ಮರೆತಿದ್ದ ಪತ್ನಿ ಕರೆತರಲು22 ಬೆಂಗಾವಲು ಪಡೆ ಜತೆಬಂದ ಸಚಿವ ಚೌಹಾಣ್‌!

| Published : Jul 21 2025, 12:00 AM IST

ಸಾರಾಂಶ

ರಾಜಕೀಯ ನಾಯಕರ, ಮಂತ್ರಿಗಳ ಪ್ರಯಾಣದ ಮಾರ್ಗ ಭದ್ರತೆ ಕಾರಣಕ್ಕೆ ಬದಲಾಗುವುದು ಸಾಮಾನ್ಯ. ಆದರೆ, ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಗಡಿಬಿಡಿಯಲ್ಲಿ ತಮ್ಮ ಪತ್ನಿಯನ್ನೇ ಬಿಟ್ಟುಬಂದು, ಬಳಿಕ ಅವರನ್ನು ಕರೆತರಲು 22 ಬೆಂಗಾವಲು ಪಡೆ ವಾಹನಗಳೊಂದಿಗೆ ಮರಳಿದ ಘಟನೆ ನಡೆದಿದೆ.

ನವದೆಹಲಿ: ರಾಜಕೀಯ ನಾಯಕರ, ಮಂತ್ರಿಗಳ ಪ್ರಯಾಣದ ಮಾರ್ಗ ಭದ್ರತೆ ಕಾರಣಕ್ಕೆ ಬದಲಾಗುವುದು ಸಾಮಾನ್ಯ. ಆದರೆ, ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಗಡಿಬಿಡಿಯಲ್ಲಿ ತಮ್ಮ ಪತ್ನಿಯನ್ನೇ ಬಿಟ್ಟುಬಂದು, ಬಳಿಕ ಅವರನ್ನು ಕರೆತರಲು 22 ಬೆಂಗಾವಲು ಪಡೆ ವಾಹನಗಳೊಂದಿಗೆ ಮರಳಿದ ಘಟನೆ ನಡೆದಿದೆ.

ಸಿಂಗ್‌ ಹಾಗೂ ಅವರ ಪತ್ನಿ ಸಾಧನಾ ಗುಜರಾತ್‌ ಪ್ರವಾಸದಲ್ಲಿದ್ದು, ಜುನಾಗಢದಲ್ಲಿರುವ ಅಲ್ಲಿನ ಕಡಲೆಕಾಯಿ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿದ್ದರು. ಆ ವೇಳೆ ಸಿಬ್ಬಂದಿಯನ್ನು ಭೇಟಿಯಾದ ಸಚಿವರು, ನೇರವಾಗಿ ಲಖ್‌ಪತಿ ದೀದೀಯರ ಜತೆ ಸಂವಾದಕ್ಕೆ ತೆರಳಿದ್ದರು. ಇತ್ತ ಸಾಧನಾ ಅವರು ಸಂಶೋಧನಾ ಕೇಂದ್ರದಲ್ಲೇ ಕಾಯುತ್ತಾ ಕುಳಿತಿದ್ದಾರೆ.

ರಾತ್ರಿ 8 ಗಂಟೆಗೆ ವಿಮಾನವಿದ್ದುದರಿಂದ, ಅದೇ ಗಡಿಬಿಡಿಯಲ್ಲಿ ಸಿಂಗ್‌ ರಾಜ್‌ಕೋಟ್‌ ಕಡೆ ಹೊರಟಿದ್ದಾರೆ. ಸ್ವಲ್ಪ ಸಮಯದ ಬಳಿಕ ಪತ್ನಿ ತಮ್ಮೊಂದಿಗೆ ಇಲ್ಲದಿರುವುದನ್ನು ಗಮನಿಸಿದವರು, ಗಾಡಿಯನ್ನು ಜುನಾಗಢದ ಕಡೆ ತಿರುಗಿಸಿದ್ದಾರೆ.