ಸಾರಾಂಶ
ಪಟನಾ: ಎಸ್ಸಿಎಸ್ಟಿ ಒಳಮೀಸಲಿನಲ್ಲಿ ಕೆನೆಪದರ ಇರಬೇಕು ಎಂಬ ಸುಪ್ರೀಂ ಕೋರ್ಟ್ ಅಭಿಪ್ರಾಯದ ವಿರುದ್ಧ ವಿವಿಧ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ ವೇಳೆ ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಇಲ್ಲಿ ಲಾಠಿ ಜಾರ್ಜ್ ನಡೆಸಿದ್ದು, ಆಕಸ್ಮಿಕವಾಗಿ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ಗೂ (ಎಸ್ಡಿಎಂ) ಲಾಠಿ ಬೀಸಿದ್ದಾರೆ.
ಸುಪ್ರೀಂ ತೀರ್ಪನ್ನು ವಿರೋಧಿಸಿ ಪಟನಾದ ದಾಕ್ ಬಂಗಲೆ ಚೌಕ್ನಲ್ಲಿ ಭೀಮ್ ಆರ್ಮಿ ಸಂಘಟನೆಯ ಮುಖಂಡರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಎಸ್ಡಿಎಂ ಕೂಡ ಸ್ಥಳಕ್ಕೆ ಆಗಮಿಸಿದ್ದರು. ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಪ್ರತಿಭಟನಾ ನಿರತರ ಮೇಲೆ ಲಾಠಿ ಪ್ರಯೋಗಿಸುವ ವೇಳೆ, ಸಾಮಾನ್ಯರಂತೆ ನಿಂತಿದ್ದ ಎಸ್ಡಿಎಂ ಮೇಲೆಯೂ ಆಕಸ್ಮಿಕವಾಗಿ ಬೀಸಿದ್ದಾರೆ. ಕೊನೆಗೆ ಎಸ್ಡಿಎಂ ಎಂದು ಗೊತ್ತಾಗಿ ಸುಮ್ಮನಾಗಿದ್ದಾರೆ. ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
==
ಏಪ್ರಿಲ್ನಲ್ಲಿ ಅಂತರಿಕ್ಷ ನಿಲ್ದಾಣಕ್ಕೆ ಭಾರತೀಯ ಗಗನಯಾತ್ರಿಗಳು: ಸಿಂಗ್
ನವದೆಹಲಿ: ನಾಸಾ ಮತ್ತು ಇಸ್ರೋದ ಸಹಭಾಗಿತ್ವದಲ್ಲಿ ಮುಂದಿನ ವರ್ಷದ ಏಪ್ರಿಲ್ನಲ್ಲಿ ಭಾರತದ ಗಗನಯಾತ್ರಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಲಿದ್ದಾರೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.ಮೊದಲ ‘ರಾಷ್ಟ್ರೀಯ ಬಾಹ್ಯಾಕಾಶ ದಿನದ ಕಾರ್ಯಕ್ರಮ’ದ ಕುರಿತಾಗಿ ನಡೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಜಿತೇಂದ್ರ ಸಿಂಗ್, ‘ ಭಾರತೀಯ ಗಗನಯಾತ್ರಿಗಳು ಮುಂದಿನ ವರ್ಷದ ಏಪ್ರಿಲ್ನಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಲಿದ್ದಾರೆ’ ಎಂದರು.ನಾಸಾ ಮತ್ತು ಇಸ್ರೋದ ಈ ಯೋಜನೆ ಭಾಗವಾಗಿ ದೇಶದ ಇಬ್ಬರು ಗಗನಯಾತ್ರಿಗಳಾಗಿರುವ ಸುಭಾಂಶು ಶುಕ್ಲಾ ಮತ್ತು ಪ್ರಶಾಂತ್ ಬಾಲಕೃಷ್ಣ ನಾಯರ್ ಆಯ್ಕೆಯಾಗಿದ್ದಾರೆ. ಅಲ್ಲದೇ ಇದಕ್ಕಂತಲೇ ಅಮೆರಿಕದಲ್ಲಿ ನುರಿತ ತರಬೇತಿಯನ್ನು ಪಡೆದಿದ್ದಾರೆ. ಶುಕ್ಲಾರನ್ನು ಈ ಯೋಜನೆಗೆ ಇಸ್ರೋ ನಿಯೋಜನೆ ಮಾಡಿದ್ದು, ನಾಯರ್ ಬ್ಯಾಕಪ್ ಆಗಿ ಉಳಿಯಲಿದ್ದಾರೆ.
