ಸಾರಾಂಶ
ಪುಣೆ: ರಾಮಜನ್ಮ ಭೂಮಿ- ಬಾಬ್ರಿ ಮಸೀದಿ ವಿವಾದಕ್ಕೆ ಪರಿಹಾರ ನೀಡುವಂತೆ ನಾನು ಬೇಡಿಕೊಂಡಿದ್ದೆ ಎಂದು ಆ ವಿವಾದ ಬಗೆಹರಿಸಿದ್ದ ನ್ಯಾಯಪೀಠದ ಸದಸ್ಯ ಆಗಿದ್ದ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಾಧೀಶ ನ್ಯಾ। ಡಿ.ವೈ. ಚಂದ್ರಚೂಡ್ ಹೇಳಿದ್ದಾರೆ.
ತಮ್ಮ ಹುಟ್ಟೂರಾದ ಕನ್ಹೇರ್ಸರ್ನಲ್ಲಿ ಭಾನುವಾರ ಮಾತನಾಡಿದ ಅವರು, ‘ದೇವರು ದಾರಿ ತೋರುತ್ತಾನೆ. ತೀರ ಕಡಿಮೆ ಪ್ರಕರಣಗಳಲ್ಲಿ ನಾವು ಅಂತ್ಯ ಕಾಣಲಾಗುವುದಿಲ್ಲ. ಇದೇ ಮಾದರಿ ಅಯೋಧ್ಯೆ ರಾಮಜನ್ಮ ಭೂಮಿ ಬಾಬ್ರಿ ಮಸೀದಿ ಪ್ರಕರಣದಲ್ಲೂ ಆಗಿತ್ತು, ಅದು ನಮ್ಮ ಮುಂದೆ ಮೂರು ತಿಂಗಳು ಇತ್ತು. ನಾನು ದೇವರ ಮುಂದೆ ಕುಳಿತು ಪರಿಹಾರಕ್ಕಾಗಿ ಕುಳಿತಿದ್ದೆ‘ ಎಂದರು.
ನವೆಂಬರ್ 9, 2019ರಂದು ರಂಜನ್ ಗೊಗೋಯ್ ನೇತೃತ್ವದ ಐವರು ಸುಪ್ರೀಂ ಕೋರ್ಟ್ ನ್ಯಾಯಾಮೂರ್ತಿಗಳ ಪೀಠವು ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದಾರಿ ಮಾಡಿಕೊಡುವ ಮೂಲಕ ಶತಮಾನದ ವಿವಾದವನ್ನು ಬಗೆಹರಿಸಿತ್ತು. ಹಾಗೆಯೇ 5 ಎಕರೆ ಜಾಗದಲ್ಲಿ ಮಸೀದಿ ನಿರ್ಮಾಣಕ್ಕೂ ಆದೇಶಿಸಿತ್ತು ಎಂದು ಹೇಳಿದರು.
ಈ ಪೀಠದ ಐತಿಹಾಸಿಕ ತೀರ್ಪಿನ ಭಾಗವಾಗಿ ಚಂದ್ರಚೂಡ್ ಇದ್ದರು. ಜುಲೈನಲ್ಲಿ ಅವರು ರಾಮಮಂದಿರಕ್ಕೆ ಭೇಟಿ ನೀಡಿದ್ದರು. ಜನವರಿ 22ರಂದು ಬಾಲರಾಮ ಮೂರ್ತಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಉದ್ಘಾಟನೆಗೊಂಡಿತ್ತು.
ಜಾರ್ಖಂಡ್ ಬಳಿಕ ಉತ್ತರ ಪ್ರದೇಶದಲ್ಲೂ ‘ಇಂಡಿಯಾ’ದಲ್ಲಿ ಒಡಕು
ಲಖನೌ/ರಾಂಚಿ: ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಇಂಡಿಯಾ ಕೂಟದಲ್ಲಿ ಒಡಕು ಸೃಷ್ಟಿಆದ ಬೆನ್ನಲ್ಲೇ ಉತ್ತರ ಪ್ರದೇಶದಲ್ಲೂ ಒಡಕು ಉಂಟಾಗಿದೆ. ರಾಜ್ಯದಲ್ಲಿನ 10 ಕ್ಷೇತ್ರಗಳ ವಿಧಾನಸಭೆ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷ 6 ಕ್ಷೇತ್ರಗಳಲ್ಲಿ ಅಭ್ಯರ್ಥಿ ಘೋಷಿಸಿದ್ದು, 2 ಕ್ಷೇತ್ರಗಳಿಗೆ ಕಾಂಗ್ರೆಸ್ ಸ್ಪರ್ಧೆಗೆ ಅನುವು ಮಾಡಲಿದ್ದೇವೆ ಎಂದಿದೆ. ಆದರೆ ಕಾಂಗ್ರೆಸ್ 5 ಕ್ಷೇತ್ರ ಬೇಕೇ ಬೇಕೇಬೇಕು ಎಂದು ಪಟ್ಟು ಹಿಡಿದಿದೆ.
