ದೆಹಲಿಯಲ್ಲಿನ ರಾಷ್ಟ್ರೀಯ ಸ್ವಯಂಸೇವಕ ಸಂಘದ 13 ಅಂತಸ್ತಿನ ಹೊಸ ಕಟ್ಟಡ ನಿರ್ಮಾಣ ಕೆಲಸ ಪೂರ್ಣ

| N/A | Published : Feb 13 2025, 12:46 AM IST / Updated: Feb 13 2025, 04:26 AM IST

ಸಾರಾಂಶ

ದೆಹಲಿಯಲ್ಲಿನ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಚೇರಿ ‘ಕೇಶವ್‌ ಕುಂಜ್‌’ನ ಮರುನಿರ್ಮಾಣ ಕಾರ್ಯ ಸಂಪನ್ನಗೊಂಡಿದೆ. 3.75 ಎಕರೆ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಈ ಭವ್ಯ ಕಟ್ಟಡದಲ್ಲಿ 13 ಅಂತಸ್ತುಗಳಿದ್ದು, ಕಚೇರಿಯನ್ನು ಹೊರತುಪಡಿಸಿ 300 ಕೋಣೆಗಳಿವೆ.

ನವದೆಹಲಿ: ದೆಹಲಿಯಲ್ಲಿನ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಚೇರಿ ‘ಕೇಶವ್‌ ಕುಂಜ್‌’ನ ಮರುನಿರ್ಮಾಣ ಕಾರ್ಯ ಸಂಪನ್ನಗೊಂಡಿದೆ. 3.75 ಎಕರೆ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಈ ಭವ್ಯ ಕಟ್ಟಡದಲ್ಲಿ 13 ಅಂತಸ್ತುಗಳಿದ್ದು, ಕಚೇರಿಯನ್ನು ಹೊರತುಪಡಿಸಿ 300 ಕೋಣೆಗಳಿವೆ. ಈ ಪ್ರದೇಶದಲ್ಲಿ 1962ರಲ್ಲಿ ಸಂಘದ ಮೊದಲ ಕಚೇರಿ ತನ್ನ ಕಾರ್ಯ ಆರಂಭಿಸಿತ್ತು. ಅದೇ ಜಾಗದಲ್ಲಿ 2016ರಲ್ಲಿ ಶುರುವಾಗಿದ್ದ ಜೀರ್ಣೋದ್ಧಾರ ಕಾರ್ಯವು ಕೋವಿಡ್‌ ಕಾರಣದಿಂದ ಕೊಂಚ ತಡವಾಗಿ (8 ವರ್ಷಗಳ ಬಳಿಕ) ಪೂರ್ಣಗೊಂಡಿದ್ದು, ಆರ್‌ಎಸ್‌ಎಸ್‌ ಸಿದ್ಧಾಂತಗಳನ್ನು ಅನುಸರಿಸುವ ಸುಮಾರು 75 ಸಾವಿರ ಜನರು ನೀಡಿದ 150 ಕೋಟಿ ರು. ದೇಣಿಗೆಯಿಂದ ಇದನ್ನು ಕಟ್ಟಲಾಗಿದೆ.

ಹೊಸ ಕಚೇರಿ ಹೇಗಿದೆ?:ಮೊದಲಿದ್ದ ಎರಡಂತಸ್ತಿನ ಕಟ್ಟಡದ ಜಾಗದಲ್ಲಿ, ಪುರಾತನ ವಾಸ್ತುಶಿಲ್ಪದಂತೆ ಗಾಳಿ ಹಾಗೂ ಬೆಳಕು ಯತೇಚ್ಛವಾಗಿ ಲಭಿಸುವಂತೆ 13 ಅಂತಸ್ತುಗಳ 3 ಕಟ್ಟಡಗಳು(ಸಾಧನಾ, ಪ್ರೇರಣಾ, ಅರ್ಚನಾ) ಎದ್ದುನಿಂತಿವೆ. ಇವು ಆಧುನಿಕ ತಂತ್ರಜ್ಞಾನಗಳನ್ನೊಳಗೊಂಡಿವೆ.

ಆರ್‌ಎಸ್‌ಎಸ್‌ನ ಅಂಗಸಂಸ್ಥೆಯಾದ ವಿಶ್ವ ಹಿಂದೂ ಪರಿಷತ್‌ನ ರಾಮ ಮಂದಿರ ಚಳವಳಿಯೊಂದಿಗಿನ ನಂಟಿನ ನೆನಪಾರ್ಥ, ಕಚೇರಿ ಆವರಣದಲ್ಲಿರುವ ಅತಿದೊಡ್ಡ ಸಭಾಂಗಣಕ್ಕೆ ‘ಅಶೋಕ ಸಿಂಘಾಲ್’ ಎಂದು ಹೆಸರಿಡಲಾಗಿದೆ. ಉಳಿದಂತೆ ಈ ಕಟ್ಟಡದಲ್ಲಿ ಕಾರ್ಯಕರ್ತರು ಹಾಗೂ ಸದಸ್ಯರರಿಗಾಗಿ ವಸತಿ ವ್ಯವಸ್ಥೆ, ಗ್ರಂಥಾಲಯ, ಕ್ಲೀನಿಕ್‌, ಒಳಚರಂಡಿ ಸಂಸ್ಕರಣಾ ಘಟಕಕಗಳಿವೆ. ಇಡೀ ಕಟ್ಟಡಕ್ಕೆ ಸೌರವಿದ್ಯುತ್‌ ಬಳಸಲಾಗುವುದು. ಸಂಘದ ಪತ್ರಿಕೆಗಳಾದ ಪಾಂಚಜನ್ಯ ಹಾಗೂ ಆರ್ಗನೈಸರ್‌ ಕಚೇರಿಗಳನ್ನೂ ಇದೇ ಕಟ್ಟಡದ ಆವರಣದಲ್ಲಿ ತೆರೆಯಲಾಗುವುದು. 

ಬೆಂಗಳೂರಲ್ಲಿ ಸಂಘದ ಸಭೆ: ಆರೆಸ್ಸೆಸ್‌ನ ವಾರ್ಷಿಕ ‘ಅಖಿಲ ಭಾರತೀಯ ಪ್ರತಿನಿಧಿ ಸಭೆ’ ಮಾ.21ರಿಂದ 32ರ ವರೆಗೆ ಬೆಂಗಳೂರಿನಲ್ಲಿ ನಡೆಯಲಾಗುವುದು ಎಂದು ಮೂಲಗಳು ತಿಳಿಸಿವೆ. ಹಲವು ಪ್ರಮುಖ ವಿಷಯಗಳ ಕುರಿತು ಚರ್ಚಿಸಲಾಗುವ ಈ ಸಭೆಗೆ ಸಂಘದ ಹಾಗೂ ಅಂಗಸಂಸ್ಥೆಗಳ ಹಿರಿಯ ಕಾರ್ಯಕರ್ತರು ಸೇರಿದಂತೆ 1,500 ಜನ ಬರುವ ನಿರೀಕ್ಷೆಯಿದೆ. ಜೊತೆಗೆ, ಬಿಜೆಪಿ ಅಧ್ಯಕ್ಷರು ಸೇರಿದಮತೆ ಹಿರಿಯ ನಾಯಕರು ಆಗಮಿಸಲಿದ್ದಾರೆ ಎನ್ನಲಾಗಿದೆ.