ನಾಳೆ ಪ್ರಧಾನಿ ನರೇಂದ್ರ ಮೋದಿ ಮಂತ್ರಿ ಪರಿಷತ್ ಸಭೆ

| N/A | Published : Jun 03 2025, 01:08 AM IST / Updated: Jun 03 2025, 04:15 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಜೂ.4ರಂದು (ಬುಧವಾರ) ಇಡೀ ಮಂತ್ರಿ ಪರಿಷತ್‌ ಸಭೆ ಆಯೋಜಿಸಿದ್ದಾರೆ. ಭಾರತವು ಆಪರೇಷನ್ ಸಿಂದೂರ ಅಡಿಯಲ್ಲಿ ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ಮಾಡಿದ ನಂತರ ಇಂತಹ ಮೊದಲ ಸಭೆ ಇದಾಗಿದೆ.

 ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜೂ.4ರಂದು (ಬುಧವಾರ) ಇಡೀ ಮಂತ್ರಿ ಪರಿಷತ್‌ ಸಭೆ ಆಯೋಜಿಸಿದ್ದಾರೆ. ಭಾರತವು ಆಪರೇಷನ್ ಸಿಂದೂರ ಅಡಿಯಲ್ಲಿ ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ಮಾಡಿದ ನಂತರ ಇಂತಹ ಮೊದಲ ಸಭೆ ಇದಾಗಿದೆ.

ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಇತ್ತೀಚಿನ ದಶಕಗಳಲ್ಲಿ ಭಾರತದ ಅತಿದೊಡ್ಡ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಒಂದಾದ ಆಪರೇಷನ್ ಸಿಂದೂರ ಕುರಿತು ಸಭೆಯಲ್ಲಿ ವಿವರಣೆ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಇದೇ ವೇಳೆ, ಮೋದಿ-3 ಸರ್ಕಾರಕ್ಕೆ ಜೂ.9ರಂದು 1 ವರ್ಷವಾಗಲಿದ್ದು, ಈ ವೇಳೆ ವರ್ಷಾಚರಣೆ ಬಗ್ಗೆ ಕಾರ್ಯತಂತ್ರ ಹೆಣೆಯುವ ಬಗ್ಗೆಯೂಚರ್ಚೆ ನಡೆಯುವ ಸಂಭವವಿದೆ.

ಏ.22 ರಂದು ಕಾಶ್ಮೀರದ ಪಹಲ್ಗಾಂನಲ್ಲಿ 26 ಪ್ರವಾಸಿಗರನ್ನು ಉಗ್ರರು ಹತ್ಯೆ ಮಾಡಿದ್ದರು. ಈ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 9 ಉಗ್ರರ ನೆಲೆ ನಾಶ ಮಾಡಲು ಭಾರತ ಆಪರೇಷನ್ ಸಿಂದೂರ ನಡೆಸುತ್ತು. ನಂತರ ಅನೇಕ ಪಾಕ್‌ ವಾಯುರಕ್ಷಣಾ ವ್ಯವಸ್ಥೆ ಹಾಗೂ ವಾಯುನೆಲೆಗಳನ್ನೂ ಭಾರತ ನಾಶ ಮಾಡಿತ್ತು.

ಭಾರತದಂತೆ 2 ಪಾಕ್‌ ನಿಯೋಗಗಳು ವಿದೇಶಕ್ಕೆ

ಇಸ್ಲಾಮಾಬಾದ್‌: ಆಪರೇಷನ್‌ ಸಿಂದೂರದ ಬಳಿಕ ಭಾರತದ ಪ್ರತಿಯೊಂದು ನಡೆಯನ್ನು ನಕಲಿಸುತ್ತಲೇ ಬಂದಿರುವ ಪಾಕಿಸ್ತಾನ, ಈಗ ಭಾರತದಂತೆ ತನ್ನ 2 ನಿಯೋಗಗಳನ್ನು ವಿದೇಶಗಳಿಗೆ ಕಳಿಸಿದೆ.ಪಾಕಿಸ್ತಾನದ ದೃಷ್ಟಿಕೋನದ ಬಗ್ಗೆ ಕೆಲ ಪ್ರಮುಖ ರಾಷ್ಟ್ರಗಳೆದುರು ಪ್ರಸ್ತಾಪಿಸಲು ಪಿಪಿಪಿ ಮುಖ್ಯಸ್ಥ ಬಿಲಾವಲ್‌ ಭುಟ್ಟೋ ಹಾಗೂ ಪ್ರಧಾನಿಯ ವಿಶೇಷ ಸಹಾಯಕ ಸಯ್ಯದ್ ತಾರಿಕ್ ಫತೇಮಿ ಅವರ ನೇತೃತ್ವದಲ್ಲಿ 2 ನಿಯೋಗಗಳು ಜೂ.2ರಿಂದ 4ರ ವರೆಗೆ ವಿದೇಶಗಳಿಗೆ ಭೇಟಿ ನೀಡಲಿವೆ.ಭುಟ್ಟೋ ಅವರ ನಿಯೋಗ ಅಮೆರಿಕ, ಬ್ರಿಟನ್‌, ಬೆಲ್ಜಿಯಂಗೆ ಹೋಗಿದ್ದರೆ, ಫತೇಮಿಯವರ ನಿಯೋಗ ರಷ್ಯಾಗೆ ಪ್ರಯಾಣಿಸಿದೆ.ಈಗಾಗಲೇ ಭಾರತ, ಪಾಕ್‌ನ ಉಗ್ರಮುಖ ಬಯಲು ಮಾಡಲು 7 ಸರ್ವಪಕ್ಷ ನಿಯೋಗಗಳನ್ನು 33 ದೇಶಗಳಿಗೆ ಕಳಿಸಿಯಾಗಿದೆ.

ಸಿಂಧು ನೀರಿಲ್ಲದೆ ಪಾಕ್‌ಗೆ ಬರ ಭೀತಿ

ಇಸ್ಲಾಮಾಬಾದ್‌: ಭಾರತ ಕೈಗೊಂಡ ರಾಜತಾಂತ್ರಿಕ ಕ್ರಮವಾದ ಸಿಂಧು ಜಲ ಒಪ್ಪಂದ ಸ್ಥಗಿತದಿಂದ ಪಾಕಿಸ್ತಾನದ ಸೊಕ್ಕು ಇಳಿದಿಲ್ಲವಾದರೂ, ಅಲ್ಲಿನ ಜಲಾಶಯಗಳಲ್ಲಿ ನೀರಿನ ಮಟ್ಟದಲ್ಲಿ ಗಣನೀಯ ಇಳಿಕೆಯಾಗಿದೆ. 

ಇದರಿಂದ ಬಿತ್ತನೆಗೆ ಕಾಯುತ್ತಿರುವ ಖಾರಿಫ್‌ (ಮುಂಗಾರು ಬೆಳೆಗಳು) ಬೆಳೆಗಾರರಿಗೆ ಭಾರೀ ಸಂಕಷ್ಟ ಎದುರಾಗಿದೆ.ಇತ್ತೀಚೆಗೆ ಪಾಕಿಸ್ತಾನ ಸರ್ಕಾರ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಅಲ್ಲಿನ ಪಂಜಾಬ್‌ ಪ್ರಾಂತ್ಯದಲ್ಲಿ ಜೂ.2ಕ್ಕೆ ಲಭ್ಯವಿರುವ ಸಿಂಧು ನೀರು, ಕಳೆದ ವರ್ಷದ ಜೂ.2ಕ್ಕೆ ಹೋಲಿಸಿದರೆ ಶೇ.10.3ರಷ್ಟು ಕಡಿಮೆಯಾಗಿದೆ. ದೇಶಕ್ಕೆ ಮುಂಗಾರು ಆಗಮನ ಇನ್ನೂ 1 ತಿಂಗಳಿರುವ ಕಾರಣ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ ಎನ್ನಲಾಗಿದೆ. 

