ಸಾರಾಂಶ
ನವದೆಹಲಿ : ಉತ್ತರಪ್ರದೇಶದ ಹಾಥ್ರಸ್ನಲ್ಲಿ ಜು.2ರಂದು 121 ಜನರ ಸಾವಿಗೆ ಕಾರಣವಾದ ಕಾಲ್ತುಳಿತಕ್ಕೆ ಜನಜಂಗುಳಿಯ ನಡುವೆ ಕೆಲವು ವ್ಯಕ್ತಿಗಳು ವಿಷಪೂರಿತ ಕ್ಯಾನ್ಗಳನ್ನು ತೆರೆದಿದ್ದೇ ಕಾರಣ ಎಂದು ಸ್ವಯಂಘೋಷಿತ ದೇವಮಾನವ ಭೋಲೆ ಬಾಬಾ ಪರ ವಕೀಲ ಎ.ಪಿ.ಸಿಂಗ್ ಹೊಸ ಆರೋಪ ಮಾಡಿದ್ದಾರೆ.
ದೆಹಲಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭೋಲೆ ಬಾಬಾ ಅವರ ಜನಪ್ರಿಯತೆ ಹೆಚ್ಚುತ್ತಿರುವುದನ್ನು ಸಹಿಸದವರಿಂದಾಗಿ ಈ ಕಾಲ್ತುಳಿತ ಸಂಭವಿಸಿದೆ ಎಂದು ದೂರಿದರು.
ವಿಷಪೂರಿತವಾದ ಕ್ಯಾನ್ಗಳನ್ನು ಹಿಡಿದು 15ರಿಂದ 16 ಜನರು ನಿಂತಿದ್ದರು. ಅವರು ಆ ಕ್ಯಾನ್ಗಳನ್ನು ತೆರೆದರು ಎಂದು ಸಾಕ್ಷಿಗಳು ನಮ್ಮನ್ನು ಸಂಪರ್ಕಿಸಿವೆ. ಮರಣೋತ್ತರ ವರದಿಗಳನ್ನೂ ಗಮನಿಸಲಾಗಿದೆ. ಗಾಯಗಳಿಂದ ಸಾವು ಸಂಭವಿಸಿಲ್ಲ. ಬದಲಾಗಿ ಉಸಿರಾಟ ಸಮಸ್ಯೆಯಿಂದಲೇ ಜನರು ಸಾವಿಗೀಡಾಗಿದ್ದಾರೆ. ಈ ರೀತಿ ಕ್ಯಾನ್ಗಳನ್ನು ತೆರೆದವರು ಪರಾರಿಯಾಗಲು ವಾಹನಗಳನ್ನು ಕೂಡ ನಿಲ್ಲಿಸಲಾಗಿತ್ತು. ಇದಕ್ಕೆ ನಮ್ಮ ಬಳಿ ದಾಖಲೆ ಇದೆ. ಅದನ್ನು ಸಲ್ಲಿಸುತ್ತೇವೆ ಎಂದು ಹೇಳಿದರು.
ನಮಗೆ ಮಾಹಿತಿ ನೀಡಿರುವ ಸಾಕ್ಷಿಗಳು ಬಹಿರಂಗವಾಗಿ ಕಾಣಿಸಿಕೊಳ್ಳಲು ಇಚ್ಛಿಸುತ್ತಿಲ್ಲ. ಅವರಿಗೆ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.