ಸಾರಾಂಶ
ಜಮ್ಮು: ಜಮ್ಮುವಿನಲ್ಲಿ ಮಳೆ ಭಾರೀ ಅನಾಹುತ ಸೃಷ್ಟಿಸಿದೆ. ಮಂಗಳವಾರ ಸುರಿದ ಭಾರೀ ಮಳೆಗೆ ಭೂಕುಸಿತ, ಮನೆ, ಸೇತುವೆ ಕೊಚ್ಚಿ ಹೋದ ಘಟನೆ ಸಂಭವಿಸಿದ್ದು, 11 ಜನರು ಸಾವನ್ನಪ್ಪಿ, 15ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಭಾರೀ ಮಳೆಯ ಪರಿಣಾಮ ಮಾತಾ ವೈಷ್ಣೋದೇವಿ ದೇಗುಲಕ್ಕೆ ಹೋಗುವ ಮಾರ್ಗದಲ್ಲಿ ಭೂಕುಸಿತ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ವೈಷ್ಣೋದೇವಿ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ಕಥುವಾ ಜಿಲ್ಲೆಯಲ್ಲಿ ಅತಿ ಹೆಚ್ಚು 155.6 ಮಿ.ಮೀ ಮಳೆಯಾಗಿದ್ದು, ದೋಡಾದ ಭದೇರ್ವಾದಲ್ಲಿ 99.8 ಮಿ.ಮೀ., ಜಮ್ಮು (81.5 ಮಿ.ಮೀ.) ಮತ್ತು ಕತ್ರಾದಲ್ಲಿ (68.8 ಮಿ.ಮೀ.) ಮಳೆಯಾಗಿದೆ.
ಮನಾಲಿ ಕಟ್ಟಡ ನೆಲಸಮ:
ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಬಿಯಾಸ್ ನದಿಯಲ್ಲಿ ಪ್ರವಾಹ ಉಂಟಾಗಿದ್ದು, ಬಹುಮಹಡಿ ಹೋಟೆಲ್ ಹಾಗೂ 4 ಅಂಗಡಿ ಚ್ಚಿಕೊಂಡು ಹೋಗಿವೆ. ಮನಾಲಿ-ಲೇಹ್ ಹೆದ್ದಾರಿ ಸಂಚಾರ ಸ್ಥಗಿತಗೊಂಡಿದೆ. ನೂರಾರು ನಿವಾಸಿಗಳು ಸಂಪರ್ಕ ಮತ್ತು ವಿದ್ಯುತ್ ಇಲ್ಲದ ಅನೇಕ ಸ್ಥಳಗಳಲ್ಲಿ ಸಿಲುಕಿಕೊಂಡಿದ್ದಾರೆ.