ಪಾಕ್‌ನಲ್ಲಿ ಸಿಂಧು ನೀರು ಹಂಚಿಕೆಯನ್ನು ನಿರ್ವಹಿಸುವ ಐಆರ್‌ಎಸ್‌ಎ ಪ್ರಕಾರ, ಜೂ.2ರಂದು ಪಂಜಾಬ್‌ ಪ್ರಾಂತ್ಯದಲ್ಲಿ ಕೇವಲ 1,28,800 ಕ್ಯೂಸೆಕ್‌ ನೀರು ಲಭ್ಯವಿದ್ದು, ಇದು ಕಳೆದ ವರ್ಷಕ್ಕೆ ಹೋಲಿಸಿದರೆ 14,800 ಕ್ಯೂಸೆಕ್‌ನಷ್ಟು ಕಡಿಮೆ.ಕಳೆದ ತಿಂಗಳಷ್ಟೇ, ಈ ಬಾರಿ ದೇಶದಲ್ಲಿ ಶೇ.21ರಷ್ಟು ನೀರಿನ ಕೊರತೆಯಾಗಲಿದೆ ಎಂದಿದ್ದ ಸರ್ಕಾರ, ನೀರನ್ನು ವಿವೇಚನೆಯಿಂದ ಬಳಸುವಂತೆ ಅಧಿಕಾರಿಗಳಿಗೆ ಸೂಚಿಸಿತ್ತು.

ಸಿಂಧು ಮತ್ತು ಅದರ ಉಪನದಿಗಳಾದ ಝೀಲಂ, ಚಿನಾಬ್‌ನ ನೀರಿಲ್ಲದೆ ಪಾಕಿಸ್ತಾನ ಬಾಯಾರುತ್ತಿರುವುದಕ್ಕೆ, ಪ್ರಧಾನಿ ಶೆಹಬಾಜ್‌ ಷರೀಫ್‌ ಸೇರಿದಂತೆ ಕೆಲ ಉನ್ನತ ಅಧಿಕಾರಿಗಳು ಆಗಾಗ ಸಿಂಧು ಒಪ್ಪಂದ ತಡೆಯ ವಿರುದ್ಧ ಮಾತಾಡುತ್ತಿರುವುದೂ ಸಾಕ್ಷಿಯಾಗಿದೆ.

ಜೂ.9, 10ಕ್ಕೆ ಸರ್ವಪಕ್ಷ ನಿಯೋಗಗಳ ಜತೆ ಪ್ರಧಾನಿ ಸಭೆ

ನವದೆಹಲಿ: ಆಪರೇಷನ್ ಸಿಂದೂರದ ಬಳಿಕ ಜಾಗತಿಕವಾಗಿ ಪಾಕಿಸ್ತಾನದ ಉಗ್ರಮುಖವನ್ನು ಬಯಲು ಮಾಡಲು ವಿದೇಶಗಳಿಗೆ ತೆರಳಿರುವ ಸರ್ವಪಕ್ಷ ನಿಯೋಗಗಳ ಸದಸ್ಯರನ್ನು ಪ್ರಧಾನಿ ನರೇಂದ್ರ ಮೋದಿ ಜೂ.9 ಅಥವಾ 10ರಂದು ದಿಲ್ಲಿಯಲ್ಲಿ ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಸಭೆಯಲ್ಲಿ ವಿದೇಶಗಳಲ್ಲಿ ತಾವು ನಡೆಸಿದ ಮಾತುಕತೆ, ಅಲ್ಲಿನ ಜನರಿಂದ ಬಂದ ಪ್ರತಿಕ್ರಿಯೆ ಇತ್ಯಾದಿ ಅನುಭವಗಳನ್ನು ನಿಯೋಗಗಳ ಸದಸ್ಯರು ಮೋದಿಯವರೊಂದಿಗೆ ಹಂಚಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.ಕೇಂದ್ರ ಸರ್ಕಾರ ರಚಿಸಿರುವ 7 ಸರ್ವಪಕ್ಷ ನಿಯೋಗಗಳು ಜಗತ್ತಿನ 33 ದೇಶಗಳಿಗೆ ತೆರಳಿ ಪಾಕಿಸ್ತಾನ ಪ್ರಾಯೋಜಿತ ಉಗ್ರವಾದದ ಕುರಿತು ಮಾಹಿತಿ ನೀಡುತ್ತಿವೆ.

ಬಾಂಗ್ಲಾದಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಪಾಕ್ ಉಗ್ರ ಪಾಠ?

