ಸಾರಾಂಶ
ನವದೆಹಲಿ: ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಹದೆಗೆಟ್ಟಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಕೆನಡಾದಲ್ಲಿ ಈ ವರ್ಷ ನಡೆಯಲಿರುವ ಜಿ7 ಶೃಂಗಸಭೆಗೆ ಗೈರಾಗುವ ಸಾಧ್ಯತೆಯಿದೆ. 6 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಪ್ರಧಾನಿ ಶೃಂಗಸಭೆಯಿಂದ ಹೊರಗುಳಿಯಲ್ಲಿದ್ದಾರೆ ಎನ್ನಲಾಗುತ್ತಿದೆ.
ಈ ತಿಂಗಳ 15-17ರ ತನಕ ಕೆನಡಾದ ಆತಿಥ್ಯದಲ್ಲಿ ಶೃಂಗಸಭೆ ನಡೆಯಲಿದೆ. ಫ್ರಾನ್ಸ್, ಜರ್ಮನಿ, ಇಟಲಿ, ಬ್ರಿಟನ್, ಜಪಾನ್, ಅಮೆರಿಕ ಮತ್ತು ಕೆನಡಾ ಸದಸ್ಯತ್ವ ಹೊಂದಿರುವ ಜಿ7 ರಾಷ್ಟ್ರಗಳ ಈ ಶೃಂಗಸಭೆಯಲ್ಲಿ ಯುರೋಪ್ ಒಕ್ಕೂಟ, ಐಎಂಎಫ್, ವಿಶ್ವಬ್ಯಾಂಕ್, ವಿಶ್ವಸಂಸ್ಥೆ ಕೂಡ ಭಾಗಿಯಾಗಲಿವೆ.ಈಗಾಗಲೇ ದಕ್ಷಿಣ ಆಫ್ರಿಕಾ , ಉಕ್ರೇನ್ ಮತ್ತು ಆಸ್ಟ್ರೇಲಿಯಾ ದೇಶಗಳು ಕೆನಡಾದಿಂದ ಆಹ್ವಾನ ಸ್ವೀಕರಿಸಿವೆ. ಆದರೆ ಭಾರತಕ್ಕೆ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ಇನ್ನು ಮೂಲಗಳ ಪ್ರಕಾರ ಭಾರತ ಶೃಂಗಸಭೆಯಲ್ಲಿ ಭಾಗವಹಿಸಲು ಯಾವುದೇ ಆಸಕ್ತಿ ತೋರಿಸಿಲ್ಲ ಎನ್ನಲಾಗಿದ್ದು, ಎರಡು ದೇಶಗಳ ನಡುವೆ ಸಂಬಂಧ ಮೊದಲು ಸುಧಾರಿಸಬೇಕು ಎನ್ನುವ ನಿಲುವನ್ನು ಭಾರತ ವ್ಯಕ್ತಪಡಿಸಿದೆ.