದೆ.