ನುರಿತ ಚೀನಿ ಸೈನಿಕರ ಮುಂದೆ ಅಗ್ನಿವೀರರ ಕತೆಯೇನು ಎಂದು ರಾಹುಲ್ ಪ್ರಶ್ನಿಸಿದ್ದು, ‘ಅದಾನಿಗೆ ಲಾಭ ಮಾಡಲು ಮೋದಿಯಿಂದ ಅಗ್ನಿವೀರ ಸ್ಕೀಂ’ ಜಾರಿ ಮಾಡಿಸಲಾಗಿದೆ ಎಂದು ಆರೋಪಿಸಿದ್ದಾರೆ.
ನಾಸಿಕ್: ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಲು 3-4 ವರ್ಷಗಳ ತರಬೇತಿ ಪಡೆದ ಚೀನಾದ ಸೈನಿಕರಿಗೆ ಕೇವಲ 6 ತಿಂಗಳು ತರಬೇತಿ ಪಡೆದ ಭಾರತದ ಅಗ್ನಿವೀರರು ಎದುರಾದರೆ ಇವರ ಕತೆ ಏನಾಗುತ್ತದೆ ಎಂಬುದನ್ನು ಊಹಿಸಿದ್ದೀರಾ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ನಡೆದ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಮಾತನಾಡಿದ ರಾಹುಲ್, ‘ಚೀನಾದ ಸೈನಿಕರಿಗೆ ಆಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಲು 3-4 ವರ್ಷಗಳ ತರಬೇತಿ ನೀಡಲಾಗಿರುತ್ತದೆ.
ನಮ್ಮ ಅಗ್ನಿವೀರರಿಗೆ ಕೇವಲ 6 ತಿಂಗಳ ತರಬೇತಿ ನೀಡಲಾಗುತ್ತದೆ. ಇವರಿಗೆ ಚೀನಾದ ಸೈನಿಕರನ್ನು ಎದುರಿಸುವ ಸಂದರ್ಭ ಬಂದರೆ ಏನಾಗಬಹುದು ಎಂಬುದನ್ನು ಊಹಿಸಬಲ್ಲಿರಾ’ ಎಂದು ಪ್ರಶ್ನಿಸಿದರು.
‘ಭಾರತದಲ್ಲಿ ಅಗ್ನಿವೀರ ಯೋಜನೆಯನ್ನು ಜಾರಿಗೆ ತಂದಿದ್ದು ಏಕೆ? ಏಕೆಂದರೆ ನರೇಂದ್ರ ಮೋದಿಗೆ ಸೈನಿಕರ ಪಿಂಚಣಿಗಾಗಿ ತೆಗೆದಿರಿಸಿದ ಹಣ ಅದಾನಿಗೆ ಹೋಗಬೇಕಿದೆ.
ಆ ಹಣದಲ್ಲಿ ಅದಾನಿ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಾರೆ. ಬಳಿಕ ಅವರು ಅಮೆರಿಕ ಮತ್ತು ಇಸ್ರೇಲಿ ಕಂಪನಿಗಳ ಜೊತೆ ಪಾಲುದಾರಿಕೆಯ ವ್ಯವಹಾರ ಮಾಡುತ್ತಾರೆ. ನಂತರ ಅವೇ ಶಸ್ತ್ರಾಸ್ತ್ರಗಳನ್ನು ಅದಾನಿ ಭಾರತದ ಸೇನಾಪಡೆಗಳಿಗೆ ಮಾರಾಟ ಮಾಡಿ ಹಣ ಗಳಿಸುತ್ತಾರೆ’ ಎಂದು ಹೇಳಿದರು.