6 ತಾಸಲ್ಲಿ 30 ಸೆಂ.ಮೀ. ಮಳೆಗೆ ಮುಂಬೈ ತತ್ತರ

| Published : Jul 09 2024, 12:50 AM IST / Updated: Jul 09 2024, 04:49 AM IST

ಸಾರಾಂಶ

ಮುಂಬೈ ಹಾಗೂ ಸುತ್ತಮುತ್ತ ಸೋಮವಾರ ಸತತ 6 ಗಂಟೆ ಕಾಲ ಸುರಿದ 30 ಸೆಂ.ಮೀ. ಮಳೆಯು ಭಾರಿ ಅನಾಹುತ ಸೃಷ್ಟಿಸಿದ್ದು, ಜನಜೀವನವನ್ನು ಸಂಪೂರ್ಣ ಸ್ತಬ್ಧ ಮಾಡಿದೆ

 ಮುಂಬೈ :  ಮುಂಬೈ ಹಾಗೂ ಸುತ್ತಮುತ್ತ ಸೋಮವಾರ ಸತತ 6 ಗಂಟೆ ಕಾಲ ಸುರಿದ 30 ಸೆಂ.ಮೀ. ಮಳೆಯು ಭಾರಿ ಅನಾಹುತ ಸೃಷ್ಟಿಸಿದ್ದು, ಜನಜೀವನವನ್ನು ಸಂಪೂರ್ಣ ಸ್ತಬ್ಧ ಮಾಡಿದೆ. ಹಳಿಗಳ ಮೇಲೆ ನೀರು ನಿಂತಿದ್ದರಿಂದ ಕೇಂದ್ರ ರೈಲ್ವೆಯ ಉಪನಗರ ಸೇವೆಗಳ ಮೇಲೆ ತೀವ್ರ ಪರಿಣಾಮ ಉಂಟಾಯಿತು ಮತ್ತು 50 ವಿಮಾನ ಸಂಚಾರ ರದ್ದಾದವು.ಮಳೆಯ ಅನಾಹುತದಿಂದಾಗಿ ನಗರದ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ವಾಹನ ಸಂಚಾರದ ಮೇಲೆ ಪರಿಣಾಮ ಬೀರಿತು. ಮುಂಬೈ, ರತ್ನಾಗಿರಿ ಮತ್ತು ಸಿಂಧುದುರ್ಗ ಜಿಲ್ಲೆಗಳ ಎಲ್ಲಾ ಶಾಲೆಗಳಿಗೆ ರಾಜ್ಯ ಸರ್ಕಾರ ರಜೆ ಘೋಷಿಸಿತ್ತು.

ಮಳೆಯ ಅಬ್ಬರದಿಂದಾಗಿ ಹಲವು ಶಾಸಕರು ಮತ್ತು ಅಧಿಕಾರಿಗಳು ವಿಧಾನ ಭವನಕ್ಕೆ ತೆರಳಲು ಸಾಧ್ಯವಾಗದ ಕಾರಣ ಮಹಾರಾಷ್ಟ್ರ ವಿಧಾನಮಂಡಲದ ಉಭಯ ಸದನಗಳನ್ನು ಮುಂದೂಡಲಾಯಿತು. ಈ ನಡುವೆ ಅಗತ್ಯವಿಲ್ಲದ ಹೊರತೂ ಮನೆಯಿಂದ ಹೊರಬರಬೇಡಿ ಎಂದು ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಮುಂಬೈ ನಿವಾಸಿಗಳಿಗೆ ಮನವಿ ಮಾಡಿದ್ದಾರೆ.

ರೈಲು ಸ್ಥಗಿತಗೊಂಡು ಹಳಿ ಮೇಲೆ 2 ಕಿ.ಮೀ. ನಡೆದ ಸಚಿವ

ಸೋಮವಾರ ಮಳೆ ಕಾರಣ ರಸ್ತೆ ಸಂಚಾರ ಸ್ಥಗಿತಗೊಂಡು ಹಲವು ಸಚಿವ/ಶಾಸಕರು ಉಪನಗರ ರೈಲು ಮೂಲಕ ವಿಧಾನಸಭೆಗೆ ಬರಲು ಯತ್ನಿಸಿದರು. ಆದರೆ ಹಳಿಗಳ ಮೇಲೂ ನೀರು ಬಂದ ಕಾರಣ ರೈಲು ಸಂಚಾರ ಸ್ಥಗಿತಗೊಂಡಿತು. ಇದರ ನಡುವೆ ವಿಕೋಪ ಪರಿಶೀಲನೆಗಾಗಿ ರೈಲು ಮೂಲಕ ತೆರಳುತ್ತಿದ್ದ ಪ್ರಕೃತಿ ವಿಕೋಪ ಪರಿಹಾರ ಸಚಿವ ಅನಿಲ್‌ ಪಾಟೀಲ್‌ ದಾದರ್‌-ಕುರ್ಲಾ ರೈಲು ನಿಲ್ದಾಣದ ನಡುವೆ ಸಿಲುಕಿದರು. ಹೀಗಾಗಿ ಹಳಿಗಳ ಮೇಲೆಯೇ 2 ಕಿ.ಮೀ. ನಡೆಯುತ್ತ ಸಮೀಪದ ನೆಹರು ನಗರ ತಲುಪಿದರು.