ಸಾರಾಂಶ
ನವದೆಹಲಿ: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ‘ಪಿತ್ರಾರ್ಜಿತ ಆಸ್ತಿ ಮರುಹಂಚಿಕೆ, ದಕ್ಷಿಣ ಭಾರತೀಯರು ಆಫ್ರಿಕನ್ನರು’ ಎಂದು ವಿವಾದಿತ ಹೇಳಿಕೆಗಳನ್ನು ನೀಡಿ ಕಾಂಗ್ರೆಸ್ಗೆ ಭಾರೀ ಮುಜುಗರ ಉಂಟು ಮಾಡಿದ್ದ ಸ್ಯಾಮ್ ಪಿತ್ರೋಡಾಗೆ ಪಕ್ಷ ಮತ್ತೆ ಮಹತ್ವದ ಹುದ್ದೆ ನೀಡಿದೆ.
ವಿವಾದಿತ ಹೇಳಿಕೆ ಬಳಿಕ ಪಿತ್ರೋಡಾ, ಭಾರತೀಯ ಸಾಗರೋತ್ತರ ಕಾಂಗ್ರೆಸ್ನ ಅಧ್ಯಕ್ಷರಾಗಿದ್ದ ಸ್ಯಾಂ ಪಿತ್ರೋಡಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದೀಗ ಅವರನ್ನು ಮರಳಿ ಅದೇ ಹುದ್ದೆಗೆ ನೇಮಕ ಮಾಡಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ಆದೇಶ ಹೊರಡಿಸಿದ್ದಾರೆ.
ಸ್ಯಾಮ್ ಪಿತ್ರೋಡಾ, ರಾಹುಲ್ ಗಾಂಧಿ ಅವರ ಅತ್ಯಾಪ್ತರಾಗಿದ್ದಾರೆ.ಸ್ಯಾಂ ಪಿತ್ರೋಡಾ, ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಭಾರತದಲ್ಲಿ ಪಿತ್ರಾರ್ಜಿತ ಆಸ್ತಿ ಮರು ಹಂಚಿಕೆ ಮಾಡಬೇಕು, ರಾಮ ಮಂದಿರ ನಿರ್ಮಾಣ ನಿರುಪಯುಕ್ತ ಎಂಬೆಲ್ಲಾ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಇದರೊಂದಿಗೆ ‘ಪೂರ್ವ ಭಾರತೀಯರು ಚೀನಿಯರ ರೀತಿ, ದಕ್ಷಿಣ ಭಾರತೀಯರು ಆಫ್ರಿಕನ್ನರ ರೀತಿ, ಪಶ್ಚಿಮ ಭಾರತೀಯರು ಅರಬ್ಬರು ಹಾಗೂ ಉತ್ತರ ಭಾರತೀಯರು ಬಿಳಿಯರ ರೀತಿ ಕಾಣಿಸುತ್ತಾರೆ’ ಎಂದು ಹೇಳಿ ವಿವಾದದ ಕಡಲನ್ನು ಸೃಷ್ಟಿಸಿದ್ದರು. ಇದರ ಪರಿಣಾಮ ಕಾಂಗ್ರೆಸ್ ಸಹ ಈ ಹೇಳಿಕೆಗಳಿಂದ ದೂರ ಉಳಿದಿತ್ತು. ಇದಾದ ಬಳಿಕ ಮೇ 8ರಂದು ಸ್ಯಾಂ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷಗಿರಿಗೆ ರಾಜೀನಾಮೆ ಸಲ್ಲಿಸಿದ್ದರು.