ಸಾರಾಂಶ
- ಸುಪ್ರೀಂ ಆದೇಶ ಸ್ವಾಗತಿಸಿದ ಕಾಂಗ್ರೆಸ್, ಮಿತ್ರಪಕ್ಷಗಳು
ನವದೆಹಲಿ: ದೇಶಾದ್ಯಂತ ತೀವ್ರ ಚರ್ಚೆ ಹುಟ್ಟುಹಾಕಿರುವ ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆಗೆ ಭಾಗಶಃ ತಡೆ ನೀಡಿದ ಸುಪ್ರೀಂ ಕೋರ್ಟ್ ನಿರ್ಧಾರವನ್ನು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಸ್ವಾಗತಿಸಿವೆ. ಇದು ನ್ಯಾಯದ ಕುರಿತಸಾಂವಿಧಾನಿಕ ಮೌಲ್ಯಗಳು, ಸಮಾನತೆ ಮತ್ತು ಭ್ರಾತೃತ್ವಕ್ಕೆ ಸಿಕ್ಕ ಗೆಲುವಾಗಿದೆ. ಜತೆಗೆ, ಬಿಜೆಪಿ ಸರ್ಕಾರಕ್ಕೆ ಮಾಡಿದ ಕಪಾಳ ಮೋಕ್ಷವಾಗಿದೆ ಎಂದು ಹೇಳಿಕೊಂಡಿವೆ.
ಸುಪ್ರೀಂ ಕೋರ್ಟ್ನ ಈ ತೀರ್ಪು ಮೂಲ ಕಾನೂನಿನಲ್ಲಿ ಚೇಷ್ಟೆಯ ಉದ್ದೇಶವನ್ನು ತಡೆಯುವ ನಿಟ್ಟಿನಲ್ಲಿ ಸುದೀರ್ಘ ಮಾರ್ಗ ನಿರ್ಧರಿಸುವ ಸಾಧ್ಯತೆ ಇದೆ. ಈ ತೀರ್ಪಿನ ಬಳಿಕ ಜನರ ಜಮೀನು ಸುರಕ್ಷಿತವಾಗಲಿದೆ. ಇದು ಕೇಂದ್ರ ಸರ್ಕಾರದ ಷಡ್ಯಂತ್ರಗಳಿಗೆ ಕಡಿವಾಣ ಹಾಕಲಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವ ಬದ್ಧತೆಯನ್ನು ಸುಪ್ರೀಂ ಕೋರ್ಟ್ನ ಮಧ್ಯಂತರ ಆದೇಶವು ಖಚಿತಪಡಿಸಿದೆ. ಬಿಜೆಪಿಯು ವಿಭಜನೆಯ ಕಾನೂನು ಜಾರಿಗೆ ತರಲು ಉದ್ದೇಶಿಸಿತ್ತು. ಈ ಮೂಲಕ ಭಾರತವು ತೀರಾ ಹಿಂದೆಯೇ ಇತ್ಯರ್ಥಪಡಿಸಿಕೊಂಡಿದ್ದ ವಿಚಾರಗಳನ್ನು ಮತ್ತೆ ಕೆದಕಲು ಹಾಗೂ ಕೋಮುಭಾವನೆ ಬಿತ್ತಲು ಪ್ರಯತ್ನಿಸಿತ್ತು. ಆದರೆ ಕಾಂಗ್ರೆಸ್ ಪಕ್ಷ ಎಲ್ಲಾ ನಾಗರಿಕರ ಹಕ್ಕುಗಳನ್ನು ರಕ್ಷಿಸುವ ವಿಚಾರದಲ್ಲಿ ಯಾವುದೇ ಅಂಜಿಕೆಯಿಲ್ಲದೆ ಗಟ್ಟಿಯಾಗಿ ನಿಂತಿತು ಎಂದು ಖರ್ಗೆ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಹೇಳಿಕೊಂಡಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಸುಪ್ರೀಂ ಕೋರ್ಟ್ನ ಈ ತೀರ್ಪು ವಕ್ಫ್ ಕಾಯ್ದೆ ವಿರುದ್ಧ ಹೋರಾಟ ಮಾಡಿದವರು ಅಷ್ಟೇ ಅಲ್ಲ, ಈ ಕಾಯ್ದೆಯಲ್ಲಿನ ಕೆಲ ಅಂಶಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದ ಜಂಟಿ ಸಂಸದೀಯ ಸಮಿತಿಗೂ ಸಿಕ್ಕ ಗೆಲುವಾಗಿದೆ ಎಂದರೆ, ಸುಪ್ರೀಂ ಕೋರ್ಟ್ ಆದೇಶವು ಬಿಜೆಪಿ ಸರ್ಕಾರದ ಉದ್ದೇಶವನ್ನು ಬಹಿರಂಗಪಡಿಸಿದೆ. ಇದು ಸಂವಿಧಾನವನ್ನು ನಾಶ ಮಾಡಲು ಹೊರಟಿದ್ದ ಬಿಜೆಪಿ ಸರ್ಕಾರಕ್ಕೆ ಬಿದ್ದ ಮತ್ತೊಂದು ಕಪಾಳ ಮೋಕ್ಷವಾಗಿದೆ ಎಂದು ಕಾಂಗ್ರೆಸ್ ಮತ್ತೊಬ್ಬ ಪ್ರಧಾನ ಕಾರ್ಯದರ್ಶಿ ತಿಳಿಸಿದರು.ಸ್ಟಾಲಿನ್ ಸ್ವಾಗತ: ಸುಪ್ರೀಂ ಕೋರ್ಟ್ ತೀರ್ಪನ್ನು ಸಿಪಿಎಂ, ತೃಣಮೂಲ ಕಾಂಗ್ರೆಸ್, ಡಿಎಂಕೆ ಪಕ್ಷಗಳು ಕೂಡ ಸ್ವಾಗತಿಸಿವೆ. ಈ ತೀರ್ಪು ಬಿಜೆಪಿ ಸರ್ಕಾರವು ಕಾಯ್ದೆಗೆ ತಂದಿದ್ದ ಅಸಾಂವಿಧಾನಿಕ ತಿದ್ದುಪಡಿ ರದ್ದುಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಡಿಎಂಕೆ ಮುಖ್ಯಸ್ಥ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ತಿಳಿಸಿದ್ದಾರೆ.
==ಅಂತಿಮ ತೀರ್ಪಲ್ಲಿ ಸಂಪೂರ್ಣ ನ್ಯಾಯ ಸಿಗುವ ವಿಶ್ವಾಸ: ಮುಸ್ಲಿಂ ಸಂಘಟನೆ
ಲಖನೌ: ವಕ್ಫ್ ತಿದ್ದುಪಡಿ ಕಾಯ್ದೆ ಕುರಿತ ಸುಪ್ರೀಂ ಕೋರ್ಟ್ನ ಅಂತಿಮ ತೀರ್ಪಿನಲ್ಲಿ ಸಂಪೂರ್ಣ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಉತ್ತರಪ್ರದೇಶದ ಮುಸ್ಲಿಂ ಸಂಘಟನೆಗಳು ಹೇಳಿಕೊಂಡಿವೆ.ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್ಬಿ) ಮತ್ತು ಅಖಿಲ ಭಾರತ ಶಿಯಾ ವೈಯಕ್ತಿಕ ಕಾನೂನು ಮಂಡಳಿ(ಎಐಎಸ್ಪಿಎಲ್ಬಿ)ಯು ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶವನ್ನು ಸ್ವಾಗತಿಸಿದೆ. ಸುಪ್ರೀಂ ಕೋರ್ಟ್ ಇಡೀ ಕಾಯ್ದೆಗೆ ತಡೆ ನೀಡುವ ವಿಶ್ವಾಸವಿತ್ತು. ಆದರೂ ಮಧ್ಯಂತರ ತೀರ್ಪಿನಿಂದ ಸಾಕಷ್ಟು ನೆಮ್ಮದಿ ಸಿಕ್ಕಿದೆ. ಅಂತಿಮ ತೀರ್ಪಿನಲ್ಲಿ ಪೂರ್ಣ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಎಐಎಂಪಿಎಲ್ಬಿ ಕಾರ್ಯಕಾರಿ ಸದಸ್ಯ ರಶೀದ್ ಫರಂಗಿ ಮಹಾಲಿ ತಿಳಿಸಿದ್ದಾರೆ.
ಜತೆಗೆ, ವಕ್ಫ್ ಬೋರ್ಡ್ನ ಸಿಇಒ ಆಗಿ ಮುಸ್ಲಿಂ ಸಮುದಾಯದವರನ್ನೇ ನೇಮಿಸುವಂತಾಗಬೇಕು ಎಂದೂ ಆಗ್ರಹಿಸಿದ್ದಾರೆ.