ಪ್ರಣಬ್‌ರನ್ನು ಪ್ರಧಾನಿ ಮಾಡದಿದ್ದುದೇ ಯುಪಿಎ ಸೋಲಿಗೆ ಕಾರಣ : ಮಣಿಶಂಕರ ಅಯ್ಯರ್‌

| Published : Dec 16 2024, 12:45 AM IST / Updated: Dec 16 2024, 05:51 AM IST

ಸಾರಾಂಶ

2012ರಲ್ಲಿ  ಡಾ। ಮನಮೋಹನ ಸಿಂಗ್‌  ರಾಷ್ಟ್ರಪತಿಯನ್ನಾಗಿ ಮಾಡಬೇಕಿತ್ತು ಹಾಗೂ ಸಚಿವರಾಗಿದ್ದ ಪ್ರಣಬ್‌ ಮುಖರ್ಜಿ ಅವರನ್ನು ಪ್ರಧಾನಿ ಹುದ್ದೆಗೆ ಏರಿಸಬೇಕಿತ್ತು. ಹೀಗೆ ಮಾಡಿದ್ದರೆ 2014ರಲ್ಲಿ ಯುಪಿಎ-3 ಸರ್ಕಾರ ಖಂಡಿತ ಅಸ್ತಿತ್ವಕ್ಕೆ ಬರುತ್ತಿತ್ತು  - ಮಣಿಶಂಕರ ಅಯ್ಯರ್‌ ಹೇಳಿದ್ದಾರೆ.

 ನವದೆಹಲಿ : 2012ರಲ್ಲಿ ರಾಷ್ಟ್ರಪತಿ ಆಯ್ಕೆ ನಡೆದಾಗ ಅಂದಿನ ಪ್ರಧಾನಿಯಾಗಿದ್ದ ಡಾ। ಮನಮೋಹನ ಸಿಂಗ್‌ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಬೇಕಿತ್ತು ಹಾಗೂ ಸಚಿವರಾಗಿದ್ದ ಪ್ರಣಬ್‌ ಮುಖರ್ಜಿ ಅವರನ್ನು ಪ್ರಧಾನಿ ಹುದ್ದೆಗೆ ಏರಿಸಬೇಕಿತ್ತು. ಹೀಗೆ ಮಾಡಿದ್ದರೆ 2014ರಲ್ಲಿ ಯುಪಿಎ-3 ಸರ್ಕಾರ ಖಂಡಿತ ಅಸ್ತಿತ್ವಕ್ಕೆ ಬರುತ್ತಿತ್ತು ಎಂದು ಹಿರಿಯ ಕಾಂಗ್ರೆಸ್ಸಿಗ ಮಣಿಶಂಕರ ಅಯ್ಯರ್‌ ಹೇಳಿದ್ದಾರೆ.

ಅಯ್ಯರ್‌ ಅವರು ‘ಎ ಮೇವರಿಕ್ ಇನ್ ಪಾಲಿಟಿಕ್ಸ್’ ಎಂಬ ಪುಸ್ತಕ ಬರೆದಿದ್ದು, ಅದರಲ್ಲಿ ಈ ಅಂಶಗಳಿವೆ, ‘ಒಮ್ಮೆ ಸೋನಿಯಾ ಗಾಂಧಿ ಅವರು ಪ್ರಣಬ್‌ರನ್ನು ಕರೆದು 2012ರಲ್ಲಿ ‘ನೀವು ಪ್ರಧಾನಿ ಆಗಬಹುದು’ ಎಂದು ಸುಳಿವು ನೀಡಿದ್ದರು. ಈ ಬಗ್ಗೆ ನನ್ನ ಎದುರು ಪ್ರಣಬ್‌ ಹೇಳಿಕೊಂಡು, ‘ಸೋನಿಯಾ ಆಫರ್‌ ನನ್ನನ್ನು ಅಚ್ಚರಿಗೊಳಿಸಿದೆ’ ಎಂದಿದ್ದರು. 

ಆದರೆ ಅಂದುಕೊಂಡಿದ್ದು ಉಲ್ಟಾ ಆಯಿತು. ಪ್ರಣಬ್‌ ರಾಷ್ಟ್ರಪತಿಯಾಗಿ ಆಯ್ಕೆಯಾದರು. ಸಿಂಗ್‌ ಪ್ರಧಾನಿಯಾಗಿ ಮುಂದುವರಿದರು. ಇದು ನೀತಿ ಸ್ಥಾಗಿತ್ಯಕ್ಕೆ ಕಾರಣವಾಯಿತು. ಯುಪಿಎ-3 ಸರ್ಕಾರ ರಚನೆಯ ನಿರೀಕ್ಷೆಯನ್ನು ನಾಶಗೊಳಿಸಿತು’ ಎಂದಿದ್ದಾರೆ.‘ಪ್ರಣಬ್‌ ಉತ್ಸಾಹಿ ಕೆಲಸಗಾರನಾಗಿದ್ದರು. ಅವರಿಗೆ ಪ್ರಧಾನಿ ಪಟ್ಟ ಕೊಡಬೇಕಿತ್ತು. ಆಡಳಿತದಲ್ಲಿ ಸಾಕಷ್ಟು ಅನುಭವಿ ಆಗಿದ್ದ ಡಾ। ಸಿಂಗ್‌ಗೆ ರಾಷ್ಟ್ರಪತಿ ಹುದ್ದೆ ನೀಡಬೇಕಿತ್ತು’ ಎಂದು ಅಯ್ಯರ್‌ ಅಭಿಪ್ರಾಯಪಟ್ಟಿದ್ದಾರೆ.