ಸಾರಾಂಶ
ಅಯೋಧ್ಯೆ: ರಾಮ ಮಂದಿರದಲ್ಲಿ ಬಾಲಕ ರಾಮನ ಪ್ರಾಣ ಪ್ರತಿಷ್ಠಾಪನೆಯಾದ ನಂತರ ಭಾರೀ ಭಕ್ತಗಣದ ಉದ್ಘೋಷದ ನಡುವೆ ಮೊದಲ ರಾಮನವಮಿ ಬುಧವಾರ ನಡೆದಿದ್ದು, ಅಯೋಧ್ಯೆಯಲ್ಲಿ ಸಡಗರ ಕಳೆಗಟ್ಟಿತ್ತು.
500 ವರ್ಷಗಳ ಬಳಿಕ ಅಯೋಧ್ಯೆಯ ರಾಮನ ಜನ್ಮಸ್ಥಳದಲ್ಲೇ ಅದ್ಧೂರಿಯಾಗಿ ರಾಮನವಮಿ ಆಚರಣೆ ನಡೆಯುವ ಮೂಲಕ ಐತಿಹಾಸಿಕ ಕ್ಷಣಗಳಿಗೆ ಉತ್ತರ ಪ್ರದೇಶ ಸಾಕ್ಷಿಯಾಯಿತು.ಬುಧವಾರ ಬೆಳಗಿನ ಜಾವ 3.30ಕ್ಕೆ ಮಂಗಳಾ ಆರತಿ ನೆರವೇರಿಸುವುದರ ಮೂಲಕ ರಾಮಮಂದಿರದ ಗರ್ಭಗುಡಿ ಬಾಗಿಲು ತೆರೆಯಲಾಯಿತು.
ಮಧ್ಯಾಹ್ನ 12ಕ್ಕೆ ಸರಿಯಾಗಿ ಬಾಲರಾಮನ ಹಣೆಯ ಮೇಲೆ ಸೂರ್ಯರಶ್ಮಿ ಬೀಳುವಂತೆ ವ್ಯವಸ್ಥೆ ಮಾಡಲಾಗಿತ್ತು. ಈ ಅಪೂರ್ವ ವಿಸ್ಮಯವನ್ನು ದೂರದರ್ಶನ ಪ್ರಸಾರ ಮಾಡಿದ್ದು, ವಿಶ್ವಾದ್ಯಂತ ಶ್ರೀರಾಮನ ಭಕ್ತಾದಿಗಳು ಕಣ್ತುಂಬಿಕೊಂಡರು. ಬಳಿಕ ಇಡೀ ದಿನ ದೇಗುಲ ತೆರೆದಿದ್ದು ರಾತ್ರಿ 11 ರ ತನಕವೂ ಬಾಲಕರಾಮ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಹಬ್ಬದ ದಿನದಂದು ರಾಮನಿಗೆ ಉಣಬಡಿಸಲು 56 ಬಗೆಯ ಭೋಗ್ ಪ್ರಸಾದಗಳನ್ನು ಸಿದ್ಧಪಡಿಸಲಾಗಿತ್ತು. ಇದರ ಜೊತೆಗೆ ದೇವ್ರ ಹಂಸ್ ಟ್ರಸ್ಟ್ ನಿಂದ 1,11,111 ಕೆ.ಜಿ ಲಡ್ಡು ಪ್ರಸಾದವನ್ನು ದೇಗುಲಕ್ಕೆ ಬರುವ ಭಕ್ತರಿಗೆ ವಿತರಿಸಲಾಯಿತು.ಬಾಲರಾಮನ ಪೂಜೆ ಕೈಂಕರ್ಯಗಳು ನೇರ ಪ್ರಸಾರಗೊಳ್ಳಲು ಅಯೋಧ್ಯೆಯಾದ್ಯಂತ 100 ಎಲ್ಇಡಿ ಪರದೆಯ ವ್ಯವಸ್ಥೆಯನ್ನು ಮಾಡಲಾಗಿತ್ತು.