ಸಾರಾಂಶ
ನವದೆಹಲಿ : ಜೂ.15 ರಂದು ನಿಗದಿಯಾಗಿರುವ ‘ನೀಟ್-ಪಿಜಿ 2025’ಅನ್ನು 2 ಪಾಳಿಗಳ ಬದಲಿಗೆ ಒಂದೇ ಪಾಳಿಯಲ್ಲಿ ನಡೆಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ರಾಷ್ಟ್ರೀಯ ಪರೀಕ್ಷಾ ಮಂಡಳಿಗೆ (ಎನ್ಬಿಇ) ಸೂಚಿಸಿದೆ.
ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕಾಗಿ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಯಾದ ನೀಟ್-ಪಿಜಿ ಅನ್ನು 2 ಶಿಫ್ಟ್ಗಳಲ್ಲಿ ನಡೆಸುವ ನಿರ್ಧಾರವನ್ನು ಪರೀಕ್ಷಾ ಮಂಡಳಿ ಕೈಗೊಂಡಿತ್ತು. ‘ಒಂದೇ ಪಾಳಿಯಲ್ಲಿ ಪರೀಕ್ಷೆ ನಡೆಸಲು ಪರೀಕ್ಷಾ ಕೇಂದ್ರಗಳ ಕೊರತೆ ಆಗಬಹುದು. ಹೆಚ್ಚುವರಿ ವೀಕ್ಷಕರ ನಿಯೋಜನೆ ಹಾಗೂ ಸುಗಮ ಪರೀಕ್ಷೆ ಕಷ್ಟವಾಗಬಹುದು’ ಎಂದು ಅದು ತನ್ನ 2 ಶಿಫ್ಟ್ ನಿರ್ಧಾರಕ್ಕೆ ಕಾರಣ ನೀಡಿತ್ತು. ಇದನ್ನು ಪ್ರಶ್ನಿಸಿ ಅರ್ಜಿಯೊಂದು ಕೋರ್ಟಿಗೆ ಸಲ್ಲಿಕೆ ಆಗಿತ್ತು.
ಇದರ ವಿಚಾರಣೆ ನಡೆಸಿದ ನ್ಯಾ। ವಿಕ್ರಮ್ ನಾಥ್, ನ್ಯಾ। ಸಂಜಯ್ ಕುಮಾರ್ ಮತ್ತು ನ್ಯಾ। ಎನ್.ಕೆ. ಅಂಜಾರಿಯಾ ಅವರ ಪೀಠ, ‘ಬಹು ಶಿಫ್ಟ್ಗಳಲ್ಲಿ ಪರೀಕ್ಷೆ ನಡೆಸುವುದು ವ್ಯತ್ಯಾಸಗಳಿಗೆ ಕಾರಣವಾಗಬಹುದು. ಇದರಿಂದಾಗಿ ಅಭ್ಯರ್ಥಿಗಳಲ್ಲಿ ಅನ್ಯಾಯ ಹಾಗೂ ತಾರತಮ್ಯದ ಭಾವನೆ ಉಂಟಾಗಬಹುದು. ದೇಶದಲ್ಲಿನ ತಾಂತ್ರಿಕ ಪ್ರಗತಿ ಗಮನಿಸಿದರೆ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲು ಸಾಕಷ್ಟು ಕೇಂದ್ರಗಳಿಲ್ಲ ಎಂಬುದನ್ನು ಒಪ್ಪಲಾಗದು’ ಎಂದು ಅಭಿಪ್ರಾಯಪಟ್ಟು ಒಂದೇ ಪಾಳಿಯ ಪರೀಕ್ಷೆಗೆ ಸೂಚಿಸಿತು.
2-ಶಿಫ್ಟ್ ವ್ಯವಸ್ಥೆಯ ನ್ಯಾಯಸಮ್ಮತತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ವೈದ್ಯಕೀಯ ಆಕಾಂಕ್ಷಿಗಳು ಮತ್ತು ಶಿಕ್ಷಕರು, ‘ವಿಭಿನ್ನ ಶಿಫ್ಟ್ಗಳಿರುವ ಕಾರಣ ಪ್ರಶ್ನೆಗಳಲ್ಲೂ ವ್ಯತ್ಯಾಸ ಇರುತ್ತದೆ. ಇದು ವಿದ್ಯಾರ್ಥಿಗಳ ಶ್ರೇಯಾಂಕಗಳು ಮತ್ತು ಭವಿಷ್ಯದ ವೃತ್ತಿಜೀವನದ ನಿರೀಕ್ಷೆಗಳ ಮೇಲೆ ಪರಿಣಾಮ ಬೀರಬಹುದು’ ಎಂದು ವಾದಿಸಿದ್ದರು.