ಆರ್ಜೆಡಿ ಏಕಾಂಗಿ ಸ್ಪರ್ಧೆ: ಈ ನಡುವೆ, ಆರ್ಜೆಡಿ ಜಾರ್ಖಂಡ್ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಹೇಳಿದೆ. ಈ ಮೂಲಕ ಇಂಡಿಯಾ ಕೂಟದಲ್ಲಿ ಒಡಕು ಉಂಟಾಗಿದೆ.
16 ವರ್ಷದ ಬಾಲಕಿಗೆ ಬೆಂಕಿ ಹಚ್ಚಿ ಕೊಂದ ಪ್ರಿಯಕರ!
ಅಮರಾವತಿ: 11ನೇ ತರಗತಿ ವ್ಯಾಸಂಗ ಮಾಡುತ್ತಿದ್ದ 16 ವರ್ಷದ ಬಾಲಕಿಗೆ ಆಕೆಯ ಪ್ರಿಯತಮ ಬೆಂಕಿ ಹಚ್ಚಿದ ಪರಿಣಾಮ ರಾಜೀವ್ ಗಾಂಧಿ ಆಸತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ಬಡ್ವೇಲ್ ಪಟ್ಟಣದಲ್ಲಿ ನಡೆದಿದೆ. ವಿಘ್ನೇಶ್ ಎಂಬಾತ ಚಿಕ್ಕಂದಿನಿಂದಲೂ ಸ್ನೇಹಿತನಾಗಿದ್ದ. ಆತ ನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ ಎಂದು ಮೃತಳಾಗುವ ಮುನ್ನ ಬಾಲಕಿ ತಿಳಿಸಿದ್ದಾಳೆ.
ವಿಘ್ನೇಶ್ ಇತ್ತೀಚೆಗೆ ಬೇರೊಬ್ಬ ಹುಡುಗಿಯನ್ನು ಮದುವೆಯಾಗಿದ್ದ. ಆದರೆ ಅಪ್ರಾಪ್ತೆ ಸಂಬಂಧ ಮುಂದುವರೆಸಲು ಬಯಸಿ ಶನಿವಾರ ಭೇಟಿಯಾಗಬೇಕು ಎಂದು ಆಕೆಗೆ ತಿಳಿಸಿದ್ದ. ಆಕೆ ಕಾಲೇಜಿನಿಂದ ಆಟೋ ಹಿಡಿದು ಬಂದಿದ್ದಳು. ಮಾರ್ಗಮಧ್ಯೆ ಆತನೂ ಕೂಡ ಹತ್ತಿದ್ದ.ಇರ್ವರು ಬಡ್ವೇಲ್ನಿಂದ 10 ಕಿ.ಮೀ. ದೂರದ ಫ್ಲೈವುಡ್ ಫ್ಯಾಕ್ಟರಿಗೆ ತಲುಪಿದ್ದರು. ಬಳಿಕ ಮಾತಿಗೆ ಮಾತು ಬೆಳೆದು ಆಕೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ. ಆಕೆಯ ಕಿರುಚಾಟ ಕೇಳಿ ಸ್ಥಳೀಯ ರೈತರು ಧಾವಿಸಿದರು. ನಂತರ ಪೊಲೀಸರಿಗೆ ತಿಳಿಸಿ ಆಸ್ಪತ್ರೆಗೆ ಸೇರಿಸಿದರು. ಶೇ.80ರಷ್ಟು ಗಾಯಗೊಂಡಿದ್ದ ಆಕೆ ಕೊನೆಗೆ ಮೃತಳಾದಳು.ಘಟನೆ ಬಗ್ಗೆ ಸಿಎಂ ಚಂದ್ರಬಾಬು ನಾಯ್ಡು ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿ ಆರೋಪಿಗೆ ಮರಣದಂಡನೆ ಕೊಡಿಸುವಂತೆ ಪೊಲೀಸರಿಗೆ ತಾಕೀತು ಮಾಡಿದ್ದಾರೆ.
