ಜಾತಿ ಗಣತಿಗೆ ಬಿಜೆಪಿಯ ಸೈದ್ಧಾಂತಿಕ ಸಂಸ್ಥೆ ಆರ್‌ಎಸ್‌ಎಸ್‌ ಬೆಂಬಲ : ಷರತ್ತುಗಳೇನು?

| Published : Sep 03 2024, 01:44 AM IST / Updated: Sep 03 2024, 04:26 AM IST

ಸಾರಾಂಶ

ದೇಶಾದ್ಯಂತ ಜಾತಿ ಗಣತಿ ನಡೆಸಬೇಕೆಂಬ ಕೂಗು ಕೇಳಿಬರುತ್ತಿರುವ ಬೆನ್ನಲ್ಲೇ, ಆರ್‌ಎಸ್‌ಎಸ್‌ ಜಾತಿ ಗಣತಿಗೆ ಬೆಂಬಲ ಸೂಚಿಸಿದೆ. ಆದರೆ, ಗಣತಿಯ ಅಂಕಿ-ಸಂಖ್ಯೆಗಳನ್ನು ರಾಜಕೀಯ ಅಥವಾ ಚುನಾವಣಾ ಉದ್ದೇಶಗಳಿಗೆ ಬಳಸಬಾರದು ಎಂದೂ ಅಭಿಪ್ರಾಯಪಟ್ಟಿದೆ.

ನವದೆಹಲಿ: ದೇಶಾದ್ಯಂತ ಜಾತಿ ಗಣತಿ ನಡೆಸಬೇಕು ಎಂಬ ಕೂಗೆಬ್ಬಿಸುವ ಮೂಲಕ ಪ್ರತಿಪಕ್ಷಗಳು ಅದನ್ನು ಪ್ರಬಲ ಅಸ್ತ್ರ ಮಾಡಿಕೊಂಡಿರುವಾಗಲೇ ಹಾಗೂ ಈ ವಿಚಾರವಾಗಿ ಸ್ಪಷ್ಟ ನಿಲುವು ತಳೆಯಲು ಬಿಜೆಪಿ ಹಿಂದೆ-ಮುಂದೆ ನೋಡುತ್ತಿರುವಾಗಲೇ ಬಿಜೆಪಿಯ ಸೈದ್ಧಾಂತಿಕ ಸಂಸ್ಥೆ ಆರ್‌ಎಸ್‌ಎಸ್‌, ಜಾತಿ ಗಣತಿ ಬೆಂಬಲಿಸುವ ಸುಳಿವು ನೀಡಿದೆ.

ಇದೇ ವೇಳೆ, ಜಾತಿ ಗಣತಿಯ ಅಂಕಿ-ಸಂಖ್ಯೆಗಳನ್ನು ರಾಜಕೀಯ ಅಥವಾ ಚುನಾವಣೆ ಉದ್ದೇಶಕ್ಕೆ ಬಳಸಿಕೊಳ್ಳಬಾರದು ಎಂದೂ ಹೇಳಿದೆ.

ಮತ್ತೊಂದೆಡೆ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಒಳ ಮೀಸಲಾತಿ ವಿಚಾರವಾಗಿ ಆ ಸಮುದಾಯಗಳ ಒಮ್ಮತಾಭಿಪ್ರಾಯ ಪಡೆಯದೆ ಯಾವುದೇ ಹೆಜ್ಜೆ ಇಡಬಾರದು ಎಂದು ಸಲಹೆ ಮಾಡಿದೆ.

ಕೇರಳದ ಪಾಲಕ್ಕಾಡ್‌ನಲ್ಲಿ ನಡೆದ ಮೂರು ದಿನಗಳ ಅಖಿಲ ಭಾರತೀಯ ಸಮನ್ವಯ ಬೈಠಕ್‌ನ ಕೊನೆಯ ದಿನ ಸುದ್ದಿಗಾರರ ಜತೆ ಮಾತನಾಡಿದ ಆರ್‌ಎಸ್‌ಎಸ್‌ ಪ್ರಚಾರ ವಿಭಾಗದ ಮುಖ್ಯಸ್ಥ ಸುನೀಲ್‌ ಅಂಬೇಕರ್‌, ಹಿಂದುಳಿದಿರುವ ಸಮುದಾಯ ಅಥವಾ ಜಾತಿಗಳನ್ನೇ ಗುರಿಯಾಗಿಸಿ ರೂಪಿಸಲಾಗುವ ಕಲ್ಯಾಣ ಕಾರ್ಯಕ್ರಮಗಳ ಜಾರಿಗೆ ಸರ್ಕಾರಕ್ಕೆ ಸಂಖ್ಯೆ ಬೇಕು ಎಂದಾದರೆ, ಅದಕ್ಕೊಂದು ಸ್ಥಾಪಿತ ಅಭ್ಯಾಸವಿದೆ. ಹಿಂದೆ ಕೂಡ ಸರ್ಕಾರಗಳು ಅಂತಹ ದತ್ತಾಂಶ ಪಡೆದಿದ್ದವು. ಈಗ ಮತ್ತೆ ಪಡೆಯಬಹುದು. ಆದರೆ ಆ ದತ್ತಾಂಶ ಆ ಸಮುದಾಯ ಅಥವಾ ಜಾತಿಗಳಿಗೆ ಮಾತ್ರ ಬಳಕೆಯಾಗಬೇಕು ಎಂದರು.