ಛತ್ತೀಸ್ಗಢ: ನಕ್ಸಲರ ವಿರುದ್ಧ ಹೋರಾಡಿದ್ದ 295 ಪೊಲೀಸರಿಗೆ ಬಡ್ತಿ
ರಾಯ್ಪುರ: ನಕ್ಸಲ್ ನಿಗ್ರಹಕ್ಕೆ ಪಣ ತೊಟ್ಟಿರುವ ಛತ್ತೀಸ್ಗಢದಲ್ಲಿ ಮಾವೋವಾದಿಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ 295 ಸಿಬ್ಬಂದಿಗೆ ಅವಧಿಪೂರ್ವ ಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಛತ್ತೀಸ್ಗಢದ ನಕ್ಸಲ್ ಪೀಡಿತ ಪ್ರದೇಶ, ಅದರಲ್ಲಿಯೂ ವಿಶೇಷವಾಗಿ ಬಸ್ತರ್ ವಿಭಾಗದಲ್ಲಿ ನಿಯೋಜಿಸಲಾದ ಕೆಳ ಮತ್ತು ಮಧ್ಯಮ ಶ್ರೇಣಿಯ ಅಧಿಕಾರಿಗಳು ಸೇರಿದಂತೆ 295 ಪೊಲೀಸ್ ಸಿಬ್ಬಂದಿಗೆ ಸರ್ಕಾರ ಪದೋನ್ನತಿ ನೀಡಿದೆ. 206 ಪೇದೆಗಳನ್ನು ಮುಖ್ಯ ಪೇದೆ ಆಗಿ, 37 ಮುಖ್ಯ ಪೇದೆಗಳನ್ನು ಎಎಸ್ಐ ಆಗಿ, 15 ಎಎಎಸ್ಐಗಳನ್ನು ಪಿಎಸ್ಐ ಆಗಿ ಹಾಗೂ 15 ಪಿಎಸ್ಐಗಳನ್ನು ಇನ್ಸ್ಪೆಕ್ಟರ್ ಆಗಿ ಪದೋನ್ನತಿ ಮಾಡಲಾಗಿದೆ.
ಈ ವರ್ಷ ಛತ್ತೀಸ್ಗಢದಲ್ಲಿ 206 ನಕ್ಸಲೀಯರನ್ನು ಹತ್ಯೆ ಮಾಡಲಾಗಿದೆ. ಇತ್ತೀಚೆಗೆ ನಂ.1 ನಕ್ಸಲ್ ನಾಯಕ ಬಸವರಾಜನನ್ನೂ ಹತ್ಯೆ ಮಾಡಲಾಗಿತ್ತು. ಇದಕ್ಕೆ ಮೆಚ್ಚುಗೆ ರೂಪದಲ್ಲಿ ಪದೋನ್ನತಿ ನೀಡಲಾಗಿದೆ.ಈ ಬಗ್ಗೆ ಡಿಸಿಎಂ, ಗೃಹ ಸಚಿವ ವಿಜಯ್ ಶರ್ಮಾ ತಮ್ಮ ಎಕ್ಸ್ ಮಾಹಿತಿ ಹಂಚಿಕೊಂಡಿದ್ದು, ‘ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಶೌರ್ಯ, ಧೈರ್ಯ ಮತ್ತು ಸಮರ್ಪಣಾಭಾವದಿಂದ ಕೆಲಸ ಮಾಡುತ್ತಿರುವ ಛತ್ತೀಸ್ಗಢದ 295 ಪೊಲೀಸ್ ಸಿಬ್ಬಂದಿಗೆ ಅವಧಿ ಪೂರ್ವ ಬಡ್ತಿ ನೀಡಲಾಗುತ್ತಿದೆ’ ಎಂದಿದ್ದಾರೆ.
