ಸಾರಾಂಶ
ಬಿಜೆಪಿ ಜೊತೆ ಮುನಿಸಿಕೊಂಡಿರುವ ಶಿವಸೇನೆ ನಾಯಕ ಏಕನಾಥ್ ಶಿಂಧೆ ಮತ್ತು ಎನ್ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಅವರಿಗೆ ಕಾಂಗ್ರೆಸ್ ಮುಖಂಡ ನಾನಾ ಪಟೋಲೆ ಮುಖ್ಯಮಂತ್ರಿ ಹುದ್ದೆಯ ಆಫರ್ ನೀಡಿದ್ದಾರೆ.
ಮುಂಬೈ: ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಮಹಾಯುತಿ ಮೈತ್ರಿಕೂಟ ಸರ್ಕಾರದಲ್ಲಿನ ಭಿನ್ನಮತದ ಲಾಭ ಪಡೆಯಲು ಇದೀಗ ಪ್ರತಿಪಕ್ಷಗಳು ಮುಂದಾಗಿವೆ. ಬಿಜೆಪಿ ಜೊತೆ ಮುನಿಸಿಕೊಂಡಿರುವ ಶಿವಸೇನೆ ನಾಯಕ ಏಕನಾಥ್ ಶಿಂಧೆ ಮತ್ತು ಎನ್ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಅವರಿಗೆ ಕಾಂಗ್ರೆಸ್ ಮುಖಂಡ ನಾನಾ ಪಟೋಲೆ ಮುಖ್ಯಮಂತ್ರಿ ಹುದ್ದೆಯ ಆಫರ್ ನೀಡಿದ್ದಾರೆ.
ನಾನಾ ಪಟೋಲೆ ಅವರ ಈ ಆಫರ್ ಮಹಾ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಆದರೆ ಅಜಿತ್ ಪವಾರ್ ಮತ್ತು ಶಿಂಧೆ ಮಾತ್ರ ಈ ಆಫರ್ ತಿರಸ್ಕರಿಸಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ನ ಇತರೆ ಮುಖಂಡರು ಮತ್ತು ಶಿವಸೇನೆಯ ಉದ್ಧವ್ ಬಣದ ಸಂಜಯ್ ರಾವುತ್ ಮಾತ್ರ ರಾಜಕೀಯದಲ್ಲಿ ಏನುಬೇಕಾದರೂ ಆಗಬಹುದು ಎಂದು ಹೇಳಿಕೊಂಡಿದ್ದಾರೆ.
ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರದಲ್ಲಿ ಶಿಂಧೆ ಮತ್ತು ಅಜಿತ್ ಪವಾರ್ ಅವರ ಸ್ಥಿತಿ ಉಸಿರುಗಟ್ಟಿಸುವಂತಿದೆ. ಒಂದು ವೇಳೆ ಅವರು ಪ್ರತಿಪಕ್ಷಗಳ ಜತೆಗೆ ಕೈಜೋಡಿಸಿದರೆ ಸರದಿ ಪ್ರಕಾರ ಸಿಎಂ ಹುದ್ದೆಗೇರಬಹುದು. ಜತೆಗೆ, ಬಿಜೆಪಿ ಯಾವತ್ತಿಗೂ ಇವರಿಬ್ಬರಿಗೂ ಸಿಎಂ ಹುದ್ದೆ ನೀಡುವುದಿಲ್ಲ ಎಂದು ಮಹಾರಾಷ್ಟ್ರ ಕಾಂಗ್ರೆಸ್ನ ಮಾಜ ಅಧ್ಯಕ್ಷರೂ ಆಗಿರುವ ಪಟೋಲೆ ತಿಳಿಸಿದ್ದಾರೆ.
ಈ ಹಿಂದೆ ಶಿಂದೆ ಸರ್ಕಾರ ಜಾರಿಗೆ ತಂದಿದ್ದ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಫಡ್ನವೀಸ್ ಸರ್ಕಾರ ಕೈಬಿಟ್ಟ ಬಳಿಕ ಇಬ್ಬರ ನಡುವಿನ ಭಿನ್ನಮತ ಹೆಚ್ಚಾಗಿದೆ ಎನ್ನಲಾಗಿದೆ.