ಸಾರಾಂಶ
ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಗುರುವಾರ ಲೋಕಸಭೆ ಮತ್ತು ರಾಜ್ಯಸಭೆ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ. ಇದು 18ನೇ ಲೋಕಸಭೆ ರಚನೆಯಾದ ಬಳಿಕ ದ್ರೌಪದಿ ಮುರ್ಮು ಅವರ ಮೊದಲ ಭಾಷಣ ಆಗಿರಲಿದ್ದು, ತಮ್ಮ ಭಾಷಣದಲ್ಲಿ ಮುರ್ಮು ಮೋದಿ ಸರ್ಕಾರದ ಮಹತ್ವಕಾಂಕ್ಷಿ ಕಾರ್ಯಕ್ರಮಗಳ ಬಗ್ಗೆ ಮಾತನಾಡುವ ಸಾಧ್ಯತೆಯಿದೆ. ಸಂವಿಧಾನದ 87ನೇ ವಿಧಿ ಪ್ರಕಾರ,ಲೋಕಸಭೆ ಚುನಾವಣೆ ನಡೆದ ಬಳಿಕ ರಾಷ್ಟ್ರಪತಿ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ. ಅದರಂತೆ ದ್ರೌಪದಿ ಮುರ್ಮು ಇಂದು ಭಾಷಣ ಮಾಡಲಿದ್ದಾರೆ.
ಜೈ ಪ್ಯಾಲೆಸ್ತೀನ್ ವಿವಾದ: ಒವೈಸಿ ಅನರ್ಹತೆಗೆ ರಾಷ್ಟ್ರಪತಿಗೆ ಅರ್ಜಿ
ನವದೆಹಲಿ: ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸುವಾಗ ‘ಜೈ ಪ್ಯಾಲೆಸ್ತೀನ್’ ಘೋಷಣೆ ಕೂಗಿದ ಹೈದರಾಬಾದ್ ಸಂಸದ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರನ್ನು ಲೋಕಸಭೆಯಿಂದ ವಜಾ ಮಾಡುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕಾಶಿ ಜ್ಞಾನವಾಪಿ ಮಸೀದಿ ಪ್ರಕರಣದಿಂದ ಖ್ಯಾತಿ ಪಡೆದಿರುವ ವಕೀಲ ಹರಿಶಂಕರ್ ಜೈನ್ ಅರ್ಜಿ ಸಲ್ಲಿಸಿದ್ದಾರೆ.
‘ಸಂವಿಧಾನದ 102ನೇ ವಿಧಿ ಪ್ರಕಾರ ‘ವಿದೇಶವೊಂದಕ್ಕೆ ನಿಷ್ಠೆ ಅಥವಾ ಬದ್ಧತೆ’ ತೋರಿಸುವ ಯಾವುದೇ ಸದನದ ಸದಸ್ಯರು ಅನರ್ಹತೆಗೆ ಈಡಾಗುತ್ತಾರೆ. ಹೀಗಾಗಿ ಪ್ಯಾಲೆಸ್ತೀನ್ ಎಂಬ ಅನ್ಯ ದೇಶಕ್ಕೆ ನಿಷ್ಠೆ ತೋರುವ ಘೋಷಣೆಯನ್ನು ಒವೈಸಿ ಕೂಗಿದ್ದು ಅತ್ಯಂತ ಗಂಭೀರ ವಿಷಯ ಮತ್ತು ರಾಷ್ಟ್ರೀಯ ಭದ್ರತೆಗೆ ಬೆದರಿಕೆ’ ಎಂದು ಜೈನ್ ಹೇಳಿದ್ದಾರೆ.
ಇದೇ ಆಗ್ರಹವನ್ನು ಬುಧವಾರ ಬಿಜೆಪಿ ವಕ್ತಾರ ಅಮಿತ್ ಮಾಳವೀಯ ಮಾಡಿದ್ದರು. ಈ ಬಗ್ಗೆ ಸ್ಪೀಕರ್ ಜತೆ ಮಾತನಾಡುವುದಾಗಿ ಸಂಸದೀಯ ಸಚಿವ ಕಿರಣ್ ರಿಜಿಜು ಹೇಳಿದ್ದರು.