ದಾರಿತಪ್ಪಿಸುವ ಹೂಡಿಕೆಗೆ ಸಲಹೆ: ನಟ ಅರ್ಷದ್ ವಾರ್ಸಿಗೆ ಸೆಬಿ ನಿಷೇಧ
ನವದೆಹಲಿ: ದಾರಿತಪ್ಪಿಸುವ ಹೂಡಿಕೆ ಸಲಹೆಗಳನ್ನು ನೀಡುತ್ತಿದ್ದ ಬಾಲಿವುಡ್ ನಟ ಅರ್ಷದ್ ವಾರ್ಸಿ, ಅವರ ಪತ್ನಿ ಮಾರಿಯಾ ಗೊರೆಟ್ಟಿ ಸೇರಿ 58 ಜನರನ್ನು ಮಾರುಕಟ್ಟೆ ನಿಯಂತ್ರಣ ಸಂಸ್ಥೆ ಸೆಬಿ ಇನ್ನು 1ರಿಂದ 5 ವರ್ಷ ಷೇರು ಪೇಟೆಯಲ್ಲಿ ವ್ಯವಹಾರ ನಡೆಸದಂತೆ ನಿರ್ಬಂಧ ವಿಧಿಸಿದೆ.ಯೂಟ್ಯೂಬ್ ಚಾನಲ್ನಲ್ಲಿ ಸಾಧನಾ ಬ್ರಾಡ್ಕಾಸ್ಟ್ನ ಷೇರುಗಳನ್ನು ಖರೀದಿಸುವಂತೆ ಸಲಹೆ ನೀಡುತ್ತಿದ್ದುದರಿಂದ ಸೆಬಿ ಈ ಕ್ರಮ ಕೈಗೊಂಡಿದೆ. ವಾರ್ಸಿ ಮತ್ತು ಪತ್ನಿಗೆ ತಲಾ 5 ಲಕ್ಷ ರು. ದಂಡ ವಿಧಿಸಿದ್ದು, 1 ವರ್ಷದ ವರೆಗೆ ಷೇರುಪೇಟೆ ವ್ಯವಹಾರಗಳಲ್ಲಿ ತೊಡಗದಂತೆ ನಿರ್ಬಂಧ ವಿಧಿಸಿದೆ. ಕೆಲವರಿಗೆ 5 ಕೋಟಿ ರು. ದಂಡವನ್ನೂ ವಿಧಿಸಲಾಗಿದೆ.ಜತೆಗೆ, ತನಿಖಾ ಅವಧಿಯ ಅಂತ್ಯದಿಂದ ಪಾವತಿಯ ದಿನದವರೆಗೆ ವಾರ್ಷಿಕ ಶೇ.12 ಬಡ್ಡಿಯೊಂದಿಗೆ ಒಟ್ಟು 58.01 ಕೋಟಿ ರು.ಗಳ ಕಾನೂನುಬಾಹಿರ ಲಾಭವನ್ನು ಜಂಟಿಯಾಗಿ ಮತ್ತು ಪ್ರತ್ಯೇಕವಾಗಿ ಬಿಡುಗಡೆ ಮಾಡಬೇಕು ಎಂದು ಸೆಬಿ ಸೂಚಿಸಿದೆ.
ಆನ್ಲೈನ್ನಲ್ಲಿ ಲೈಸೆನ್ಸಿಂಗ್ ಮಾಹಿತಿ ಇಲ್ಲದ ವಾಕಿಟಾಕಿ ಮಾರಾಟಕ್ಕೆ ಬ್ರೇಕ್
ನವದೆಹಲಿ: ಅಮೆಜಾನ್, ಫ್ಲಿಪ್ಕಾರ್ಟ್ನಂಥ ಇ-ಕಾಮರ್ಸ್ ವೇದಿಕೆಗಳಲ್ಲಿ ವಾಕಿಟಾಕಿ ಸೇರಿ ರೇಡಿಯೋ ಉಪಕರಣಗಳ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಲು ಕೇಂದ್ರ ಗ್ರಾಹಕರ ರಕ್ಷಣಾ ಪ್ರಾಧಿಕಾರ(ಸಿಸಿಪಿಎ)ವು ಶುಕ್ರವಾರ ಸಮಗ್ರ ನಿಯಮಾವಳಿವೊಂದನ್ನು ಬಿಡುಗಡೆ ಮಾಡಿದೆ.