==
ಭಾರತ್ ಬಂದ್ಗೆ ಮಿಶ್ರ ಪ್ರತಿಕ್ರಿಯೆ
ನವದೆಹಲಿ: ಎಸ್ಸಿ-ಎಸ್ಟಿ ಒಳ ಮೀಸಲಾತಿ ಕುರಿತು ಸುಪ್ರೀಂಕೋರ್ಟ್ ತೀರ್ಪನ್ನು ವಿರೋಧಿಸಿ ದಲಿತ ಮತ್ತು ಆದಿವಾಸಿ ಸಮುದಾಯದ 21 ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ಗೆ ದೇಶದ ಕೆಲವೆಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಜಾರ್ಖಂಡ್, ಬಿಹಾರ, ರಾಜಸ್ಥಾನ, ಉತ್ತರ ಪ್ರದೇಶ ಸೇರಿ ಉತ್ತರ ಭಾರತದ ಕೆಲವೆಡೆ ಬಂದ್ಗೆ ಪ್ರತಿಕ್ರಿಯೆ ಕಂಡುಬಂತು. ಆದರೆ ಹರಿಯಾಣ, ಪಂಜಾಬ್, ದಕ್ಷಿಣ ಭಾರತದಲ್ಲಿ ಬಂದ್ ವಿಫಲವಾಗಿದೆ.ಒಡಿಶಾದ ಕೆಲವೆಡೆ ರಸ್ತೆ ತಡೆದು ಪ್ರತಿಭಟನಾಕಾರರು ಪ್ರತಿಭಟಿಸಿದರು. ಆದರೆ ಸರ್ಕಾರಿ ಕಚೇರಿ, ಬ್ಯಾಂಕ್, ಶಾಲೆಗಳು ಎಂದಿನಂತೆ ತೆರೆದಿತ್ತು.
ಜಾರ್ಖಂಡ್ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸರ್ಕಾರಿ ಬಸ್ಗಳ ಓಡಾಟದಲ್ಲಿ ವ್ಯತ್ಯಯವಾಗಿತ್ತು. ಶಾಲಾ ಕಾಲೇಜುಗಳು ಮುಚ್ಚಲ್ಪಟ್ಟಿದ್ದವು. ಬಂದ್ ಕಾರಣದಿಂದಾಗಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಪಲಾಮು ಭೇಟಿ ರದ್ದುಗೊಂಡಿತು. ಕಾಂಗ್ರೆಸ್, ಜೆಎಂಎಂ ಸೇರಿದಂತೆ ಇಂಡಿಯಾ ಕೂಟ ಬೆಂಬಲಿಸಿತ್ತು. ಬಿಹಾರದಲ್ಲಿಯೂ ಬಂದ್ ಬಿಸಿ ತಟ್ಟಿತ್ತು. ಕೆಲವೆಡೆ ಟ್ರಾಫಿಕ್ ಜಾಮ್, ವಾಗ್ವಾದಗಳು, ಲಾಠಿಚಾರ್ಜ್ ನಡೆದ ಪ್ರಸಂಗವೂ ನಡೆಯಿತು. ಆರ್ಜೆಡಿ ಸೇರಿದಂತೆ ಇಂಡಿಯಾ ಕೂಟದ ನಾಯಕರು ಬಂದ್ ಬೆಂಬಲಿಸಿದರು.
ರಾಜಸ್ಥಾನದಲ್ಲಿ ಬಂದ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೆಲ ಜಿಲ್ಲೆಗಳಲ್ಲಿ ಶಾಲಾ- ಕಾಲೇಜುಗಳು .ಅಂಗಡಿ - ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದವು. ಭರತ್ಪುರದಲ್ಲಿ ಬಂದ್ ಕಾರಣದಿಂದ ಮೊಬೈಲ್ ಇಂಟರ್ನೆಟ್ ಸೇವೆ ಸ್ಥಗಿತಗೊಂಡಿತ್ತು.
==
ಸಂರಕ್ಷಿತ ಪ್ರದೇಶಗಳಲ್ಲಿ ಗಣಿಗಾರಿಕೆ ನಿಷೇಧ: ಸುಪ್ರೀಂ ಸಲಹೆ
ನವದೆಹಲಿ: ಸಂರಕ್ಷಿತ ಮತ್ತು ಸಮುದಾಯಗಳಿಗೆ ಮೀಸಲಿರಿಸಿರುವ ಪ್ರದೇಶಗಳಲ್ಲಿ ಗಣಿಗಾರಿಕೆಯನ್ನು ನಿಷೇಧಿಸುವ ಬಗ್ಗೆ ಚಿಂತನೆ ನಡೆಸಲು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಬುಧವಾರ ಸೂಚಿಸಿದೆ.
ವನ್ಯ ಜೀವಿಗಳು ಒಂದು ರಾಷ್ಟ್ರೀಯ ಉದ್ಯಾನವನ ಅಥವಾ ಅಭಯಾರಣ್ಯಕ್ಕೆ ಮುಕ್ತವಾಗಿ ಸಂಚರಿಸಲು ಅನುಕೂಲವಾಗಲು ಸಂರಕ್ಷಿತ ಪ್ರದೇಶಗಳನ್ನು ಗುರುತಿಸಲಾಗಿದ್ದು, ಅಲ್ಲಿ ಗಣಿಗಾರಿಕೆ ನಡೆಸಿದರೆ ಇದಕ್ಕೆ ಅಡಚಣೆ ಉಂಟಾಗುತ್ತದೆ ಎಂದು ನ್ಯಾ। ಬಿ.ಆರ್. ಗವಿ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ.ಸಂರಕ್ಷಿತ ಪ್ರದೇಶದ ಸುತ್ತಲಿನ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸುವುದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಲಯ ಕೇಂದ್ರಕ್ಕೆ ಈ ಮನವಿ ಮಾಡಿದೆ. ಜೊತೆಗೆ ಸರ್ಕಾರ ಪರಿಸರ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸಬೇಕು ಎಂದಿದೆ.
ಕಳೆದ ವರ್ಷ ಏ.26ರಂದು ಸಂರಕ್ಷಿತ ಹಾಗೂ ಮೀಸಲು ಪ್ರದೇಶಗಳ ಸುತ್ತಮುತ್ತ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡದಂತೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು.
==
ಪೇಟಿಎಂ ಸಿನಿಮಾ ಟಿಕೆಟಿಂಗ್ ಝೊಮ್ಯಾಟೋಗೆ 2048 ಕೋಟಿಗೆ ಸೇಲ್
ಭಾರತೀಯ ಆಹಾರ ವಿತರಣಾ ಕಂಪನಿಯಾದ ಝೊಮ್ಯಾಟೋ ಡಿಜಿಟಲ್ ಪಾವತಿ ಸಂಸ್ಥೆಯಾದ ಪೇಟಿಎಂನ ಚಲನಚಿತ್ರ ಮತ್ತು ಈವೆಂಟ್ಗಳ ಟಿಕೆಟಿಂಗ್ ವ್ಯವಹಾರಗಳನ್ನು 2048 ಕೋಟಿ ರು.ಗಳಿಗೆ ಖರೀದಿ ಮಾಡಿದೆ. ಆಗಸ್ಟ್ 21 ರಂದು ನಡೆದ ಝೊಮ್ಯಾಟೋ ಮತ್ತು ಪೇಟಿಎಂ ಮಂಡಳಿಗಳು ಈ ಖರೀದಿ ವಹಿವಾಟನ್ನು ಅನುಮೋದಿಸಿವೆ ಎಂದು ಎರಡೂ ಕಂಪನಿಗಳು ಷೇರು ವಿನಿಮಯ ಕೇಂದ್ರಗಳಿಗೆ ಬುಧವಾರ ತಿಳಿಸಿವೆ. ಇತ್ತೀಚಿನ ದಿನಗಳಲ್ಲಿ ಪೇಟಿಎಂ ಸಂಕಷ್ಟದಲ್ಲಿದೆ. ಹೀಗಾಗಿ ತನ್ನ ಸಿನಿಮಾ ಟಿಕೆಟಿಂಗ್ ವ್ಯವಹಾರ ಮಾರಿದೆ ಎನ್ನಲಾಗಿದೆ. ಆದರೂ ಪೇಟಿಎಂ ಆ್ಯಪ್ನಲ್ಲಿ 12 ತಿಂಗಳ ಮಟ್ಟಿಗ ಸಿನಿಮಾ ಟಿಕೆಟಿಂಗ್ ಸೌಲಭ್ಯ ಲಭ್ಯ ಇರಲಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.