ವಾಯುಗುಣಮಟ್ಟ ಸೂಚ್ಯಂಕದಲ್ಲಿ ದಿಲ್ಲಿ ಮತ್ತೆ ಕಳಪೆ
ನವದೆಹಲಿ: ಅತಿಯಾದ ವಾಯುಮಾಲಿನ್ಯದಿಂದ ತತ್ತರಿಸಿ ಹೋಗಿರುವ ದೆಹಲಿಯಲ್ಲಿ ಭಾನುವಾರವೂ ಅದೇ ಪರಿಸ್ಥಿತಿ ಮುಂದುವರಿದಿದೆ. ವಾಯು ಗುಣಮಟ್ಟ ಸೂಚ್ಯಂಕದಲ್ಲಿ ದಿಲ್ಲಿಯ ಹವೆ ಮತ್ತೆ ಕಳಪೆಯಾಗಿದೆ.ದೆಹಲಿಯಲ್ಲಿ ಕಳೆದ 24 ಗಂಟೆಗಳ ಸರಾಸರಿಯಲ್ಲಿ ಬೆಳಿಗ್ಗೆ 9 ಗಂಟೆಗೆ ವಾಯು ಗುಣಮಟ್ಟ ಸೂಚ್ಯಂಕದಲ್ಲಿ 265 ಅಂಕ ದಾಖಲಾಗಿದೆ. ಇದು ಕಳಪೆಯ ಸಂಕೇತ.
ವಾಯು ಗುಣಮಟ್ಟ ಸೂಚ್ಯಂಕ, ಪ್ರಕಾರ ಶೂನ್ಯದಿಂದ 50ರ ನಡುವಿನ ಸೂಚ್ಯಂಕವನ್ನು ಉತ್ತಮ, 51 ರಿಂದ 100 ತೃಪ್ತಿದಾಯಕ, 201 ರಿಂದ 300 ಅಂಕವನ್ನು ಕಳಪೆ ಎಂದು ಗುರುತಿಸಲಾಗುತ್ತದೆ.ಈ ನಡುವೆ, ಉತ್ತರ ಪ್ರದೇಶ ಸೇರಿ ಹೊರರಾಜ್ಯದ ಬಸ್ಸು, ವಾಹನಗಳಿಂದ ದಿಲ್ಲಿಯಲ್ಲಿ ವಾಯುಮಾಲಿನ್ಯ ಉಂಟಾಗುತ್ತಿದೆ ಎಂದು ದಿಲ್ಲಿ ಸಿಎಂ ಆತಿಶಿ ಆರೋಪಿಸಿದ್ದಾರೆ.
ಚುನಾವಣೆ ಸ್ಪರ್ಧೆಗೆ ಜಡ್ಜ್ ರಾಜೀನಾಮೆ ಸರಿಯಲ್ಲ: ನ್ಯಾ। ಗವಾಯಿ
ಅಹಮದಾಬಾದ್: ‘ಚುನಾವಣೆಗೆ ಸ್ಪರ್ಧಿಸುವ ಸಲುವಾಗಿ ನ್ಯಾಯಾಧೀಶರು ರಾಜೀನಾಮೆ ಕೊಟ್ಟು ಹೋಗುವುದು ನ್ಯಾಯಾಂಗದ ಮೇಲೆ ಜನರಿಗಿರುವ ನಂಬಿಕೆಗೆ ಧಕ್ಕೆ ತರುತ್ತದೆ’ ಎಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾ। ಬಿ.ಆರ್. ಗವಾಯಿ ಅಭಿಪ್ರಾಯಪಟ್ಟಿದ್ದಾರೆ.ಭಾನುವಾರ ನ್ಯಾಯಾಧೀಶರ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ನೈತಿಕತೆ ಮತ್ತು ಸಮಗ್ರತೆ ನ್ಯಾಯಾಂಗದ ಆಧಾರಸ್ತಂಭಗಳು. ಇವು ಅದರ ಘನತೆಯನ್ನು ಎತ್ತಿಹಿಡಿಯುತ್ತವೆ. ನ್ಯಾಯಾಧೀಶರು ಕೋರ್ಟ್ ಹಾಗೂ ಹೊರೆಗೆ ಈ ಮಾನದಂಡಗಳಿಗೆ ಅನುಗುಣವಾಗಿರಬೇಕು ಎಂದರು.
‘ಕಚೇರಿಯಲ್ಲಿ ಇಲ್ಲವೇ ಹೊರಗೆ ನ್ಯಾಯಾಧೀಶರು ರಾಜಕಾರಣಿಯನ್ನಾಗಲಿ ಅಥವಾ ಅಧಿಕಾರಿಯನ್ನಾಗಲಿ ಹೊಗಳುವುದು ಜನರ ನಂಬಿಕೆಯನ್ನು ಘಾಸಿಗೊಳಿಸುತ್ತದೆ. ಇದರಿಂದ ಜನರು ಪ್ರಕರಣ ದಾಖಲಿಸಲು, ಮೇಲ್ಮನವಿ ಸಲ್ಲಿಸಲು ಹಿಂಜರಿಯಬಹುದು’ ಎಂದು ಹೇಳಿದರು.