ಜಲಂಧರ್‌ನ ಬಿಎಸ್‌ಎಫ್‌ ಕಚೇರಿ ಬಳಿ ಬ್ಲಾಸ್ಟ್‌ಅಮೃತಸರದ ಸೇನಾ ಕಂಟೋನ್ಮೆಂಟ್‌ ಗುರಿ

ದಾಳಿಯ ಹೊಣೆ ಹೊತ್ತ ಖಲಿಸ್ತಾನಿ ಸಂಘಟನೆಇದು ಗುಪ್ತಚರ ವೈಫಲ್ಯ: ವಿಪಕ್ಷಗಳ ಆಕ್ರೋಶ

ಚಂಡೀಗಢ: ಪಂಜಾಬ್‌ನ ಜಲಂಧರ್‌ ಮತ್ತು ಅಮೃತಸರದಲ್ಲಿರುವ ಭದ್ರತಾ ಸಂಸ್ಥೆಗಳ ಬಳಿ ಮಂಗಳವಾರ ರಾತ್ರಿ 2 ಪ್ರತ್ಯೇಕ ಸ್ಫೋಟಗಳು ಸಂಭವಿಸಿದ್ದು, ರಾಜ್ಯದಲ್ಲಿ ಆತಂಕ ಸೃಷ್ಟಿಸಿವೆ. ಈ ದಾಳಿಯ ಹೊಣೆಯನ್ನು ಕೆಎಲ್‌ಎ ಎಂಬ ಖಲಿಸ್ತಾನಿ ಸಂಘಟನೆ ಹೊತ್ತುಕೊಂಡಿದೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ.

ರಾತ್ರಿ 8ರ ಸುಮಾರಿಗೆ ಜಲಂಧರ್‌ನಲ್ಲಿರುವ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಪ್ರಧಾನ ಕಚೇರಿಯ ಎದುರು ಹಾಗೂ 11ರ ಹೊತ್ತಿಗೆ ಅಮೃತಸರದ ಸೇನಾ ಕಂಟೋನ್ಮೆಂಟ್‌ನ ಬಳಿ ಸ್ಫೋಟಗಳಾಗಿವೆ. ಎರಡೂ ಘಟನೆಗಳಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ವಿಧಿವಿಜ್ಞಾನ ತಂಡವು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುತ್ತಿದೆ.

ಕಿಡಿಗೇಡಿಗಳು ಕೈಯಿಂದ ಸ್ಫೋಟಕ ಎಸೆದು ಪರಾರಿಯಾಗಿದ್ದಾರೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಬ್ಲಾಸ್ಟ್‌ನಿಂದಾಗಿ ಬಿಎಸ್‌ಎಫ್‌ ಕಚೇರಿಯ ಕಾಂಪೌಂಡ್‌ಗೆ ಹಾಕಿದ್ದ ತವರದ ಶೀಟ್‌ ಬಿದ್ದಿದೆ. ಬಳಿಯಲ್ಲಿದ್ದ ಟ್ರಾಫಿಲ್‌ ಸಿಗ್ನಲ್‌ ಕಂಬಕ್ಕೆ ಹಾಗೂ ನಿಲ್ಲಿಸಲಾಗಿದ್ದ ಸ್ಕೂಟರ್‌ಗೆ ಬೆಂಕಿ ತಗುಲಿ ಹಾನಿಯಾಗಿದೆ. ಖಲಿಸ್ತಾನಿ ಕೈವಾಡ: ಈ ಸ್ಫೋಟಗಳ ಹೊಣೆಯನ್ನು ಖಲಿಸ್ತಾನಿ ಲಿಬರೇಷನ್‌ ಆರ್ಮಿ (ಕೆಎಲ್‌ಎ) ಹೊತ್ತುಕೊಂಡಿದ್ದು, ಫೆಬ್ರವರಿಯಲ್ಲಿ ಪೊಲೀಸ್‌ ಎನ್‌ಕೌಟರ್‌ನಿಂದಾಗಿ ಗುರುದಾಸಪುರದಲ್ಲಿ ಮೃತಪಟ್ಟ 19 ವರ್ಷದ ರಂಜಿತ್‌ ಸಿಂಗ್‌ ಸಾವಿಗೆ ಪ್ರತೀಕಾರವಿದು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಮಾಡಿದೆ. ವಿಪಕ್ಷ ವಾಗ್ದಾಳಿ:


ರಾಜ್ಯವನ್ನು ಅಸ್ಥಿರಗೊಳಿಸುವ ಈ ಯತ್ನಗಳನ್ನು ವಿಪಕ್ಷಗಳು ಖಂಡಿಸಿದ್ದು, ‘10 ದಿನದಲ್ಲಿ 3 ಹಾಗೂ ಒಂದೇ ದಿನದಲ್ಲಿ 2 ಸ್ಫೋಟಗಳಾಗಿವೆ. ಇದು ಗುಪ್ತಚರ ವೈಫಲ್ಯ ಮತ್ತು ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದರ ಸಂಕೇತ. ಆದರೆ ಸಿಎಂ ಭಗವಂತ್‌ ಮಾನ್‌ ಮಾತ್ರ ರಾಜಕಾರಣ ಮಾಡುವುದರಲ್ಲಿ ವ್ಯಸ್ತರಾಗಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿವೆ. ಏ.27ರಂದು ಪಟಿಯಾಲಾದ ಶಂಭು ಎಂಬಲ್ಲಿ ಸರಕು ಸಾಗಣೆ ರೈಲು ಸಾಗುವ ಹಳಿಯನ್ನು ಸ್ಫೋಟಿಸುವ ವಿಫಲ ಯತ್ನ ನಡೆದಿತ್ತು. ಅದರ ಹಿಂದಿದ್ದ ಪಾಕಿಸ್ತಾನದ ಐಎಸ್‌ಐ ಬೆಂಬಲಿತ ಖಲಿಸ್ತಾನಿ ಸಂಘಟನೆಗೆ ಸೇರಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದರು.