ಉತ್ತರಪ್ರದೇಶದಲ್ಲಿ ಕಳೆದ 2 ದಿನಗಳಿಂದ ಸುರಿಯುತ್ತಿರುವ ಕಂಡು ಕೇಳರಯದ ಬಿರುಗಾಳಿ ಸಹಿತ ಭಾರೀ ಮಳೆಗೆ 111 ಮಂದಿ ಬಲಿಯಾಗಿದ್ದಾರೆ. ಸಂಭಲ್‌, ಉನ್ನಾವ್‌ ಸೇರಿ ರಾಜ್ಯದ 19 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ಜನ, ಜಾನುವಾರು ಹಾಗೂ ಬೆಳೆಗಳಿಗೆ ಭಾರೀ ಹಾನಿಯಾಗಿದೆ

ಲಖನೌ: ಉತ್ತರಪ್ರದೇಶದಲ್ಲಿ ಕಳೆದ 2 ದಿನಗಳಿಂದ ಸುರಿಯುತ್ತಿರುವ ಕಂಡು ಕೇಳರಯದ ಬಿರುಗಾಳಿ ಸಹಿತ ಭಾರೀ ಮಳೆಗೆ 111 ಮಂದಿ ಬಲಿಯಾಗಿದ್ದಾರೆ.

ಸಂಭಲ್‌, ಉನ್ನಾವ್‌ ಸೇರಿ ರಾಜ್ಯದ 19 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ಜನ, ಜಾನುವಾರು ಹಾಗೂ ಬೆಳೆಗಳಿಗೆ ಭಾರೀ ಹಾನಿಯಾಗಿದೆ. 75ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, 150ಕ್ಕೂ ಹೆಚ್ಚು ಜಾನುವಾರುಗಳು ಸಾವಿಗೀಡಾಗಿವೆ. ಹಲವು ಮಂದಿ ಅವಶೇಷಗಳಡಿ ಸಿಕ್ಕಿಹಾಕಿಕೊಂಡಿದ್ದು, ರಕ್ಷಣಾ ಕಾರ್ಯ ಚುರುಕುಗೊಳಿಸಲಾಗಿದೆ.

ಏಕಾಏಕಿ ಬುಧವಾರ ಆರಂಭವಾದ ಭಾರೀ ಗಾಳಿ ಮಳೆ ಹಾಗೂ ಸಿಡಿಲು-ಮಿಂಚಿನ ಅಬ್ಬರಕ್ಕೆ ಬಹುತೇಕ ಕಡೆ ಭಾರೀ ಗಾತ್ರದ ಮರ, ಗಿಡಗಳು ಹಾಗೂ ವಿದ್ಯುತ್‌ ಕಂಬಗಳು ಧರೆಗುರುಳಿ ವಾಹನ ಸಂಚಾರ, ವಿದ್ಯುತ್‌ ಸಂಪರ್ಕ ಅಸ್ತವ್ಯಸ್ತಗೊಂಡಿದೆ. ಹಲವು ಮನೆಗಳು, ಕಾಂಪೌಂಡ್‌ಗಳು ಕುಸಿದು ಬಿದ್ದಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಇದೆ. ಮುಖ್ಯಮಂತ್ರಿ ಆದಿತ್ಯನಾಥ್‌ ಅವರು ಜಿಲ್ಲಾಧಿಕಾರಿಗಳ ಜತೆಗೆ ಸಭೆ ನಡೆಸಿದ್ದು, ಪ್ರತಿ ಮೂರು ಗಂಟೆಗಳಿಗೊಮ್ಮೆ ಹಾನಿ ಕುರಿತು ವರದಿ ನೀಡುವಂತೆ ಆದೇಶಿಸಿದ್ದಾರೆ. ಜತೆಗೆ ಯಾವುದೇ ವಿಳಂಬ ಮಾಡದೆ ಪರಿಹಾರ ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ತಗಡಿನೊಂದಿಗೆ 50 ಅಡಿ ಎತ್ತರಕ್ಕೆ ಹಾರಿದ ವ್ಯಕ್ತಿ

ಮಳೆಯಿಂದಾಗಿ ಶೆಡ್‌ವೊಂದರ ಅಡಿ ರಕ್ಷಣೆ ಪಡೆದಿದ್ದ 50 ವರ್ಷ ಇ-ರಿಕ್ಷಾ ಚಾಲಕನೊಬ್ಬನನ್ನು ಭಾರೀ ಬಿರುಗಾಳಿಯೊಂದು 50 ಅಡಿ ಎತ್ತರಕ್ಕೆ ಹೊತ್ತೊಯ್ದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಈ ಕುರಿತ ವಿಡಿಯೋ ವೈರಲ್‌ ಆಗಿದ್ದು, ಆತನ ಜೀವ ಉಳಿದಿದ್ದೇ ಪವಾಡ ಎಂದು ಹೇಳಲಾಗುತ್ತಿದೆ.

ಬಿರುಗಾಳಿಯು ಶೆಡ್‌ ಅನ್ನು ಸಂಪೂರ್ಣವಾಗಿ ಬುಡಮೇಲು

ಬರೇಲಿಯ ಜಿಲ್ಲೆಯ ಬಾಮಿಯಾನ್‌ನ ನನ್ಹೆ ಎಂಬಾತ ಮದುವೆ ಹಾಲ್‌ಗೆ ಸಾಮಾನು ತರಲೆಂದು ಹೋಗಿದ್ದಾಗ ಭಾರೀ ಮಳೆ, ಗಾಳಿ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಆತ ತಗಡಿನ ಶೆಡ್‌ವೊಂದರ ಅಡಿ ರಕ್ಷಣೆ ಪಡೆದಿದ್ದ. ಗಾಳಿಗೆ ಎಲ್ಲಿ ಹಾರಿಹೋಗುತ್ತೇನೆಯೋ ಎಂಬ ಆತಂಕದಿಂದ ಶೆಡ್‌ಗೆ ಕಟ್ಟಲಾದ ಹಗ್ಗವನ್ನು ಆತ ಗಟ್ಟಿಯಾಗಿ ಹಿಡಿದಿದ್ದ. ಆದರೆ ಬಿರುಗಾಳಿಯು ಶೆಡ್‌ ಅನ್ನು ಸಂಪೂರ್ಣವಾಗಿ ಬುಡಮೇಲು ಮಾಡಿದೆ. ಏನಾಗುತ್ತಿದೆ ಎಂದು ಅರಿವಾಗುವ ಮೊದಲೇ ಶೆಡ್‌ಗೆ ಕಟ್ಟಿದ್ದ ಹಗ್ಗದೊಂದಿಗೆ ನನ್ಹೆ ಅವರು 50 ಅಡಿ ಎತ್ತರಕ್ಕೆ ಹಾರಲ್ಪಟ್ಟು ನಂತರ ಪಕ್ಕದ ಗದ್ದೆಗೆ ಹೋಗಿ ಬಿದ್ದಿದ್ದಾರೆ. ಘಟನೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಅವರಿಗೆ ಎರಡು ಕಡೆ ಮೂಳೆ ಮುರಿದಿವೆ.