ಸಿಸಿಪಿಎ ಈ ನಿರ್ಧಾರದಿಂದ ವೈರ್ಲೆಸ್ ಆಪರೇಟಿಂಗ್ ಲೈಸೆನ್ಸ್ ಮತ್ತಿತರ ಮಾಹಿತಿಗಳನ್ನು ಬಹಿರಂಗಪಡಿಸದೆ ನಡೆಯುತ್ತಿರುವ ವಾಕಿ-ಟಾಕಿಗಳ ಮಾರಾಟಕ್ಕೆ ಬ್ರೇಕ್ ಬೀಳಲಿದೆ. ಈ ರೀತಿ ಸೂಕ್ತ ಮಾಹಿತಿ ನೀಡದೆ ವಾಕಿಟಾಕಿಯಂಥ ರೇಡಿಯೋ ಉಪಕರಣಗಳ ಮಾರಾಟ ಗ್ರಾಹಕರ ರಕ್ಷಣಾ ಕಾಯ್ದೆ-2019ರ ಉಲ್ಲಂಘನೆ ಎಂದು ಸಿಸಿಪಿಎ ಹೇಳಿದೆ.ದೂರಸಂಪರ್ಕ ಇಲಾಖೆ, ಗೃಹ ಇಲಾಖೆಗಳ ಜತೆಗೆ ಸುದೀರ್ಘ ಸಮಾಲೋಚನೆ ಬಳಿಕ ಈ ನಿಯಮಾವಳಿ ರೂಪಿಸಲಾಗಿದೆ. ಈ ಇಲಾಖೆಗಳು ಸೂಚಿಸಿದ ಪ್ರಮುಖ ನಿಯಂತ್ರಣ ಮತ್ತು ಭದ್ರತಾ ವಿಚಾರಗಳನ್ನೂ ಈ ನಿಯಮಾವಳಿಯಲ್ಲಿ ಸೇರಿಸಲಾಗಿದೆ.
ಈ ರೀತಿ ಮಾರಾಟವಾಗುವ ವಾಕಿಟಾಕಿಗಳು ಸೂಕ್ತ ಪ್ರಾಧಿಕಾರಗಳಿಂದ ಪರವಾನಗಿ ಪಡೆದಿದೆಯೇ?, ಫ್ರೀಕ್ವೆನ್ಸಿ ರೇಂಜ್ಗಳು, ಭಾರತೀಯ ಟೆಲಿಗ್ರಾಫ್ ಕಾಯ್ದೆ, ವೈರ್ಲೆಸ್ ಟೆಲಿಗ್ರಾಫ್ ಕಾಯ್ದೆಯಡಿಯ ಲೈಸೆನ್ಸ್ ಷರತ್ತುಗಳನ್ನು ಪೂರೈಸಲಾಗಿದೆಯೇ ಎಂಬಿತರ ಮಾಹಿತಿಗಳನ್ನು ಈ ಉತ್ಪನ್ನಗಳ ಜತೆಗೆ ನೀಡಲಾಗಿಲ್ಲ.ಈ ಮಾಹಿತಿ ಕೊರತೆಯಿಂದಾಗಿ ಇಂಥ ಉತ್ಪನ್ನಗಳನ್ನು ಸಾಮಾನ್ಯ ಉದ್ದೇಶಕ್ಕೂ ಬಳಸಬಹುದು ಎಂಬ ಭಾವನೆ ಗ್ರಾಹಕರಲ್ಲಿ ಬೆಳೆದಿದೆ. ಸಿಸಿಪಿಎಯ ಹೊಸ ನಿಯಮಾವಳಿಯಿಂದಾಗಿ ಇನ್ನು ಮುಂದೆ ಅಧಿಕೃತ ಮತ್ತು ಷರತ್ತುಗಳನ್ನು ಪೂರೈಸಿದ ವಾಕಿಟಾಕಿ ಉಪಕರಣಗಳನ್ನಷ್ಟೇ ಆನ್ಲೈನ್ ವೇದಿಕೆಗಳಲ್ಲಿ ಮಾರಾಟ ಮಾಡಬಹುದಾಗಿದೆ.