ನವದೆಹಲಿ: ಪಾಕಿಸ್ತಾನದ ಭಯೋತ್ಪಾದಕರು ಅದೆಷ್ಟೇ ಪೆಟ್ಟು ತಿಂದರೂ ತಮ್ಮ ಬುದ್ಧಿ ಮಾತ್ರ ಬಿಡುವಂತೆ ಕಾಣುತ್ತಿಲ್ಲ. ಅದಕ್ಕೆ ಸಾಕ್ಷಿಯೆನ್ನುವಂತೆ ಬಾಂಗ್ಲಾದೇಶದ ವಿವಿಗಳಲ್ಲಿ ಕಲಿಯುತ್ತಿರುವ ಭಾರತೀಯ ಮೂಲದ ವಿದ್ಯಾರ್ಥಿಗಳಲ್ಲಿ ಭಾರತ ವಿರೋಧಿ ಮನಸ್ಥಿತಿ ಬಿತ್ತಿ ತಮ್ಮತ್ತ ಸೆಳೆಯುವ ತಂತ್ರವನ್ನು ಲಷ್ಕರ್‌- ಎ- ತೊಯ್ಬಾ ಮತ್ತು ಜೈಷ್‌- ಎ - ಮೊಹಮ್ಮದ್‌ ಸಂಘಟನೆಗಳು ರೂಪಿಸಿವೆ ಎಂದು ವರದಿಯಾಗಿದೆ.

ಈ ಸಂಘಟನೆಗಳ ಉಗ್ರರು ಬಾಂಗ್ಲಾದೇಶ ಪ್ರವೇಶಿಸಿದ್ದಾರೆ. ಅಲ್ಲಿ ಕಲಿಯುತ್ತಿರುವ ಭಾರತೀಯ ಯುವಕರನ್ನು ಮೂಲಭೂತವಾದಿಗಳನ್ನಾಗಿ ಮಾಡಲು ಹೊರಟಿದ್ದಾರೆ ಎನ್ನಲಾಗಿದೆ. ಇದಕ್ಕೆ ಅಲ್ಲಿನ ಜಮಾತ್-ಇ- ಇಸ್ಲಾಮಿ ಸೇರಿದಂತೆ ಕೆಲ ಸಂಘಟನೆಗಳು ಕೂಡ ಸಾಥ್‌ ನೀಡಿದ್ದು ಅವು ಎಲ್ಇಟಿ, ಜೈಷ್‌ ಉಗ್ರ ಸಂಘಟನೆಗಳಿಗೆ ವಿವಿಗಳ ಕ್ಯಾಂಪಸ್‌ನಲ್ಲಿ ನೆರವಾಗುತ್ತಿವೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ಲಷ್ಕರ್‌ ಸಂಘಟನೆ ಬಾಂಗ್ಲಾದ ಜಮಾತ್‌ನ ವಿದ್ಯಾರ್ಥಿ ಸಂಘಟನೆ ಇಸ್ಲಾಮಿ ಛಾತ್ರ ಶಿಬಿರದ ನೆರವಿನೊಂದಿಗೆ ವಿವಿಯಲ್ಲಿ ವಿದ್ಯಾರ್ಥಿಗಳನ್ನು ಸೆಳೆಯುತ್ತಿದೆ. ವಿವಿಗಳ ಸನಿಹದಲ್ಲಿ ಹರ್ಕತ್‌- ಉಲ್- ಜಿಹಾದ್- ಅಲ್- ಇಸ್ಲಾಮಿ, ಜಮಾತ್- ಉಲ್- ಮುಜಾಹಿದ್ದೀನ್ ನಂತಹ ಸಂಘಟನೆಗಳು ಮದರಸಾ ಉಸ್ತುವಾರಿ ಹೊತ್ತಿವೆ. 

ಇಲ್ಲಿ ಇಸ್ಲಾಮಿಕ್ ಅಧ್ಯಯನ ಮಾಡಲು ಭಾರತೀಯ ಮುಸ್ಲಿಂ ವಿದ್ಯಾರ್ಥಿಗಳನ್ನು ಆಹ್ವಾನಿಸುತ್ತಿವೆ. ಅಲ್ಲಿ ಧಾರ್ಮಿಕ ವಿಚಾರದ ಬಗ್ಗೆ ಚರ್ಚೆ ಮಾಡಲು ಲಷ್ಕರ್‌ನ ವಿಡಿಯೋಗಳನ್ನು ವಿದ್ಯಾರ್ಥಿಗಳಿಗೆ ತೋರಿಸಿ, ಅವರಲ್ಲಿ ಉಗ್ರತ್ವದ ಬಗ್ಗೆ ಒಳ್ಳೆಯ ಅಭಿಪ್ರಾಯ ಬರುವಂತೆ ಮಾಡಲಾಗುತ್ತದೆ.