==ಬಾಂಗ್ಲಾ ಹಿಂದೂ, ಬಂಗಾಳ ವೈದ್ಯೆ, ತಮಿಳುನಾಡು ಮತಾಂತರ ಬಗ್ಗೆ ಆರ್‌ಎಸ್‌ಎಸ್‌ ಕಳವಳಪಾಲಕ್ಕಾಡ್: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸಾಚಾರ, ಕೋಲ್ಕತಾದಲ್ಲಿ ಇತ್ತೀಚೆಗೆ ವೈದ್ಯೆಯ ಮೇಲೆ ನಡೆದ ಅತ್ಯಾಚಾರ, ಹತ್ಯೆ ಮತ್ತು ತಮಿಳುನಾಡಿಯಲ್ಲಿ ವ್ಯಾಪಕವಾಗಿದೆ ಎನ್ನಲಾದ ಹಿಂದೂಗಳ ಮತಾಂತರ ಕುರಿತು ಆರ್‌ಎಸ್‌ಎಸ್‌ ತೀವ್ರ ಕಳವಳ ವ್ಯಕ್ತಪಡಿಸಿದೆ.ಇಲ್ಲಿ ನಡೆಯುತ್ತಿರುವ ಮೂರು ದಿನಗಳ ಬೈಠಕ್‌ನ ಮೊದಲ ದಿನ ಈ ಕುರಿತು ಪ್ರತಿಕ್ರಿಯೆ ನೀಡಿರುವ ಆರ್‌ಎಸ್‌ಎಸ್‌ನ ಹಿರಿಯ ನಾಯಕ ಸುನಿಲ್‌ ಅಂಬೇಕರ್‌, ‘ಬಾಂಗ್ಲಾದೇಶದಲ್ಲಿ ಸೂಕ್ಷ್ಮ ಸಮಸ್ಯೆ ಎದುರಾಗಿದೆ. 

ಅಲ್ಲಿನ ಹಿಂದೂ ಹಾಗೂ ಅನ್ಯ ಅಲ್ಪಸಂಖ್ಯಾತರ ಮೇಲಿನ ದಾಳಿ ಕಳವಳಕಾರಿ. ಹೀಗಾಗಿ ಬಾಂಗ್ಲಾದಲ್ಲಿರುವ ಹಿಂದೂಗಳು ಹಾಗೂ ಅನ್ಯ ಅಲ್ಪಸಂಖ್ಯಾತರ ಸುರಕ್ಷತೆಯನ್ನು ಖಚಿತಪಡಿಸುವ ಸಲುವಾಗಿ ಅಲ್ಲಿನ ಸರ್ಕಾರದೊಂದಿಗೆ ಮಾತುಕತೆ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ.ಇದೇ ವೇಳೆ ಕೋಲ್ಕತಾ ವೈದ್ಯೆ ಮೇಲಿನ ಅತ್ಯಾಚಾರ, ಹತ್ಯೆ ಬಗ್ಗೆಯೂ ಕಳವಳ ವ್ಯಕ್ತಪಡಿಸಿರುವ ಆರ್‌ಎಸ್‌ಎಸ್‌, ಈ ಘಟನೆ ಖಂಡನಾರ್ಹ. ಇಂಥ ಪ್ರಕರಣಗಳು ದೇಶದಲ್ಲಿನ ಕಾನೂನು ಮತ್ತು ಶಿಕ್ಷೆಯಲ್ಲಿ ಬದಲಾವಣೆಯ ಅನಿವಾರ್ಹತೆಯನ್ನು ಹೇಳಿವೆ. ಈ ಮೂಲಕ ಇಂಥ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ತ್ವರಿತ ನ್ಯಾಯ ಸಿಗುವಂತೆ ಸರ್ಕಾರಗಳು ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದೆ.ಈ ನಡುವೆ ತಮಿಳುನಾಡಿನಲ್ಲಿ ಮಿಷನರಿಗಳಿಂದ ಮತಾಂತರದ ಅನೇಕ ಪ್ರಕರಣ ವರದಿಯಾಗುತ್ತಿದೆ. ಇದು ಕಳವಳಕಾರಿ, ಇದನ್ನು ಸಂಘಟನೆ ಗಂಭೀರವಾಗಿ ಪರಿಗಣಿಸಲಿದೆ ಎಂದು ಹೇಳಿದೆ.