ಸಾರಾಂಶ
ದ್ವಾರಕಾ: ದ್ವಾರಕೆಯಿಂದ ಬೇಟ್ ದ್ವಾರಕೆಗೆ ಸಂಪರ್ಕ ಕಲ್ಪಿಸುವ 2.32 ಕಿ.ಮೀ ಉದ್ದದ ಕೇಬಲ್ ಸೇತುವೆಯನ್ನು (ಸುದರ್ಶನ ಸೇತುವೆ) ನನ್ನಿಂದಲೇ ನಿರ್ಮಿಸುವುದು ಶ್ರೀಕೃಷ್ಣನ ಇಚ್ಛೆಯಾಗಿತ್ತು. ಅದೀಗ ಪೂರ್ಣಗೊಂಡಿದೆ.
ಇದಕ್ಕಾಗಿ ಶ್ರೀಕೃಷ್ಣನಿಗೆ ಧನ್ಯವಾದ ಅರ್ಪಿಸುತ್ತೇನೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಮೂಲಕ ಶ್ರೀರಾಮನ ಬಳಿಕ ಮೋದಿ ಕೃಷ್ಣನನ್ನು ಭಜಸಿದ್ದಾರೆ.
ಸೇತುವೆ ಉದ್ಘಾಟನೆ ಬಳಿಕ ಮಾತನಾಡಿದ ಮೋದಿ, ‘ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಆಗಿನ ಕೇಂದ್ರದ ಕಾಂಗ್ರೆಸ್ ಸರ್ಕಾರಕ್ಕೆ ಈ ಸೇತುವೆ ನಿರ್ಮಿಸುವಂತೆ ಮನವಿ ಮಾಡಿದ್ದೆ. ಆದರೆ ಅವರು ಅದನ್ನು ಕಡೆಗಣಿಸಿದ್ದರು.
ಆದರೆ ಇಂದು ಅದೇ ಸೇತುವೆಯನ್ನು ನಾನು ಉದ್ಘಾಟಿಸಿದ್ದೇನೆ. ನನ್ನ ಕನಸು ನನಸಾಗಿದ್ದಕ್ಕೆ ನನ್ನ ಹೃದಯ ತುಂಬಿಬಂದಿದೆ. ಹೀಗಾಗಿಯೇ ನಾನು ಶ್ರೀಕೃಷ್ಣನಿಗೆ ನವಿಲುಗರಿ ಅರ್ಪಿಸಿದ್ದೇನೆ.
ಈ ನಿರ್ಮಾಣ ನನ್ನಿಂದಲೇ ಆಗಬೇಕೆಂದು ಶ್ರೀಕೃಷ್ಣ ನನ್ನ ಹಣೆಯಲ್ಲಿ ಬರೆದಿದ್ದ. ಅದನ್ನು ಇದೀಗ ಶ್ರೀಕೃಷ್ಣ ಸಾಧ್ಯವಾಗಿಸಿದ್ದಾನೆ. ಅದಕ್ಕಾಗಿ ನಾನು ಆತನಿಗೆ ಧನ್ಯವಾದ ಅರ್ಪಿಸುತ್ತೇನೆ’ ಎಂದರು.