ಭಾರತ ವಿರೋಧಿ ಮನಸ್ಥಿತಿ ಸೃಷ್ಟಿ:ಬಾಂಗ್ಲಾದಲ್ಲಿ ಕಲಿಯುತ್ತಿರುವ ಭಾರತೀಯ ಮುಸ್ಲಿಂ ವಿದ್ಯಾರ್ಥಿಗಳಿಗೆ ಭಾರತದ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಬರುವ ರೀತಿಯಲ್ಲಿ ಪಾಕ್ ಉಗ್ರ ಸಂಘಟನೆಗಳು ತಮ್ಮ ಜಾಲ ವಿಸ್ತರಿಸಿದ್ದು, ಭಾರತದಿಂದ ಕೊಲ್ಲಲ್ಪಟ್ಟ ಉಗ್ರರನ್ನು ಹುತಾತ್ಮರೆಂದು ಢಾಕಾ ವಿವಿ ವೈಭವೀಕರಿಸಿದ್ದೇ ಇದಕ್ಕೆ ಸಾಕ್ಷಿ. 

ಮಾತ್ರವಲ್ಲದೇ ಪಹಲ್ಗಾಂ ದಾಳಿಯಂತಹ ಘಟನೆಗಳ ವಿಡಿಯೋವನ್ನು ಭಾರತದ ವಿರೋಧಿಯಾಗಿ ಪ್ರದರ್ಶಿಸಲಾಗಿದೆ ಎಂದು ವರದಿಯಾಗಿದೆ.ಮಾತ್ರವಲ್ಲದೇ ಸಿದ್ಧಾಂತ ಒಪ್ಪಿ ಮೂಲಭೂತವಾದಿಗಳಾಗಿ ಬದಲಾಗುವ ಭಾರತೀಯ ವಿದ್ಯಾರ್ಥಿಗಳನ್ನು ಬಾಂಗ್ಲಾದ ಮೂಲಕ ಲಷ್ಕರ್‌ ಸಂಘಟನೆಯು ಮ್ಯಾನ್ಮಾರ್‌ ಅಥವಾ ನೇಪಾಳದ ಮಾರ್ಗವಾಗಿ ಪಾಕಿಸ್ತಾನದ ತನ್ನ ಶಿಬಿರಗಳಿಗೆ ಕಳುಹಿಸುತ್ತದೆ. 

ಆಗಾಗ ಭಾರತದಲ್ಲಿ ಮುಸ್ಲಿಮರ ದಬ್ಬಾಳಿಕೆ ನಡೆಯುತ್ತಿದೆ ಎನ್ನುವ ಮೂಲಕ ಜಿಹಾದಿ ಮನಸ್ಥಿತಿ ಹೇರಲು ಯತ್ನಿಸುತ್ತಿದೆ. ಇದರ ಜೊತೆಗೆ ಆರ್ಥಿಕವಾಗಿ ಸೆಳೆಯುವ ಉಗ್ರರು ಆರ್ಥಿಕವಾಗಿ ದುರ್ಬಲರಾಗಿರುವ ಭಾರತೀಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಮೂಲಕ ತನ್ನತ್ತ ಸೆಳೆಯುವ ತಂತ್ರ ರೂಪಿಸಿದೆ. ಈ ರೀತಿ ಹಂತ ತಂತವಾಗಿ ತಂತ್ರ ರೂಪಿಸಿ ಭಾರತೀಯರನ್ನೇ ತನ್ನ ದೇಶದ ಮೇಲೆ ದ್ವೇಷ ಸಾಧಿಸುವಂತೆ ಮಾಡುವ ದುಷ್ಕೃತ್ಯಕ್ಕೆ ಪಾಕ್ ಮುಂದಾಗಿದೆ.

Read more Articles on